Monday, December 26, 2016



ಐಸಲೇ ಕುಮಾರವ್ಯಾಸ!                           -೬೨-
ಕರ್ಣ ಪ ೨೫-೩೩


ಕರ್ಣಪರ್ವ,ವಿರಾಟಪರ್ವ ಉದ್ಯೋಗ ಪರ್ವಗಳು ಕುಮಾರವ್ಯಾಸನ ಮೇರು ಪ್ರತಿಭೆ ಲೀಲಾಜಾಲವಾಗಿ ಹರಿದಾಡಿರುವ ಭಾಗಗಳು. ಯಾವ ಪದ್ಯವನ್ನು ವಿವರಿಸುವುದು ಯಾವುದನ್ನು ಬಿಡುವುದು?

ಇರಲಿ, ಸರ್ಪಾಸ್ತ್ರದಿಂದ ಅರ್ಜುನನಿಗೆ ಹೇಗೆ ಮುಕ್ತಿ ಸಿಕ್ಕಿತು? ಎಲ್ಲರಿಗೂ ತಿಳಿದಿದೆ.ಕವಿ ಹೇಳುತ್ತಾನೆ; ‘ತಡೆಯದೈದಂಗುಲಕೆ ರಥವನು ನೆಡಿಸಿದನು ಹರಿ ಧರೆಗೆ’ . ಅಷ್ಟೇ ಸಾಕಾಯಿತು.ಕೊಲ್ಲಲು ತವಕದಿಂದ ಬಂದ ಬಾಣ ಅರ್ಜುನನ ಕಿರೀಟವನ್ನು ಹಾರಿಸಿಕೊಂಡು ಹೋಯಿತು!

ಈ ಐದಂಗುಲ ರಥವನ್ನು ಶ್ರೀಕೃಷ್ಣ ತಗ್ಗುವಂತೆ ಮಾಡಿದ್ದು ಹೇಗೆ? ಅವನು ಸಾಕ್ಷಾತ್ ಭಗವಂತ ಅಸಾಧ್ಯವಾದದ್ದು ಏನು? ಎಂದು ಕೆಲವರು ಭಾವಿಸಿದರೆ ಆ ಯುಗದ ಮಹಾ ತಂತ್ರಜ್ಞಾನಿ ಎನಿಸಿದ್ದ ಕೃಷ್ಣನಿಗೆ ಇಂಥಾ ಸಾಧ್ಯತೆಯ ಅರಿವಿದ್ದು ಸಕಾಲದಲ್ಲಿ ಅವನ್ನು ಉಪಯೋಗಿಸಿದ ಎನ್ನುವವರೂ ಇದ್ದಾರೆ. ಭಗದತ್ತನ ಶೂಲವನ್ನು ಪರಿಹರಿಸಿದ್ದು,ದುರ್ಯೋಧನನ ಆಸ್ಥಾನದಲ್ಲಿ ಸಿಂಹಾಸನ ಮುರಿದು ಬೀಳುವಂತೆ ಮಾಡಿದ್ದು,ಬೇರಾರಿಗೂ ಅಸಾಧ್ಯವಾದ ಚಕ್ರ ಪ್ರಯೋಗ, ಜರಾಸಂಧ, ದುರ್ಯೋಧನ ಇವರ ವಧೆಯ ಸಂದರ್ಭದಲ್ಲಿ ಅಮೂಲ್ಯವಾದ ಸೂಚನೆಯನ್ನು ಭೀಮನಿಗೆ ನೀಡಿದ್ದು ಅವನ ಅಗಾಧವಾದ ತಂತ್ರಜ್ಞಾನದ ಪರಿಣಾಮ ಎಂದು ಭಾವಿಸುವುದರಲ್ಲಿ ಕೃಷ್ಣನ ಪಾತ್ರಕ್ಕೆ ಕುಂದೇನೂ ಉಂಟಾಗುವುದಿಲ್ಲ ಬದಲಾಗಿ ಹೆಚ್ಚು ವೈಜ್ಞಾನಿಕ ಅನ್ನಿಸಲೂ ಬಹುದು. ಇರಲಿ.


