Friday, December 15, 2017

ಐಸಲೇ ಕುಮಾರವ್ಯಾಸ !! - ೧೦೭ -





ಐಸಲೇ ಕುಮಾರವ್ಯಾಸ !!                  -  ೧೦೭  -

ಭೀಷ್ಮ ಪ ೬-೪೫
‘ಕಳುಹಿ ಕಳೆವುದು ಖಾತಿಯನು,
ನೀನುಳುಹಿ ಕೊಂಬುದು ತೇಜವನು
ದಿಟ ಕೊಲುವ ಮನವೇ? ಬಿಸುಡು ಚಕ್ರವನೆನ್ನ ಕಾಯದಲಿ
ಅಳುಕಿ ರೋಮವು ಹರಿದುದಾದೊಡೆ
ಬಳಿಕ ನಾ ಡಿಂಗರಿಗನಲ್ಲ
ಈ ಕಳಕಳಕೆ ನಾನಂಜುವೆನೇ ದೇವ ಮರಳೆಂದ..’
( ಖಾತಿ- ಕೋಪ; ಉಳುಹು-ಉಳಿಸಿಕೋ; ಕಾಯ-ಶರೀರ; ಡಿಂಗರಿಗ- ದಾಸ,ಭಕ್ತ; ಕಳಕಳ-ಗಲಭೆ)
‘ ಶ್ರೀಹರಿ! ದಯಮಾಡಿ ಕೋಪವನ್ನು ನೂಕು. ನಿನ್ನ ತೇಜಸ್ಸು, ಘನತೆಯನ್ನು ಕಾಪಾಡಿಕೊ. ಹಾಗೊಮ್ಮೆ ನಿನಗೆ ನನ್ನನ್ನು ಕೊಲ್ಲಲೇಬೇಕೆಂಬ ಮನಸ್ಸಿದೆಯೇನು? ಚಕ್ರವನ್ನು ಪ್ರಯೋಗಿಸಿಯೇ ಬಿಡು. ಅದೂ ಆಗಿಹೋಗಲಿ. ಚಕ್ರಪ್ರಯೋಗದಿಂದ ನನ್ನ ಶರೀರದ ಒಂದು ರೋಮ ತುಂಡಾದರೂ ಸರಿ, ನಾನು ನಿನ್ನ ದಾಸನಲ್ಲವೆಂದೇ ಅರ್ಥ! ಪ್ರಯೋಗಿಸು, ಈ ಅಬ್ಬರಕ್ಕೆಲ್ಲಾ ನಾನುಹೆದರುವವನಲ್ಲ..,’
ಅನೇಕ ವಿಧ್ವಾಂಸರು ಮೆಚ್ಚಿಕೊಂಡ ಪದ್ಯ ಇದು.
ಭೀಷ್ಮನಿಗೂ ಶ್ರೀಕೃಷ್ಣನಿಗೂ ಭಯಂಕರ ಯಧ್ಧವಾಗಬಹುದೇನೋ ಎಂದು ಎಲ್ಲರೂ ಭಾವಿಸಿ ಭಯಗೊಂಡರೆ, ಇಡೀ ಸನ್ನಿವೇಶವನ್ನು ನಾಟಕೀಯವಾಗಿ ಪರಿವರ್ತಿಸುವ ಭೀಷ್ಮನ ಮಾತುಗಳು ಅತ್ಯಂತ ಮನೋಜ್ಞ! ಈಗ ಯುಧ್ಧ ಹರಿಗೂ ಅವನ ನಾಮಕ್ಕೂ.
ನಿನ್ನ ನಾಮವನ್ನು ಜಪಿಸಿದ್ದು, ಅರಾಧಿಸಿದ್ದು ವ್ಯರ್ಥ ಎಂದು ಸಿದ್ಧವಾಗುವುದಾದರೆ ಆಗಲಿ. ಶರೀರಕ್ಕೆ ತೊಂದರೆಯಾಗುವುದಿರಲಿ, ಒಂದು ರೋಮಕ್ಕೆ ಆಘಾತವಾದರೂ ಸರಿ ನಾನು ಭಕ್ತನಲ್ಲ.ಅಂಥ ಆತ್ಮವಿಶ್ವಾಸ, ಭಕ್ತಿಯಲ್ಲಿರುವ ಭರವಸೆ!
ಹರಿಗೂ ಇಬ್ಬಂದಿತನ .ಒಂದೆಡೆ ಆತ್ಮಗೌರವ ಮತ್ತೊಂದೆಡೆ ಭೀಷ್ಮ ಹಾಕಿರುವ ಪ್ರೇಮಾಭಕ್ತಿಯ ಸವಾಲು.ಕೋಪದ ಮೂಲವನ್ನೇ ಭೀಷ್ಮ ತನ್ನ ಭಕ್ತಿಯ ಬಲದಿಂದ ಅಲುಗಾಡಿಸಿಬಿಟ್ಟ. ಕಠೋರವಾದ ಸವಾಲಿನ ನಂತರವೂ ತನ್ನ ಆರಾಧ್ಯದೈವದ ಘನತೆಗೆ ಧಕ್ಕೆ ತರದಂತೆ ಕಡೆಯಲ್ಲೊಂದು  ನಮ್ರವಾದ ಬೇಡಿಕೆ ಸಹಾ. ‘ದೇವ ದಯಮಾಡಿ ಮರಳಿ ಹೋಗು’
ಇದು ಕುಮಾರವ್ಯಾಸನ ಭಾಷೆಯ ಪಕ್ವತೆ; ಸಿದ್ಧಿ.

ಕುಮಾರವ್ಯಾಸ ಪ್ರತಿಷ್ಠಾನ
೧೪/೧೨/೨೦೧೭



೧೪/೧೨/೨೦೧೭