Tuesday, February 27, 2018

ಐಸಲೇ ಕುಮಾರವ್ಯಾಸ !! - ೧೧೬ –



ಐಸಲೇ ಕುಮಾರವ್ಯಾಸ !!      -  ೧೧
ಉದ್ಯೋಗ ಪ  ೯-೫೧

‘ಕಂಜಸಂಭವ ಪಿತನು ಬಂದನು
ನಂಜಿನಲಿ ಪವಡಿಸುವ ಬಂದನು
ಕುಂಜರನ ಮೊರೆಗೇಳಿ ಸಲಹಿದ ದೇವನಿದೆ ಬಂದ.,
ಅಂಜನಾಸುತನೊಡೆಯ ಬಂದನು
ಅಂಜಿದಸುರನಿಗಭಯವಿ
ತ್ತವಭಂಜನೆಗೆ ಬಲುದೈವ ಬಂದನು ನೃಪತಿಯರಮನೆಗೆ ..,’

(ಕಂಜ ಸಂಭವ-ಬ್ರಹ್ಮ; ನಂಜು-ವಿಷ; ಕುಂಜರ-ಆನೆ; ಅಂಜನಾಸುತ-ಹನೂಮಂತ)

ಉದ್ಯೋಗಪರ್ವದಲ್ಲಿ ದುರ್ಯೋಧನನ ಅರಮನೆಗೆ ನಡೆದು ಬರುವ ಶ್ರೀಕೃಷ್ಣನ ಚಿತ್ರ ಕುಮಾರವ್ಯಾಸನ ಭಾಗವತ ಪ್ರಜ್ಞೆಯನ್ನು ಜಾಗೃತಗೊಳಿಸಿರಲು ಸಾಕು.ಹಲವಾರು ಪದ್ಯಗಳಲ್ಲಿ ಅವನ ಬರವನ್ನು ವರ್ಣಿಸುತ್ತಾನೆ.ಮಹಾಯುದ್ಧವೊಂದರ ಮುನ್ನುಡಿಯಾದ ಸಂಧಾನವನ್ನು ಪ್ರತಿನಿಧಿಸಿ ಬರುತ್ತಿರುವುದರಿಂದ ಸಾಕ್ಷಾತ್ ಭೂಭಾರ ಸಂಹಾರಕ ನಾರಾಯಣನಂತೆ ಕಂಡಿದ್ದಾನೆ. ಶ್ರೀಹರಿಯ ಎಲ್ಲ ಅವತಾರಗಳ ಘಟನೆಗಳನ್ನೂ ಪೋಣಿಸಿ ಹಾರಹಾಕಿದಂತೆ ಪದ್ಯಗಳು ಸ್ತುತಿಗಳಾಗಿ ಬಂದಿವೆ.

ಮೇಲಿನ ಪದ್ಯವನ್ನೇ ನೋಡಿ

‘ ಬ್ರಹ್ಮನ ತಂದೆಯಾದ ಹರಿ ಬಂದ; ಶೇಷಶಯನನಾದವ ಬಂದ; ಆನೆಯ ಮೊರೆ ಕೇಳಿ ಕಾಪಾಡಿದವ (ಗಜೇಂದ್ರ ಮೋಕ್ಷ) ಬಂದ; ಹನುಮನ ಒಡೆಯನಾದ ಪ್ರಭು ಬಂದ( ಶ್ರೀರಾಮ  ಸಹಾ ಕವಿಗೆ ಅತಿ ಮೆಚ್ಚು) ಅಂಜಿದ ಪ್ರಹ್ಲಾದನಿಗೆ ಅಭಯವಿತ್ತು ಕಾಪಾಡಿದವ; ದುರಿತಗಳನ್ನು ತರಿದು ಬಿಸುಡುವ ನಾರಾಯಣ ಅರಮನೆಯ ಕಡೆಗೆ ನಡೆದು ಬರುತ್ತಿದ್ದಾನೆ’