ಶ್ರೇಷ್ಠ ಸಾರಥಿಯಾಗಿದ್ದ ಹರಿಗೆ ರಥವನ್ನು ತಗ್ಗಿಸಬಲ್ಲ ತಂತ್ರದ ಅರಿವಿತ್ತು ಎಂದರೆ ಅಚ್ಚರಿಯೇನು?

ಅಂತೂ ಬಾಣ ಅರ್ಜುನನ ಕಿರೀಟವನ್ನಷ್ಟೇ ಹಾರಿಸಿ ಅರೆ! ತಲೆ ಬದುಕಿತೇ? ಛೆ! ಎನ್ನುತ್ತಾ ಹಲ್ಲು ಮಸೆಯುತ್ತಾ ಪುನಃ ಕರ್ಣನ ಬಳಿ ಓಡಿತು!
ತೊಡುತೊಡಿನ್ನೊಮ್ಮೆ ಎನ್ನನಕಟಾ
ಕೆಡಿಸಿದೆಯಲಾ ರಾಜಕಾರ್ಯವ
ನುಡಿದು ಹೇಳನೆ ನಿನ್ನ ಸಾರಥಿ ಲಕ್ಷ್ಯಭೇದನವ?
ಆಡಗಲಿ ಇನ್ನೀರೇಳು ಭುವನದಲಿ
ಆಡಗಿ ತಿಂಬೆನು ನರನನು
ಎಂದವಗಡಿಸಿ ಕರ್ಣನ ಬೆಸನ ಬೇಡಿತು ಮತ್ತೆ ಫಣಿಬಾಣ

(ಲಕ್ಷ್ಯ ಭೇದನ- ಗುರಿ ಸಾಧಿಸುವಿಕೆ; ಈರೇಳು ಭುವನ-ಹದಿನಾಲ್ಕು ಲೋಕ, ಬೆಸನ-ಆಜ್ಞೆ)

ಅರ್ಥಃ’ ಹೇ ಕರ್ಣಾ, ಎಂಥಾ ಅನ್ಯಾಯ ಮಾಡಿ ರಾಜಕಾರ್ಯವನ್ನು ಹಾಳು ಮಾಡಿದೆ? ನಿನ್ನ ಸಾರಥಿ ನಿನಗೆ ಸರಿಯಾದ ಸಲಹೆಯನ್ನೇ ಕೊಟ್ಟರೂ ಅಲಕ್ಷಿಸಿದೆಯಲ್ಲ;
ನನ್ನನ್ನು ಮತ್ತೊಮ್ಮೆ ತೊಡು; ಆ ಅರ್ಜುನ ಎಂಬವನು ಹದಿನಾಲ್ಕು ಲೋಕದ ಯಾವ ಮೂಲೆಯಲ್ಲಿದ್ದರೂ ಸರಿ, ಅವನನ್ನು ಹುಡುಕಿ ಕೊಲ್ಲುತ್ತೇನೆ, ಬೇಗ ತೊಡು’ ಎಂದು ಕರ್ಣನ ಅನುಮತಿಯನ್ನು ಬೇಡಿತಂತೆ!’

ಪದ್ಯದ ಲಯ, ಭಾಷೆ ಇವೇ ಈ ಸಂದರ್ಭದ ನಾಟಕೀಯತೆಗೆ ಮತ್ತಷ್ಟು ಮೆರುಗು ಕೊಟ್ಟಿವೆ. ಅರ್ಜುನನಿಗಿಂತಲೂ ಹೆಚ್ಚಿನ ಸೇಡು ಆ ಬಾಣಕ್ಕೇ ಇರುವಂತಿದೆ. ಅಷ್ಟೇ ಅಲ್ಲ, ಶಲ್ಯನ ಮಾತನ್ನೂ ಕೇಳಿಸಿಕೊಂಡ ಅದು ಅನುಮೋದಿಸುತ್ತಿದೆ! ಯುದ್ಧ ಭೂಮಿಯಲ್ಲಿ ಬಾಣ ಬಂದು ವೀರಾವೇಷದ ಮಾತಾಡುತ್ತಾ ಆಜ್ಞೆ ಬೇಡುವ ಸಂದರ್ಭ ಎಷ್ಟು ಪರಿಣಾಮ ಕಾರಿ!  

