ಐಸಲೇ ಕುಮಾರವ್ಯಾಸ !! - ೧೧೬ –
ಉದ್ಯೋಗ ಪ ೯-೫೧
‘ಕಂಜಸಂಭವ ಪಿತನು ಬಂದನು
ನಂಜಿನಲಿ ಪವಡಿಸುವ ಬಂದನು
ಕುಂಜರನ ಮೊರೆಗೇಳಿ ಸಲಹಿದ ದೇವನಿದೆ ಬಂದ.,
ಅಂಜನಾಸುತನೊಡೆಯ ಬಂದನು
ಅಂಜಿದಸುರನಿಗಭಯವಿ
ತ್ತವಭಂಜನೆಗೆ ಬಲುದೈವ ಬಂದನು ನೃಪತಿಯರಮನೆಗೆ
..,’
(ಕಂಜ ಸಂಭವ-ಬ್ರಹ್ಮ; ನಂಜು-ವಿಷ; ಕುಂಜರ-ಆನೆ;
ಅಂಜನಾಸುತ-ಹನೂಮಂತ)
ಉದ್ಯೋಗಪರ್ವದಲ್ಲಿ ದುರ್ಯೋಧನನ ಅರಮನೆಗೆ ನಡೆದು
ಬರುವ ಶ್ರೀಕೃಷ್ಣನ ಚಿತ್ರ ಕುಮಾರವ್ಯಾಸನ ಭಾಗವತ ಪ್ರಜ್ಞೆಯನ್ನು ಜಾಗೃತಗೊಳಿಸಿರಲು ಸಾಕು.ಹಲವಾರು
ಪದ್ಯಗಳಲ್ಲಿ ಅವನ ಬರವನ್ನು ವರ್ಣಿಸುತ್ತಾನೆ.ಮಹಾಯುದ್ಧವೊಂದರ ಮುನ್ನುಡಿಯಾದ ಸಂಧಾನವನ್ನು ಪ್ರತಿನಿಧಿಸಿ
ಬರುತ್ತಿರುವುದರಿಂದ ಸಾಕ್ಷಾತ್ ಭೂಭಾರ ಸಂಹಾರಕ ನಾರಾಯಣನಂತೆ ಕಂಡಿದ್ದಾನೆ. ಶ್ರೀಹರಿಯ ಎಲ್ಲ ಅವತಾರಗಳ
ಘಟನೆಗಳನ್ನೂ ಪೋಣಿಸಿ ಹಾರಹಾಕಿದಂತೆ ಪದ್ಯಗಳು ಸ್ತುತಿಗಳಾಗಿ ಬಂದಿವೆ.
ಮೇಲಿನ ಪದ್ಯವನ್ನೇ ನೋಡಿ
‘ ಬ್ರಹ್ಮನ ತಂದೆಯಾದ ಹರಿ ಬಂದ; ಶೇಷಶಯನನಾದವ
ಬಂದ; ಆನೆಯ ಮೊರೆ ಕೇಳಿ ಕಾಪಾಡಿದವ (ಗಜೇಂದ್ರ ಮೋಕ್ಷ) ಬಂದ; ಹನುಮನ ಒಡೆಯನಾದ ಪ್ರಭು ಬಂದ( ಶ್ರೀರಾಮ
ಸಹಾ ಕವಿಗೆ ಅತಿ ಮೆಚ್ಚು) ಅಂಜಿದ ಪ್ರಹ್ಲಾದನಿಗೆ
ಅಭಯವಿತ್ತು ಕಾಪಾಡಿದವ; ದುರಿತಗಳನ್ನು ತರಿದು ಬಿಸುಡುವ ನಾರಾಯಣ ಅರಮನೆಯ ಕಡೆಗೆ ನಡೆದು ಬರುತ್ತಿದ್ದಾನೆ’
ಕುಮಾರವ್ಯಾಸ ಪ್ರತಿಷ್ಠಾನ
೨೭/೨/೨೦೧೮