ಕುಮಾರವ್ಯಾಸ ಪ್ರತಿಷ್ಠಾನ
೨೭/೨/೨೦೧೮

Sunday, February 25, 2018

ಐಸಲೇ ಕುಮಾರವ್ಯಾಸ !! - ೧೧೫ -



ಐಸಲೇ ಕುಮಾರವ್ಯಾಸ !!                  -  ೧೧  -
ಉದ್ಯೋಗ ಪ ೯-೨೯

‘ಕೊಡು ವೃಕಸ್ಥಳವನು,ಕುಶಸ್ಥಳ
ಪೊಡವಿಯಾವಂತಿಯನು, ಕುಳವನು ಕೊಡಿಸಿ ಕಳೆ
ಸಿರಿಕರಣದವರಲಿ ವಾರಣಾವತವ.,
ಕೊಡು ನಿನಗೆ ಮನಬಂದುದೊಂದನು
ನಡೆಸಿ ಕೊಡುವೆನು ಪಾಂಡವರನು
ಅವಗಡೆಯತನ ಬೇಡಿನ್ನು ಕೇಳೆಂದಸುರರಿಪು ನುಡಿದ..,

‘ ದುರ್ಯೋಧನಾ, ಪಾಂಡವರು ವನವಾಸದ ಕಟ್ಟುಪಾಡುಗಳನ್ನು ಮುಗಿಸಿ ನಿನ್ನಲ್ಲಿ ರಾಜ್ಯವನ್ನು ಮರಳಿ ಕೇಳುತ್ತಿದ್ದಾರೆ. ಅರ್ಧ ರಾಜ್ಯ ಹೋಗಲಿ ಬೇಡ, ಐದು ಊರುಗಳನ್ನು ಅವರಿಗೆ ದಾಖಲೆಗಳ ಸಮೇತ ಹಂಚಿ ಕೊಡು.ವೃಕಸ್ಥಳ, ಕುಶಸ್ಥಳ, ಅವಂತಿ, ವಾರಣಾವತ ಈ ನಾಲ್ಕರೊಂದಿಗೆ ನಿನಗೆ ಇಷ್ಟವಾದ ಇನ್ನೊಂದು ಊರು ಕೊಟ್ಟರೆ ಸಾಕು. ಪಾಂಡವರನ್ನು ಒಪ್ಪಿಸುವ ಭಾರ ನನ್ನದು. ಇನ್ನೂ
ಅವಗಣನೆ ಮಾಡಿ ತೊಂದರೆ ತಂದುಕೊಳ್ಳ ಬೇಡ’

ಪಾಂಡವರ ಪಕ್ಷವಹಿಸಿ ಹಸ್ತಿನಾವತಿಗೆ ಬಂದು ಕೌರವನ ವೈಭವಕ್ಕೆ ಬೆನ್ನು ತೋರಿಸಿ ವಿಧುರನ ಆತಿಥ್ಯ ಪಡೆದು, ಮರುದಿನ ದುರ್ಯೋಧನನಿಂದ ಕರೆಸಿಕೊಂಡು ಆಸ್ಥಾನಕ್ಕೆ ಬಂದ ಶ್ರೀಕೃಷ್ಣ ಸಂಧಿಯ ಪ್ರಸ್ತಾವನೆ ಮಾಡಿದ ಮಾತು ಇವು.

ಮಹಾಭಾರತದ ಅತಿ ಸೂಕ್ಷ್ಮ ರಾಜನೀತಿಯನ್ನು  ಶ್ರೀಕೃಷ್ಣ ನಿರ್ವಹಿಸಿದ ಒಂದೊಂದು ಹಂತವೂ ಸ್ವಾರಸ್ಯಕರ,ವಿಚಾರಣೀಯ. ಅವನ್ನು ಕುಮಾರವ್ಯಾಸ ತಕ್ಕ ಪಕ್ವ ವಿಚಾರಗಳಿಂದ, ಹದಮಾಡಿದ ಭಾಷೆಯಿಂದ ತುಂಬಿದ್ದಾನೆ ಎನ್ನುವುದು ಕೂಡಾ ಅಷ್ಟೇ ಸ್ವಾರಸ್ಯಕರ!

ಕುಮಾರವ್ಯಾಸ ಪ್ರತಿಷ್ಠಾನ
೨೩/೦೨/೨೦೧೮