‘ತೊಡು ತೊಡು’ ಎಂಬ ದ್ವಿರುಕ್ತಿ, ‘ರಾಜಕಾರ್ಯ’ದ ಬಗೆಗಿನ ವಿಷಾದ, ‘ಲಕ್ಷ್ಯ ಭೇದನವ’ ಶಬ್ದದ ಅರ್ಥವ್ಯಾಪ್ತಿ, ಕಡೆಯ ಸಾಲುಗಳಲ್ಲಿನ ಪ್ರತಿಜ್ಞಾ ವಾಕ್ಯಗಳು ಒಂದಕ್ಕೊಂದು ಪೋಷಣೆ ನೀಡಿ ಪದ್ಯವನ್ನು ಶ್ರೇಷ್ಠವಾಗಿಸಿವೆ.

ಕುಮಾರವ್ಯಾಸ ಪ್ರತಿಷ್ಠಾನ
೨೬/೧೨/೨೦೧೬

Sunday, December 25, 2016



ಐಸಲೇ ಕುಮಾರವ್ಯಾಸ!                           -೬೧
ಕರ್ಣಪ ೨೫-೨೭
ಇಡೀ ಯುದ್ಧಭೂಮಿಯನ್ನು ತಲ್ಲಣಗೊಳಿಸಿ ರಣಾಂಗಣದಿಂದಾಚೆಗೂ ಪರಿಣಾಮ ಬೀರಿದ ಸರ್ಪಾಸ್ತ್ರವನ್ನು ಕರ್ಣ ಸೆಳೆದು ಪ್ರಯೋಗಿಸಿದ!
ಪ್ರತಿಯಾಗಿ ಪಾಂಡವರು ತಮತಮಗೆ ತೋಚಿದ ದಿವ್ಯಾಸ್ತ್ರಗಳಿಂದ ಅದನ್ನು ತಡೆಯುವ ಪ್ರಯತ್ನ ಮಾಡಿದರು. ಆದರೆ ಅವೆಲ್ಲವನ್ನೂ ನುಂಗಿ ತುಪ್ಪದ ಧಾರೆಗೆ ಅಗ್ನಿ ಪ್ರಜ್ವಲಿಸುವ ಹಾಗೆ ಉಬ್ಬುತ್ತಾ ಅರ್ಜುನನ ಕೊರಳ ಸಮೀಪಕ್ಕೆ ಬಂದೇ ಬಿಟ್ಟಿತು! ಹಾಗಾದರೆ ಅರ್ಜುನನ ಸ್ಥಿತಿ? ಪಾಂಡವರ ಸ್ಥಿತಿ?

ಕುಮಾರವ್ಯಾಸ ತನ್ನ ಅಭಿಪ್ರಾಯವನ್ನು ಸಂಜಯನ ಮೂಲಕ ಹೇಳಿಸುತ್ತಾನೆಃ

ಅರಸ ಕೇಳ್,
ಏಸೇಸು ಬಾರಿಯ ಕೊರಳಡಾಯುಧ ಕಳಚದು,
ಏಸುಬ್ಬರದ ಮಾರಿಯ ಬಿಂಕ ಮುರಿಯದು
ಪಾಂಡುತನಯರಿಗೆ
ಹರಿಯ ಹರಹಿನ ವಜ್ರ ಪಂಜರದರಗಿಳಿಯಲೇ ಪಾರ್ಥ
ಅಹಿ ಮಂಜರನ ಮರುಕವ ಕೊಂಬುದೇ?
ಧೃತರಾಷ್ಟ್ರ ಕೇಳೆಂದ

