Friday, November 24, 2017

ಐಸಲೇ ಕುಮಾರವ್ಯಾಸ! -೧೦೫-




ಐಸಲೇ ಕುಮಾರವ್ಯಾಸ!                           -೧೦೫-
(ಭೀಷ್ಮ ಪ ೬-೪೦)

ರೋಮ ರೋಮದೊಳಖಿಳ ಭುವನ ಸ್ತೋಮ ನಲಿದಾಡುವುದು ಗಡ,
ನಿಸ್ಸೀಮತನ ಗಡ,
ನಾವು ವೈರಿಗಳೆಂದು ಕೋಪಿಸುವ ಈ ಮರುಳುತನವೆತ್ತ?
ಈ ರಣತಾಮಸಿಕೆ ತಾನೆತ್ತಣದು?
ರಘುರಾಮ ರಕ್ಷಿಸು, ಬಯಲಿನಾಡಂಬರವಿದೇನೆಂದ..,’

ಭೀಷ್ಮನ ಬಾಯಲ್ಲಿ ಕುಮಾರವ್ಯಾಸ ಆಡಿಸಿರುವ ಮಾತುಗಳು ಭಕ್ತಿ ಸಾಹಿತ್ಯದಲ್ಲಿ ಸಂಚಲನವುಂಟು ಮಾಡುವಂಥಾ ಸ್ತುತಿವಾಕ್ಯಗಳಾಗಿವೆ

‘ಶ್ರೀಕೃಷ್ಣಾ, ನಿನ್ನ ಒಂದೊಂದು ರೋಮದಲ್ಲೂ ಈ ಬ್ರಹ್ಮಾಂಡ ಅಡಗಿದೆ ಎನ್ನುವುದು, ನೀನು ಎಣೆಯಿಲ್ಲದ ಮಹಾಪುರುಷ ಎನ್ನುವುದು ಜ್ಞಾನಿಗಳಿಗೆಲ್ಲಾ ತಿಳಿದ ವಿಷಯ.ಆದರೆ ನನ್ನನ್ನು ವೈರಿಯೆಂದು ಕೋಪಿಸಿ ಸಂಹಾರ ಮಾಡಲು ಬರುತ್ತಿರುವ ಈ ಹುಚ್ಚಾಟ ಏಕೆ?
ಯುಧ್ಧ ಭೂಮಿಯಲ್ಲಿ ಸತತವಾಗಿ ಸಾರಥ್ಯ ಮಾಡುತ್ತಿರುವ ನಿನಗೆ ಯುಧ್ಧದ ಮಂಕು  ಬಡಿಯಿತೋ ಹೇಗೆ?ಈ ಬಯಲಾಡಂಬರ ಏತಕ್ಕಾಗಿ?’

ಭೀಷ್ಮನ ಆಳವಾದ ಭಕ್ತಿಯ ಮಜಲುಗಳು ಕೃಷ್ಣನೆದುರು ಆಡುವ ಮಾತುಗಳಿಂದ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಭಕ್ತನಾದ ನಾನು ವೈರಿಯಾಗುವುದು ಹೇಗೆ? ಆಯುಧ ಹಿಡಿದು ನೀನು ನುಗ್ಗಿ ಬರುವುದು ತಾಮಸಿಕೆಯಲ್ಲದೆಮತ್ತೇನು? ನೀನು ನನ್ನನ್ನು ಕೊಲ್ಲಬಲ್ಲೆಯ? ನಾನು ನಿನ್ನಿಂದ ಹತನಾಗುವ ಚಾರಿತ್ರ್ಯದವನೇನು?.ಕಂಸ, ಶಿಶುಪಾಲ ಇವರೂ ನಾನೂ ಒಂದೇ ಏನು?ಇದು ಕೇವಲ ಬಯಲಿನ ಆಡಂಬರ ಎನ್ನುವ ಮಾತಿನಲ್ಲಿರುವ ಆತ್ಮವಿಶ್ವಾಸ ನೋಡಿ!

ಭಕ್ತನನ್ನು ಕೊಲ್ಲುವಷ್ಟು ರೋಷ, ನಿರ್ದಾಕ್ಷಿಣ್ಯ ಭಗವಂತನಿಗೆ ಎಲ್ಲಿಂದ ಬರಬೇಕು? ಇಂಥಾ ಸವಾಲನ್ನು ಕೇವಲ ಅಂತರಂಗ ಭಕ್ತರು ಮಾತ್ರ ಹಾಕುವುದು ಸಾಧ್ಯ

