Friday, March 31, 2017

ಐಸಲೇ ಕುಮಾರವ್ಯಾಸ! -೮೪-



ಐಸಲೇ ಕುಮಾರವ್ಯಾಸ!                           --
ಆದಿ ಪ ೧೫-
 ಸಭಿಕರ ಪ್ರತಿಕ್ರಿಯೆ ಅಷ್ಟಕ್ಕೇ ನಿಲ್ಲಲಿಲ್ಲ!

ಕುಮಾರವ್ಯಾಸ ವಿನೋದವಾಗಿ,ವಿವರವಾಗಿ ಚಿತ್ರಿಸುತ್ತಾನೆ.ಕೆಲವರು ಹೋಗಲೇಬೇಡ ಎಂದು ಜರಿದರು. ಕೆಲವರು ಅವನ ಹಣೆಬರಹ, ಅನುಭವಿಸಲಿ ಎಂದರು.ಕೆಲವರು ಬ್ರಾಹ್ಮಣರ ಸಭೆಗೆ ಅವಮರ್ಯಾದೆ ಎಂದರು.ಕೆಲವರು ತಪ್ಪೇನು? ಪ್ರಯತ್ನಿಸಲಿ ಎಂದರೆ ಕೆಲವು ಸೂಕ್ಷ್ಮಗ್ರಾಹಿಗಳು ಅವನ ಆಕಾರ ನೋಡಿರಿ ,ಮುಖದ ತೇಜಸ್ಸು ನೋಡಿದರೆ ಜಯಶಾಲಿಯಾಗುವುದು ಖಚಿತ ಎಂದರು.

ಒಂದೆಡೆ ಅಪಮಾನ ಮತ್ತೊಂದೆಡೆ ಅಹಂಕಾರದಿಂದ ಕುದಿಯುತ್ತಿದ್ದ ಅರಸರು,ಈ ಒಣ ಹಾರುವ ಬಿಲ್ಲನ್ನು ಎತ್ತುತ್ತಾನೋ? ಅದೇನು ಕೃಷ್ಣಾಜಿನವೆ? ಸಾಲಿಗ್ರಾಮವೆ?ದರ್ಭೆಯ ಗಂಟೇ?ನೆನೆದ ಎಳ್ಳಿನ ಕಾಳೇ?( ಬ್ರಾಹ್ಮಣರು ಪೂಜಾದಿ ಕರ್ಮಗಳಲ್ಲಿ ಬಳಸುವ ವಸ್ತುಗಳು) ದ್ರೌಪದಿಯ ಸೌಭಾಗ್ಯ ಎಷ್ಟು ಘನವಾಗಿದೆ! ಎಂದು ತಮ್ಮತಮ್ಮಲ್ಲೇ ಆಡಿಕೊಂಡರು.

ನಡೆದು ಬರುತ್ತಿರುವ ಈ ಬ್ರಾಹ್ಮಣ ವೀರನನ್ನು ಕವಿ ವರ್ಣಿಸುವುದನ್ನು ನೋಡಿ;

‘ತೊಟ್ಟ ಹೊಸ ಯಜ್ಞೋಪವೀತದ,
ಮಟ್ಟಿ ನೊಸಲಲಿ,ಕುಶೆಯ ಕರಡಿಗೆ ಕಟ್ಟಿಯಿರುಕಿದ ಕಕ್ಷೆ,
ಬೆರಳಲಿ ಮುರಿದ ದರ್ಭೆಗಳ
ಉಟ್ಟ ಬಾಸರ ಬಳಲುಗಚ್ಚೆಯ
ಅಟ್ಟಹಾಸದ ಜನದ ನಗೆಗಳ
ನಟ್ಟವಿಗನೋಸರಿಸಿ ಸಭೆಯಲಿ
ಮೆಲ್ಲನೈತಂದ’

ಹೊಸ ಜನಿವಾರ ಹಾಕಿದ್ದಾನೆ.ಹಣೆಯಲ್ಲಿ ವಿಭೂತಿ ರಾರಾಜಿಸುತ್ತಿದೆ.ದರ್ಭೆಯ ಗಂಟು ಕಂಕುಳಲ್ಲಿಯೇ ಇದೆ.ಬೆರಳಲ್ಲಿ ದರ್ಭೆಯ ಪವಿತ್ರ ಇದೆ! ಶುಭ್ರವಾದ ಕಚ್ಚೆ ಪಂಚೆ ತುಸು ಸಡಿಲಾಗಿದೆ.ಅದನ್ನು ಸರಿಮಾಡಿಕೊಳ್ಳುತ್ತಾ ,ಜನರ ನಗೆಯನ್ನು ನೋಡುತ್ತ, ಅಂಜುತ್ತ ಅಂಜುತ್ತಲೇ ಈ ನಾಟಕಕಾರ ನಡೆದು ಬಂದ!