(ಅಢಾಯಧ-ಕತ್ತಿಯಂಥಾ ಆಯುಧ;   ಹರಹು-ವ್ಯಾಪ್ತಿ; ಅಹಿ-ಸರ್ಪ;ಮಂಜರ- ಬೆಕ್ಕು)

ಅರ್ಥಃ ‘ಧೃತರಾಷ್ಟ್ರಾ, ಎಷ್ಟೆಷ್ಟು ಬಾರಿ ಪಾಂಡವರ  ಕೊರಳವರೆಗೂ ಮಾರಣಾಂತಿಕವಾದ ಆಯುಧಗಳು ತಲಪಿ ಹಿಂದೆ ಸರಿದಿಲ್ಲ? ಎಷ್ಟೆಷ್ಟು ಸಲ ಅವರನ್ನು ನುಂಗಲು ಬಂದ ಮೃತ್ಯು ಎಂಬ ಹೆಮ್ಮಾರಿಯ ಗರ್ವ ಭಂಗವಾಗಿಲ್ಲ? ಯಾಕೆ ಗೊತ್ತೇನು?
ಶ್ರೀಕೃಷ್ಣನೆಂಬ ವಜ್ರ ಪಂಜರದೊಳಗೆ ಭದ್ರವಾದ ರಕ್ಷಣೆ ಪಡೆದಿರುವ ಅರಗಿಣಿ ಅರ್ಜುನ; ಈ ಸರ್ಪಾಸ್ತ್ರದ ಬೆಕ್ಕಿನ ಮುಂದೆ ಪ್ರಾಣಭಿಕ್ಷೆ ಬೇಡುತ್ತದೆಯೆ? ಬೆಕ್ಕಿನ ಆರ್ಭಟ ಅದನ್ನೇನು ಮಾಡಬಲ್ಲದು?’

ಈ ಪದ್ಯದಲ್ಲಿ ಕವಿ  ಅಪರೂಪದ ರೂಪಕಗಳ ಸರಣಿಯನ್ನೇ ಸೃಷ್ಟಿಸಿದ್ದಾನೆ!

ಸಾಮಾನ್ಯವಾಗಿ ಗಿಣಿಗೆ ಶತ್ರು ಬೆಕ್ಕು.ಹಾಗಾಗಿ ಬೆಕ್ಕಿನಿಂದ ಜೀವಭಯ;ರಕ್ಷಣೆಯಿಲ್ಲದಿದ್ದರೆ ಕಥೆಮುಗಿದಂತೆಯೇ ಸರಿ. ಇಲ್ಲಿ ಸಹಾ ಅರ್ಜುನ ಎಂಬ ಅರಗಿಣಿಯನ್ನು ನುಂಗಲು ಸರ್ಪಾಸ್ತ್ರ ರೂಪದ ಬೆಕ್ಕು ನುಗ್ಗುತ್ತಿದೆ. ಆದರೆ ಅರ್ಜುನ ಎಂಬ ಗಿಣಿಗೆ ಹರಿಯ ಕರುಣೆಯ ವಜ್ರಪಂಜರದ ರಕ್ಷಾ ಕವಚವಿದೆ! ಆ ಪಂಜರದೊಳಗೆ ಭದ್ರವಾಗಿರುವ ಗಿಣಿಯನ್ನು ಎಷ್ಟೇ ಅಬ್ಬರಿಸಿದರೂ ಬೆಕ್ಕು ಏನು ಮಾಡಲಾದೀತು?