ಕುಮಾರವ್ಯಾಸ ಪ್ರತಿಷ್ಠಾನ
೨೪/೧೧/೨೦೧೭
  


Friday, November 10, 2017

ಐಸಲೇ ಕುಮಾರವ್ಯಾಸ! -೧೦೪-



ಐಸಲೇ ಕುಮಾರವ್ಯಾಸ!                           -೧೦೪-
ಭೀಷ್ಮ ಪ೬-೩೯

ತನ್ನೆದುರು ಚಕ್ರ ಹಿಡಿದು ಏರಿ ಬರುತ್ತಿರುವ ಹರಿಯನ್ನು ಭೀಷ್ಮ ನಿರಾಯುಧನಾಗಿ ಎದುರಿಸುತ್ತಾನೆ. ಅವನಿಗಿರುವ ಅಸ್ತ್ರ ಭಕ್ತಿ ಲೋಕದ ಶರಣಾಗತಿ ತತ್ವ.ಆದರೆ ಭಯದಿಂದ ಅಲ್ಲ;
 ಧೀರತನದಿಂದ;ವಿಶ್ವಾಸದಿಂದ.ಆ ವಿಶ್ವಾಸ ಎಷ್ಟು ಗಾಢವಾದದ್ದೆಂದರೆ ಅದು ಹರಿಯನ್ನೂ ಮೀರಿ ಬೆಳೆದಿದೆ!
ಸ್ವತಃ ಭಕ್ತನಾದ ಕವಿ ಭೀಷ್ಮನ ಬಾಯಿಂದ ಹೇಳಿಸಿದ ಮಾತುಗಳು ಏಳೆಂಟು ಪದ್ಯಗಳಲ್ಲಿ ಭಕಿಶಾಸ್ತ್ರದ ವ್ಯಾಖ್ಯಾನಗಳಂತಿವೆ. ಭೀಷ್ಮನಿಗಷ್ಟೇ ಅಲ್ಲ ಎಲ್ಲ ಶ್ರೇಷ್ಠ ಭಕ್ತರ ಅಂತರಂಗದ ದೃಢತೆಗೆ ಹಿಡಿದ ಕನ್ನಡಿ.

‘ಅಲಸಿಕೆಯೊಳೈನೂರು ಸಾವಿರ
ನಳಿನಭವರಡಗೆಡೆವರೆಂಬಗ್ಗಳಿಕೆಯೆತ್ತಲು?
ಹುಲುಮನುಜ ನಾನೆತ್ತಲು?
ಇದಿರು ಹರಿತಹುದೆತ್ತಲು?
ಇದು ನಿನ್ನಳತೆಗೈದುವುದಲ್ಲ;
ಲಜ್ಜೆಗೆ ಮನೆಯ ಮಾಡಿದೆ!
ಹೂಡಿದೈ ದುರ್ಯಶವನೆನಗೆಂದ’

ಭೀಷ್ಮ ಕೃಷ್ಣನ ರೋಷಕ್ಕೆ ಹೆದರುತ್ತಿಲ್ಲ, ಬದಲಾಗಿ ಭಕ್ತನಾಗಿ ವಿಮರ್ಶಿಸಿ ಅವನ ಕ್ರಿಯೆಯನ್ನು ಪ್ರಶ್ನಿಸುತ್ತಿರುವ ರೀತಿ ವಿಶಿಷ್ಟವಾಗಿದೆ

ಒಮ್ಮೆ ನೀನು ಬೇಸರಗೊಂಡೆಯೆಂದರೆ ಲಕ್ಷ ಲಕ್ಷ ಬಹ್ಮರುಗಳೇ ಸ್ಥಾನನಾಶ ಹೊಂದುತ್ತಾರೆ; ಇಲ್ಲವಾಗುತ್ತಾರೆ. ಇದು ನಿನ್ನ ಹೆಗ್ಗಳಿಕೆ! ಆದರೆ ಇದೇನಿದು? ಹುಲ್ಲು ಮನುಷ್ಯನಾದ ನನ್ನೆದುರು ಕೊಲ್ಲಲು ನುಗ್ಗಿ ಬರುತ್ತಿರುವೆ? ಇದು ನಿನ್ನ ಅಳತೆಗೆ ಸರಿಯಲ್ಲ; ನಿನ್ನ ಮಹಿಮೆಯನ್ನು ನೀನೇ ಮರೆತೆ, ನಾಚಿಕೆಗೆ ಅಸ್ಪದ ಮಾಡಿಕೊಂಡೆ! ನನಗೂ ಕೆಟ್ಟ ಹೆಸರು ಬರುವ ಹಾಗೆ ಮಾಡಿದೆ!’

ಸೂಕ್ಷ್ಮವಾಗಿ ಕೃಷ್ಣನನ್ನು ಎಚ್ಚರಿಸುತ್ತಿದ್ದಾನೆ ಭೀಷ್ಮ.ತನ್ನ ಇಷ್ಟ ದೈವದ ಹಿರಿಮೆಗೆ ಕುಂದು ಬರಬಾರದೆಂಬ ಆಸ್ಥೆ; ಕಳಕಳಿ.ಎಲ್ಲಿಯ ಭಯ? ಹೆದರಿಕೆ?

ಇದೇ ಭಕ್ತಿಚ್ಛಲ ಅಂದರೆ!

ಕುಮಾರವ್ಯಾಸ ಪ್ರತಿಷ್ಠಾನ
೧೦/೧೧/೨೦೧೭