Saturday, April 22, 2017

ಐಸಲೇ ಕುಮಾರವ್ಯಾಸ! -೮೬-



ಐಸಲೇ ಕುಮಾರವ್ಯಾಸ!                           --
ಆದಿ ಪ ೧೫-

 ಬ್ರಾಹ್ಮಣರ ಜಯಘೋಷದೊಂದಿಗೆ ನಾಚುತ್ತಾ ಅರ್ಜುನನ ಕೊರಳಿಗೆ ದ್ರೌಪದಿ ಮಾಲೆಯನ್ನು ಹಾಕಿದಳು!
ವಧು, ಸಕಲ ಆಭರಣಗಳಿಂದ ಶೋಭಿತೆಯಾದ ರಾಜಕುಮಾರಿ .ವರನೋ? ಸಾಧಾರಣ ಬ್ರಾಹ್ಮಣ ಯುವಕ! ಕವಿ ಆ ಚಿತ್ರವನ್ನು ಕಟ್ಟಿಕೊಡುತ್ತಾನೆ

‘ಕೊರಳ ಹೂವಿನ ದಂಡೆಯಲಿ
ನಿಜಕರದ ಭಾರಿಯ ಧನುವಿನಲಿ,
ತನು ಪರಿಮಳದ ನಿಟ್ಟೆಸಳುಗಂಗಳ ಕೆಲದ ಯುವತಿಯಲಿ
ವರನ ಪರಿ ಹೊಸತಾಯ್ತು
ಹೊತ್ತನು ಹರನ ಹಗೆ ಹಾರುವಿಕೆಯನು
ನಮ್ಮರಸಿ ನೆರೆ ಹಾರುವತಿ
ಎಂದರು ನಗುತ ಚಪಲೆಯರು..’

ವರ ಹೊಸ ರೀತಿಯವ. ಕೊರಳಲ್ಲಿ ದ್ರೌಪದಿ ತೊಡಿಸಿದ ಹೂವಿನ ಮಾಲೆ ಇದೆ. ಕೈಯಲ್ಲಿ ಗೆಲುವಿಗೆ ಕಾರಣವಾದ ಭಾರಿ ಧನುಸ್ಸಿದೆ. ಕೆಲಬಲದಲ್ಲಿ ತುಂಬುಗಣ್ಣಿನ, ತನುವಿನಲ್ಲಿ ಸುಗಂಧ ಸೂಸುವ ಚೆಲುವೆಯರು (ದ್ರೌಪದಿಯ ಸಖಿಯರು) ಮೆಚ್ಚುಗೆ ಕುತೂಹಲದಿಂದ ಸುತ್ತುವರಿದಿದ್ದಾರೆ.
 ಅವರೆಲ್ಲರ ಆಕರ್ಷಣೆಯ ಕೇಂದ್ರ ಈ ಬ್ರಾಹ್ಮಣ ವರ! ನೊಡಿದಷ್ಟೂ ತೃಪ್ತಿಯಿಲ್ಲ.ಏನಿದು? ನಮ್ಮೊಡತಿ ದ್ರೌಪದಿ ಹಾರುವತಿಯಾಗಿ ಹೋದಳೇನು? ಎಂದು ಸಂಭ್ರಮಿಸುತ್ತಿದ್ದಾರೆ. ಅವನು ಅರ್ಜುನ ಎಂದು ಯಾರಿಗೂ ತಿಳಿದಿಲ್ಲವಲ್ಲ.
 
ವರನಾದ ಅರ್ಜುನನನ್ನು ಕವಿ ವರ್ಣಿಸುವುದು; ‘ಹೊತ್ತನು ಹರನ ಹಗೆ ಹಾರುವಿಕೆಯನು’
ಹರನ ಹಗೆ( ಶತ್ರು) ಮನ್ಮಥ.ಅವನು ಹಾರುವ (ಬ್ರಾಹ್ಮಣ)ವೇಷವನ್ನು ಹೊತ್ತು ಬಂದಂತಿದೆ. ಮೈಯೆಲ್ಲಾ ವಿಭೂತಿ, ಜಟೆ, ರುದ್ರಾಕ್ಷಿಗಳಿಂದ ಅಲಂಕೃತವಾಗಿದೆ ಜತೆಗೆ ಅಪ್ರತಿಮ ಸುಂದರನೂ ಹೌದು! ಹಾಗಾಗಿ ಹರನ ಹಗೆ( ಮನ್ಮಥ)!

‘ಹ’ ಕಾರಗಳಿಂದ ಕೂಡಿದ ಶಬ್ದಗಳು ಮಾಲೆ ಪೋಣಿಸಿದ ಹಾಗೆ ಬಂದು, ಹರನ ಹಗೆ ಹಾರುವಿಕೆಯನ್ನು ಹೊತ್ತನೇ ಎಂಬ ಆಡುಮಾತಿನ ಉದ್ಗಾರದಲ್ಲಿ ಅಂತ್ಯವಾಗುವುದು ಪದ್ಯದ ವಿಶೇಷ.

ಕುಮಾರವ್ಯಾಸ ಪ್ರತಿಷ್ಠಾನ
೨೧/೪/೨೦೧೭

No comments:

Post a Comment