ಐಸಲೇ ಕುಮಾರವ್ಯಾಸ !! - ೧೧೫ -
ಉದ್ಯೋಗ ಪ ೯-೨೯
‘ಕೊಡು ವೃಕಸ್ಥಳವನು,ಕುಶಸ್ಥಳ
ಪೊಡವಿಯಾವಂತಿಯನು, ಕುಳವನು
ಕೊಡಿಸಿ ಕಳೆ
ಸಿರಿಕರಣದವರಲಿ ವಾರಣಾವತವ.,
ಕೊಡು ನಿನಗೆ ಮನಬಂದುದೊಂದನು
ನಡೆಸಿ ಕೊಡುವೆನು ಪಾಂಡವರನು
ಅವಗಡೆಯತನ ಬೇಡಿನ್ನು ಕೇಳೆಂದಸುರರಿಪು
ನುಡಿದ..,
‘ ದುರ್ಯೋಧನಾ, ಪಾಂಡವರು
ವನವಾಸದ ಕಟ್ಟುಪಾಡುಗಳನ್ನು ಮುಗಿಸಿ ನಿನ್ನಲ್ಲಿ ರಾಜ್ಯವನ್ನು ಮರಳಿ ಕೇಳುತ್ತಿದ್ದಾರೆ. ಅರ್ಧ ರಾಜ್ಯ
ಹೋಗಲಿ ಬೇಡ, ಐದು ಊರುಗಳನ್ನು ಅವರಿಗೆ ದಾಖಲೆಗಳ ಸಮೇತ ಹಂಚಿ ಕೊಡು.ವೃಕಸ್ಥಳ, ಕುಶಸ್ಥಳ, ಅವಂತಿ,
ವಾರಣಾವತ ಈ ನಾಲ್ಕರೊಂದಿಗೆ ನಿನಗೆ ಇಷ್ಟವಾದ ಇನ್ನೊಂದು ಊರು ಕೊಟ್ಟರೆ ಸಾಕು. ಪಾಂಡವರನ್ನು ಒಪ್ಪಿಸುವ
ಭಾರ ನನ್ನದು. ಇನ್ನೂ
ಅವಗಣನೆ ಮಾಡಿ ತೊಂದರೆ ತಂದುಕೊಳ್ಳ
ಬೇಡ’
ಪಾಂಡವರ ಪಕ್ಷವಹಿಸಿ ಹಸ್ತಿನಾವತಿಗೆ
ಬಂದು ಕೌರವನ ವೈಭವಕ್ಕೆ ಬೆನ್ನು ತೋರಿಸಿ ವಿಧುರನ ಆತಿಥ್ಯ ಪಡೆದು, ಮರುದಿನ ದುರ್ಯೋಧನನಿಂದ ಕರೆಸಿಕೊಂಡು
ಆಸ್ಥಾನಕ್ಕೆ ಬಂದ ಶ್ರೀಕೃಷ್ಣ ಸಂಧಿಯ ಪ್ರಸ್ತಾವನೆ ಮಾಡಿದ ಮಾತು ಇವು.
ಮಹಾಭಾರತದ ಅತಿ ಸೂಕ್ಷ್ಮ
ರಾಜನೀತಿಯನ್ನು ಶ್ರೀಕೃಷ್ಣ ನಿರ್ವಹಿಸಿದ ಒಂದೊಂದು
ಹಂತವೂ ಸ್ವಾರಸ್ಯಕರ,ವಿಚಾರಣೀಯ. ಅವನ್ನು ಕುಮಾರವ್ಯಾಸ ತಕ್ಕ ಪಕ್ವ ವಿಚಾರಗಳಿಂದ, ಹದಮಾಡಿದ ಭಾಷೆಯಿಂದ
ತುಂಬಿದ್ದಾನೆ ಎನ್ನುವುದು ಕೂಡಾ ಅಷ್ಟೇ ಸ್ವಾರಸ್ಯಕರ!
ಕುಮಾರವ್ಯಾಸ ಪ್ರತಿಷ್ಠಾನ
೨೩/೦೨/೨೦೧೮
No comments:
Post a Comment