ಐಸಲೇ ಕುಮಾರವ್ಯಾಸ! -೮೭-
ಆದಿ ಪ ೧೫-೩೯
ಅರಸರಿಂದ ಅಸಾಧ್ಯವಾದದ್ದನ್ನು ಒಬ್ಬ ಬ್ರಾಹ್ಮಣ
ಸಾಧಿಸಿ ದ್ರೌಪದಿಯನ್ನು ವರಿಸಿದ್ದು ಕ್ಷತ್ರಿಯರಿಗೆ ನುಂಗಲಾರದ ತುತ್ತಾಯಿತು. ಆ ಅಸಮಾಧಾನ ಮೊದಲು
ಪ್ರಕಟವಾದದ್ದು ಅಭಿಮಾನಿಯಾದ ದುರ್ಯೋಧನನ ಮೂಲಕ.
ನೆರೆದಿದ್ದ ಎಲ್ಲಾ ವೀರರುಗಳನ್ನೂ ಕೋಪದಿಂದ ಹಂಗಿಸುತ್ತಾ
ಅವನು ಕೂಗಾಡಿದ ರೀತಿಯನ್ನು ಕುಮಾರವ್ಯಾಸನ ಮಾತಿನಲ್ಲೇ ಕೇಳಿಃ
‘ಹಳೆಯ ಹುಲು ಧನುವಿದನು ಹಾರುವ ಸೆಳೆದ
ಗಡ,
ಕೌಳಿಕದ ಯಂತ್ರವ ಗೆಲಿದ ಗಡ,
ಗರುವಾಯಿಗೆಡಿಸಿದ ಗಡ ಮಹೀಶ್ವರರ
ನಳಿನ ಮುಖಿ ಹಾಯ್ಕಿದಳು ಗಡ ತಿರುಕುಳಿಯ
ಕೊರಳಲಿ
ದಂಡೆಯನು
ನೀವೊಲಿದು ಮದುವೆಯ ಮಾಡಿಯೆಂದನು
ಬೈದು ಭೂಮಿಪರ..
ನಿಮ್ಮಯ ಹೆಂಡಿರನು ಬಳುವಳಿಯ ಕೊಡಿ
ಹಾರುವನ ಹೆಂಡತಿಗೆ..’
(ಕೌಳಿಕ-ಮೋಸ; ಗರುವಾಯಿಗೆಡಿಸು-ಭಂಗಿಸು;ತಿರುಕುಳಿ-ಭಿಕ್ಷುಕ;
ಗಡ- ಅಲ್ಲವೇ? )
‘ಹಳೆಯ ಹುಲ್ಲುಕಡ್ಡಿಯ ಧನುಸ್ಸೊಂದನ್ನು ಈ ಹಾರುವ
ಸೆಳೆದನಂತೆ! ಯಾರೂ ಗೆಲ್ಲಲಾರದ ಈ ಮೋಸದ ಯಂತ್ರವನ್ನು ಗೆದ್ದನಂತೆ ! ಕ್ಷತ್ರಿಯ ರಾಜರೆಲ್ಲರ ಅಭಿಮಾನವನ್ನು
ಭಂಗಿಸಿದನಂತೆ! ರಾಜಕುಮಾರಿ ಈ ಭಿಕ್ಷುಕನ ಕೊರಳಿಗೆ ಮಾಲೆ ಹಾಕುವುದಂತೆ! ಎಂಥಾ ಮೂರ್ಖತನ,ಮೋಸ! ನಾಚಿಕೆಯಿಲ್ಲದ
ನೀವೆಲ್ಲ ಸೇರಿ ಮದುವೆಯಲ್ಲಿ ಭಾಗಿಯಾಗಿ ಅಷ್ಟೇ ಅಲ್ಲ, ನಿಮ್ಮ ನಿಮ್ಮ ಹೆಂಡತಿಯರನ್ನು ಈ ಹಾರುವನ ಹೆಂಡತಿಗೆ
ಬಳುವಳಿಯಾಗಿ ಕೊಟ್ಟು ಕೈ ಮುಗಿಯಿರಿ..’
ಸಮಗ್ರ ಸ್ವಯಂವರದ ವ್ಯವಸ್ಥೆಯನ್ನೇ ಮೋಸವೆಂದು ಆರ್ಭಟಿಸುವ
ದುರ್ಯೋಧನನ ಬೆಂಕಿಯ ಉಂಡೆಯಂಥಾ ಮಾತುಗಳನ್ನು ಕೇಳಿ ಉಳಿದ ಅರಸರಲ್ಲಿ ರೋಷ ಉಕ್ಕಿದ್ದು ಸಹಜವೇ.
ಪದ್ಯದಲ್ಲಿ ಕವಿ ಪ್ರಕಟಿಸಿದ ತೀವ್ರ ವ್ಯಂಗ್ಯ,
ಮೊನೆಚು ಮಾತುಗಳಿಗಿರುವ ಶಕ್ತಿ, ಒಂದು ಕ್ಷಣ ‘ಐಸಲೇ ಕುಮಾರವ್ಯಾಸ!’ ಎನ್ನಿಸುವಂತಿವೆ.
ಕುಮಾರವ್ಯಾಸ ಪ್ರತಿಷ್ಠಾನ
೨೬/೪/೨೦೧೭