ಐಸಲೇ ಕುಮಾರವ್ಯಾಸ! -೯೪-
ಆದಿ ಪ ೨೦-೬೩
‘ ಉರಿಯ ಗಂಟಲನೊದೆದು
ಫಣಿ ಮಿಕ್ಕುರವಣಿಸೆ,
ಹಾ,ಹಾ,ಧನಂಜಯ,ಹರಿವುತಿದೆ ಹಾವೊಂದು
ಹೋದುದು ಬಾಯ ತುತ್ತೆನಗೆ..,
ತರಿಸಿಕೊಡು, ಶರವೇಢೆಯನು ವಿಸ್ತರಿಸು ವಹಿಲದೊಳು
ಎನಲು ವೈಶ್ವಾನರನ ಮಾತಿಗೆ ನಗುತ
ಕೊಂಡನು ವಿಜಯ ಗಾಂಢಿವವ..,’
ಖಾಂಡವ ದಹನ ನಡೆಯುತ್ತಿದೆ. ಅಗ್ನಿ ಇಡೀ ಕಾಡನ್ನು ಭಕ್ಷಿಸುತ್ತಿದ್ದಾನೆ.
ಅಗ್ನಿಯ ಆಹಾರ ಯಾವುದೂ ತಪ್ಪ್ಪಿಹೋಗದಂತೆ ಕೃಷ್ಣಾರ್ಜುನರು ಕಾವಲಾಗಿದ್ದಾರೆ.ಒಂದು ನಾಟಕೀಯ ಬೆಳವಣಿಗೆ ನಡೆಯಿತು!
‘ಅಗ್ನಿಯ ಕೆನ್ನಾಲಿಗೆಗೆ ಎಲ್ಲಾ
ಪ್ರಾಣಿಗಳೂ ಸಿಕ್ಕಿ ಆಹುತಿಯಾಗುತ್ತಿದ್ದರೆ ಉರಿಯುತ್ತಿರುವ ಮೈಯೊಂದಿಗೆ ಅಶ್ವಸೇನ ಎಂಬ ಸರ್ಪ ತಪ್ಪಿಸಿಕೊಳ್ಳಲು
ಆಗಸಕ್ಕೆ ಚಿಮ್ಮಿತು! ಅಗ್ನಿ ಅರ್ಜುನನನ್ನು ಕೂಗಿ ಕರೆದ; ಅರ್ಜುನಾ, ಅದೋ ನೋಡು, ಒಂದು ಹಾವು ನನ್ನ
ಬಾಯಿಂದ ತಪ್ಪಿಸಿಕೊಂಡು ಹಾರುತ್ತಿದೆ! ನನ್ನ ಬಾಯಿಗೆ ಬಂದ ತುತ್ತು ಹಾರಿ
ಹೋಗುವುದೆಂದರೇನು? ನಿನ್ನ ಬಾಣ ಪ್ರಯೋಗದಿಂದ ಆ ತುತ್ತು ಕೈ ತಪ್ಪಿ ಹೋಗದಂತೆ
ಮಾಡು’
ಎಂಥಾ ಸೂಕ್ಷ್ಮ ದೃಷ್ಟಿ !ಅಗ್ನಿಯ ಆಗ್ರಹವನ್ನು ಕಂಡ ಅರ್ಜುನ ನಗುತ್ತಾ ಧನುಸ್ಸಿಗೆ
ಬಾಣವನ್ನು ಹೂಡಿದ! ಆ ಸರ್ಪದ ಕೊರಳನ್ನು ಕತ್ತರಿಸಿದ.ಆದರೆ ಆಶ್ಚರ್ಯ,ಕತ್ತರಿಸಿದ ಮೈ ಕಾಡಿನ ಬೆಂಕಿಯಲ್ಲಿ ಬಿದ್ದರೆ
ತಲೆ ಜೀವದೊಂದಿಗೆ ಹಾರಿಹೋಯಿತು.ಅಷ್ಟೇ ಅಲ್ಲ, ಅರ್ಜುನನಿಗೆ ಕೂಗಿ ಹೇಳಿತು, ಅರ್ಜುನಾ ತಪ್ಪು ಮಾಡಿದೆ!
ಮರೆಯಬೇಡ,ನನ್ನ ಕಾರಣದಿಂದಲೇ ನಿನಗೂ ಮರಣ! ಅನಂತರ ಕರ್ಣನ ಬತ್ತಳಿಕೆಯಲ್ಲಿ ಅಸ್ತ್ರವಾಗಿ ಸೇರಿದ ಕಥೆ ನಮಗೆ ತಿಳಿದಿದೆ. ಮಾತುಗಾರಿಕೆಯ
ಸೊಗಸು ನೋಡಿ
ಕುಮಾರವ್ಯಾಸ ಪ್ರತಿಷ್ಠಾನ ೨೮/೬/೨೦೧೭