ಸಾಧಾರಣ ವಿಪ್ರನಂತೆ ಅರ್ಜುನ ಜನರಿಗೆ ಮೋಜನ್ನೂ ನೀಡುತ್ತಿದ್ದಾನೆ.ಇಡೀ ಸಭೆ ಹಾಸ್ಯರಸದಲ್ಲಿ ಮುಳುಗಿಹೋಗಿದೆ.

ಕುಮಾರವ್ಯಾಸ ಪ್ರತಿಷ್ಠಾನ
೩೧/೩/೨೦೧೭

Monday, March 27, 2017



ಐಸಲೇ ಕುಮಾರವ್ಯಾಸ!                           -೮೩-
ಆದಿ ಪ ೧೫-೧೦


‘ ಏನು ಸಿದ್ಧಿಯುಪಾಧ್ಯರೆದ್ದಿರಿ? ಇದೇನು ಧನುವಿಂಗಲ್ಲಲೇ?
ತಾನೇನು ಮನದಂಘವಣೆ? ಬಯಸಿದಿರೇ ನಿತಂಬಿನಿಯ?
ವೈನತೇಯನ ವಿಘಡಿಸಿದ ವಿಷವೇನು ಸದರವೋ ಹಾವಡಿಗರಿಗೆ?
ಇದೇನು ನಿಮ್ಮುತ್ಸಾಹ? ಎಂದುದು ದೂರ್ತ ವಟುನಿಕರ..’

ಘೋಷಣೆಯನ್ನು ಕೇಳಿದ ಯುಧಿಷ್ಠಿರ ಅರ್ಜುನನಿಗೆ ಸನ್ನೆ ಮಾಡಿದ. ಅರ್ಜುನ ಮೆಲ್ಲನೆ ಎದ್ದ!

ಕ್ಷತ್ರಿಯರನ್ನು ಕಂಗೆಡಿಸಿದ ಧನುಸ್ಸನ್ನು ಪರೀಕ್ಷಿಸಲು ಓರ್ವ ಬ್ರಾಹ್ಮಣ ಮುಂದಾಗಬಹುದೆ? ಒಂದೊಂದು ಗುಂಪಿನಲ್ಲಿಯೂ ಬಗೆಬಗೆಯ ಪ್ರತಿಕ್ರಿಯೆ! ಮೇಲಿನದು ಬ್ರಾಹ್ಮಣರ ವಟುಗಳದ್ದು;

‘ಏನಿದು ಗುರುಗಳೇ?, ತಾವು ಎದ್ದಿರಿ? ಧನುವಿಗಾಗಿ ಅಲ್ಲ ತಾನೆ? ಏನು ನಿಮ್ಮ ಅಪೇಕ್ಷೆ? ಸುಂದರಿಯಾದ ಹೆಣ್ಣನ್ನು ನೀವೂ ಬಯಸಿದಿರೇನು?
ಗರುಡನನ್ನೇ ಕಂಗೆಡಿಸಿದ ಸರ್ಪದ ವಿಷ ಹಾವಾಡಿಗರಿಗೆ ಸದರವೇನು? ಇದೆಂಥಾ ಉತ್ಸಾಹ ನಿಮ್ಮದು? ಬಯಸುವುದಕ್ಕೂ ಒಂದು ಮಿತಿ ಇರಬೇಕಲ್ಲವೆ?’


ಎಲ್ಲಾ ಸಮೂಹದಲ್ಲೂ ಕಾಲೆಳೆಯುವವರು ಇರುತ್ತಾರಲ್ಲವೆ? ಅರ್ಜುನನನ್ನು ಬ್ರಾಹ್ಮಣ ವಟುಗಳು ವಿಡಂಬಿಸದೇ ಇರುತ್ತಾರೆಯೆ? ಅತ್ಯಂತ ಸಹಜವಾಗಿ ಆಡುಮಾತುಗಳಲ್ಲಿ ಕುಮಾರವ್ಯಾಸ ಅದನ್ನು ಹಿಡಿದಿಟ್ಟಿದ್ದಾನೆ.’ವೈನತೇಯನ ವಿಘಡಿಸಿದ ವಿಷ…’ ಕವಿಯ ಸಶಕ್ತ ಅಭಿವ್ಯಕ್ತಿಗೆ, ರೂಪಕ ಶಕ್ತಿಗೆ ಒಂದು ಉತ್ತಮ ನಿದರ್ಶನ.ಕ್ಷತ್ರಿಯರನ್ನು ತಲ್ಲಣಗೊಳಿಸಿದ ಧನುಸ್ಸು ನಿಮಗೆ ಅಗ್ಗವಾಗಿ ಹೋಯಿತೇನು?

