Monday, June 26, 2017

ಐಸಲೇ ಕುಮಾರವ್ಯಾಸ! -೯೩-



ಐಸಲೇ ಕುಮಾರವ್ಯಾಸ!                           -೯೩-
ಆದಿ ಪ ೨೦-೬೧

ಹೆಡೆಯ ಮಣಿಗಳ ಕಂಡು
ಸೂಸಿದ ಕಿಡಿಗಳಹಹಾ ಎನುತ ಶಿರಗಳ ಕೊಡಹಿ
ಮರುಗಿದರುರಗಿಯರು ಮರಿಗಳಿಗೆ ಮೈ ಚಾಚಿ
ಕಡುಹೊಗೆಯ ಕೇಸುರಿಯ ಕಿಡಿಗಳ ಗಡಣದಲಿ
ಕೌರೆದ್ದು ಮೈಗಳ ಕೊಡಹಿ ಬಿಸುಸುಯ್ಯುತ್ತ
ಮುಗ್ಗಿದವಹಿಗಳುರಿಯೊಳಗೆ..,’

(ಉರಗಿಯರು-ಸರ್ಪಿಣಿಯರು; ಅಹಿ- ಸರ್ಪ; ಕೌರೆದ್ದು-ಶಾಖದಿಂದ ತಲ್ಲಣಿಸು)

ಖಾಂಡವವನ್ನು ಆವರಿಸಿದ ಅಗ್ನಿ ಹುತ್ತಗಳ ಒಳಗೂ ಪ್ರವೇಶಿಸಿ ತನ್ನ ನಾಲಿಗೆಗಳನ್ನು ಚಾಚಿದನಷ್ಟೆ? ಬಿಲಗಳ ಒಳಗೂ ಕಪ್ಪಾದ ಹೊಗೆ, ಬೆಂಕಿಯ ಕಿಡಿಗಳು ವ್ಯಾಪಿಸಿದವು.

ಕವಿ ಹುತ್ತಗಳೊಳಗಿದ್ದ ಸರ್ಪಸಂಸಾರಗಳಲ್ಲಿ ಬೆಂಕಿಯಿಂದ ಉಂಟಾದ ಕೋಲಾಹಲವನ್ನು ಸೂಕ್ಷ್ಮವಾಗಿ ಗಮನಿಸಿ ಚಿತ್ರಿಸುತ್ತಾನೆ;

ಹುತ್ತದೊಳಗಿದ್ದ ಸರ್ಪಿಣಿಯರು ಅಗ್ನಿಯ ಕಿಡಿಗಳನ್ನು ಕಂಡು ಎಷ್ಟುದಿಗಿಲುಗೊಂಡರು ಎಂದರೆ ಮರಿಗಳ ಹೆಡೆಯಲ್ಲಿದ್ದ ಮಣಿಗಳನ್ನು ಸಹಾ ಬೆಂಕಿಯ ಕಿಡಿಗಳಿರಬೇಕೆಂದು ಭ್ರಮಿಸಿ ಅಯ್ಯೋ! ಬೆಂಕಿಯ ಕಿಡಿ ಮರಿಗಳ ತಲೆ ಸುಟ್ಟೀತು ಎಂದು ಅಪ್ಪಿಕೊಂಡು ತಲೆಗಳನ್ನು ಕೊಡವಿದರು. ಕ್ರೂರ ಜಂತುವಾದರೂ ತಾಯ ಮಮತೆ ತಾನೆ?ತಮ್ಮ ಮೈಗಳನ್ನು ಚಾಚಿ ಮರಿಗಳನ್ನು ಬೆಂಕಿಯಿಂದ ರಕ್ಷಿಸಲು ಯತ್ನಿಸಿದವು
ಆದರೆ ದಟ್ಟವಾದ ಹೊಗೆಯಿಂದ ಆವೃತವಾದ ಅಗ್ನಿ ಬಿಟ್ಟೀತೇ? ಮೈಗಳನ್ನು ಕೊಡವುತ್ತಾ,  ನುಲಿಯುತ್ತಾ ಬಿಸುಸುಯ್ಯುತ್ತಾ ಬೆಂಕಿಯ ಉರಿಯಲ್ಲಿ ಬಿದ್ದು ದಗ್ಧವಾದವು.

ರವಿ ಕಾಣದ್ದನ್ನು ಕವಿ ಕಂಡನಂತೆ! ಕಾಡನ್ನು ದಾವಾಗ್ನಿ ನಾಶ ಮಾಡುವಾಗ ಹಾವಿನ ಬಿಲಗಳಲ್ಲಿ, ಹುತ್ತಗಳಲ್ಲಿ ಉಂಟಾದ ಪರಿಣಾಮಗಳನ್ನು ಸೂಕ್ಷ್ಮಮತಿಯಲ್ಲದ ಕವಿ ಹೇಳಲಾದೀತೇ?

ಕುಮಾರವ್ಯಾಸ ಪ್ರತಿಷ್ಠಾನ
೨೫/೦೬/೨೦೧೭

No comments:

Post a Comment