 ಮತ್ತೊಮ್ಮೆ ಓದಿ ನೋಡಿ ಕವಿಯ ಮಾತಿನ ಶಕ್ತಿ ಹೇಗಿದೆ!


ಕುಮಾರವ್ಯಾಸಪ್ರತಿಷ್ಠಾನ
೨೭/೩/೨೦೧೭

Thursday, March 23, 2017



ಐಸಲೇ ಕುಮಾರವ್ಯಾಸ!                           -೮೩-
ಆದಿ ಪ ೧೫-

ದ್ರುಪದ ವ್ಯಾಕುಲಗೊಂಡ.ಸೌಂದರ್ಯದಲ್ಲಿ ಯಾರೂ ದ್ರೌಪದಿಯನ್ನು ಮೆಚ್ಚಿಸಲಿಲ್ಲ. ಬಿಲ್ಲು ಎಲ್ಲಾ ವೀರರನ್ನೂ ಅಪಮಾನಿಸಿ ಕಳಿಸಿತು. ಮಗಳಿಗೆ ಏನು ಗತಿ? ಯಾಕಾದರೂ ಈ ಸ್ವಯಂವರವನ್ನು ಏರ್ಪಡಿಸಿದೆನೋ!

ದ್ರೌಪದಿಯ ಅಣ್ಣ ದೃಷ್ಟದ್ಯುಮ್ನ ಯೋಚಿಸಿದ.ರಾಜರುಗಳು ಪೊಳ್ಳೆನಿಸಿದರು. ಆದರೆದಕ್ಷಿಣೆಯ ಹಾರುವ ಜನವಿದೆ ಸಮುದ್ರಕೆ ಪಡಿ ಸಮುದ್ರವೆನೆ’( ಸಮುದ್ರಕ್ಕೆ ಸಾಟಿಯಾಗುವಷ್ಟು ಜನ ಬ್ರಾಹ್ಮಣರಿದ್ದಾರಲ್ಲ ದಕ್ಷಿಣೆಗಾಗಿ ಬಂದವರು!) ಅವರಲ್ಲಿ ಯಾರಾದರೂ ಯತ್ನಿಸಲಿ; ಹಾಗೇ ಘೋಷಿಸಿ ಎಂದ


ಸರಿ ಘೋಷಣೆಯಾಯಿತು! ಬ್ರಾಹ್ಮಣರೂ ಸಹಾ ಪ್ರಯತ್ನಿಸಲು ಅವಕಾಶವಿದೆ! ಯಾಕೆಂದರೆ ಕ್ಷತ್ರಿಯ ಕನ್ಯೆಗೆ ಕ್ಷತ್ರಿಯ ವರ ದೊರಕದ ಪಕ್ಷದಲ್ಲಿ ಬ್ರಾಹ್ಮಣರಿಗೆ ಕೊಡಲು ಧರ್ಮಸಮ್ಮತಿಯಿದೆ.


ನೆರೆದಿದ್ದ ವಿಪ್ರ ಸಮುದಾಯದಲ್ಲಿ ವಿಧವಿಧದ ಪ್ರತಿಕ್ರಿಯೆ. ನಾವೆತ್ತ, ಧನುವೆತ್ತ? ನಮಗೆ ಬಂದ ದಕ್ಷಿಣೆ, ಭೋಜನ ಸಾಕು.ನಮ್ಮನ್ನು ಬೇಕಾದರೆ ಪಾಂಡಿತ್ಯದಲ್ಲಿ, ವೇದದಲ್ಲಿ,ತರ್ಕ, ವ್ಯಾಕರಣಗಳಲ್ಲಿ ಪರೀಕ್ಷಿಸಲಿ
ವೈದ್ಯ, ಕಾವ್ಯ, ಮಂತ್ರ, ತಂತ್ರ ಯಾವುದೂ ಸರಿ. ಆದರೆ ಧನುರ್ವಿದ್ಯೆ ನಮ್ಮ ಕ್ಷೇತ್ರವಲ್ಲವಲ್ಲ…,’


ಆದರೆ ಪೃಥ್ವಿ ಬಂಜೆಯಲ್ಲ! ಈ ಎಲ್ಲಾ ಏರ್ಪಾಡುಗಳೂ ಯಾವ ಧೀರನಿಗಾಗಿ ನಿಶ್ಚಿತವಾಗಿವೆಯೋ ಅವನ ಪ್ರವೇಶಕ್ಕೆ ಇದು ಸೂಕ್ತ ಸಮಯ ತಾನೇ? ರಾಜ ಮಹಾರಾಜರ ದರ್ಪ,ವೈಭವ ಕಡೆಗೆ ಗರ್ವಭಂಗ ಮುಂತಾದ ಎಲ್ಲಾ ವಿದ್ಯಮಾನಗಳಿಗೂ ಸಾಕ್ಷಿಯಾಗಿ ಬ್ರಾಹ್ಮಣರ ಸಾಲಿನಲ್ಲಿ ಕುಳಿತು ನೋಡುತ್ತಿದ್ದ ಧರ್ಮರಾಯನನ್ನು ಕುಮಾರವ್ಯಾಸ ಪರಿಚಯಿಸುತ್ತಾನೆ,

ಹೇಗೆ ಗೊತ್ತೇನು?

ರಸದ ಹೊರಲೇಪದಲಿ ಹುದುಗಿದ ಮಿಸುನಿಯಂತಿರೆ,
ಜೀವ ಭಾವ ಪ್ರಸರದೊಳಗವಲಂಬಿಸಿದ
ಪರಮಾತ್ಮನಂದದಲಿ,
ಎಸೆವ ವಿಪ್ರಾಕಾರದಲಿ ರಂಜಿಸುವ ಭೂಪತಿ
ತತ್ಸಭಾಸದ್ವಿಸರ ಮಧ್ಯದೊಳಿದ್ದು
ಕೇಳಿದನೀ ಮಹಾಧ್ವನಿಯ.,’

(ಮಿಸುನಿ- ಚಿನ್ನ; ಸದ್ವಿಸರು- ಬ್ರಾಹ್ಮಣರು)


ಹೊರಗೆ ರಸದ ಲೇಪ ಹಾಕಿದ ಅಪ್ಪಟ ಬಂಗಾರದಂತೆ,ಜೀವಿಗಳ ಶರೀರದಲ್ಲಿ ವ್ಯಾಪಿಸಿಕೊಂಡು ಜೀವನಂತೆಯೇ ತೋರುವ ಪರಮಾತ್ಮನಂತೆ, ಬ್ರಾಹ್ಮಣರ ಗುಂಪಿನಲ್ಲಿ ವಿಪ್ರವೇಶದಲ್ಲಿ ಕುಳಿತಿದ್ದ ಧರ್ಮರಾಯ, ದ್ರುಪದನ ಸೇವಕರು ಮಾಡಿದ ಉದ್ಘೋಷಣೆಯನ್ನು ಕೇಳಿದ..,’


ಸಭೆಯಲ್ಲಿ ಯಾವ ವಿಶೇಷ ಗೌರವವೂ ಇಲ್ಲದೆ ಬ್ರಾಹ್ಮಣರಲ್ಲಿ ಒಬ್ಬನಾಗಿ ಕುಳಿತಿದ್ದ ಯುಧಿಷ್ಠಿರನಿಗೆ ಕುಮಾರವ್ಯಾಸ ಶ್ರೇಷ್ಠವಾದ ಉಪಮಾನಗಳನ್ನು ಬಳಸುತ್ತಾನೆ.ರಸದ ಲೇಪ ಇದ್ದಾಗ ಚಿನ್ನದ ನೈಜ ಹೊಳಪು ತೋರದು. ಜೀವಿಗಳ ಒಡಲಲ್ಲಿ ಇರುವ ಭಗವಂತ ಜೀವಿಯೇ ಆಗಿ ಹೋಗಿರುತ್ತಾನೆ.ಅವನ ದೈವಿಕತೆ ಗೋಚರವಾಗಲು ತಕ್ಕ ಸಂದರ್ಭ,ತಿಳಿವು ಆವಶ್ಯಕ.

ದರ್ಪ, ಅಹಂಕಾರ, ವೈಭವ, ಒಣಜಂಭವೇ ಮೈವೆತ್ತಂತೆ ಇದ್ದ ಅರಸುಗಳ ಮಧ್ಯದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಕುಳಿತಿದ್ದ ಧರ್ಮ,ನೀತಿ ಮೈವೆತ್ತಂತಿದ್ದ ಧರ್ಮರಾಯ ನಿಜಕ್ಕೂ ಅಪ್ಪಟ ಚಿನ್ನವೇ!


ವಿಪ್ರರ ನಡುವೆ ಇದ್ದ ಯುಧಿಷ್ಠಿರ ಘೊಷಣೆಗೆ ಸ್ಪಂದಿಸುವುದರೊಂದಿಗೆ ಪ್ರಸಂಗಕ್ಕೆ ಸ್ವಾರಸ್ಯಕರ ತಿರುವು ಬರುತ್ತದೆ!


ಕುಮಾರವ್ಯಾಸ ಪ್ರತಿಷ್ಠಾನ
೨೩/೩/೨೦೧೭