ಮೇಲೇರಿ ಬರುವ ಬಾಣ ಎಷ್ಟೇ ಮಹತ್ವವಾದದ್ದಿರಬಹುದು. ಆದರೆ ಅರ್ಜುನನಷ್ಟೇ ಅಲ್ಲ ಇಡೀ ಪಾಂಡವರ ರಕ್ಷಾ ಕವಚವಾಗಿ ಹರಿ ಅಲ್ಲಿಯೇ ರಥದ ಮೇಲೆ ಮಂಡಿಸಿಲ್ಲವೇನು?ಇಂಥಾ ಎಷ್ಟೆಷ್ಟು ಕಂಟಕಗಳು ಪಾಂಡವರನ್ನು ಕಾಡಲಿಲ್ಲ? ಎಲ್ಲವನ್ನೂ ಹರಿಯ ಕಾರುಣ್ಯದಿಂದ ದಾಟಲಿಲ್ಲವೇ? ಎಂದು ಉದ್ಗರಿಸುತ್ತಾನೆ.

ಸರ್ಪಾಸ್ತ್ರದ ಭಯಂಕರತೆಯನ್ನು ಗಾಢವಾಗಿ ವರ್ಣಿಸುತ್ತಲೇ, ಅದರ ಪರಿಣಾಮ ಉತ್ತುಂಗವನ್ನು ತಲಪಿದಾಗ ಹರಿಯ ಕಾರುಣ್ಯದ ಮುಂದೆ ಅದರ ಮಹತ್ವವನ್ನು ಅಲ್ಲಗಳೆಯುತ್ತಾ  ಭರವಸೆ ನೀಡುವ ರೀತಿ ಭಾಗವತ ಶಿರೋಮಣಿಯಾದ ಕುಮಾರವ್ಯಾಸನ ಕೃಷ್ಣ ಭಕ್ತಿಗೆ ಅನುಗುಣವಾಗಿಯೇ ಇದೆ.

ಕೊರಳವರೆಗೂ ಬಂದು ಮುರಿದು ಬೀಳುವ ಕತ್ತಿ, ನುಂಗಬಂದು ಭಂಗಿತಳಾಗುವ ಮಾರಿ ಈ ರೂಪಕಗಳು ಹಾಗೂ ಪದ್ಯದಲ್ಲಿನ ಆಡುಮಾತಿನ ಶೈಲಿ ಸಹಾ ಶಕ್ತಿಯುತ!

ಕುಮಾರವ್ಯಾಸ ಪ್ರತಿಷ್ಠಾನ
೨೪/೧೨/೨೦೧೬



Wednesday, December 21, 2016



ಐಸಲೇ ಕುಮಾರವ್ಯಾಸ! !                   -೬೦-

ಕರ್ಣ ಪ ೨೫-೧೭


ಕರ್ಣ ಹೂಡಿದ ಸರ್ಪಾಸ್ತ್ರವನ್ನು ಶಲ್ಯ ಹೊಗಳಿದ್ದು ಸರಿ. ಆದರೆ ಅನುಭವಿ ವೀರನಾಗಿ ಒಂದು ವಿಕಲ್ಪವನ್ನೂ ಸೂಚಿಸಿದ.
ನೀನು ಹೂಡಿದ ಅಸ್ತ್ರವೇನೋ ಅದ್ಭುತವಾದದ್ದೇ.ಇಷ್ತು ದಿನ ಎಲ್ಲಿ ಅಡಗಿತ್ತಿದು? ಇರಲಿ, ನಿನ್ನ ಗುರಿ ಸ್ವಲ್ಪ ಸರಿ ಅನ್ನಿಸುತ್ತಿಲ್ಲ. ಕೊರಳಿಗೆ ಗುರಿ ಇಟ್ಟಿದ್ದೀಯೆ. ವ್ಯತ್ಯಾಸವಾದರೆ ಕಿರೀಟವನ್ನು ಹಾರಿಸಬಹುದು. ಎದೆಗೆ ಗುರಿಯಿಡು, ಏರುಪೇರಾದರೂ ಕೊರಳಿಗೆ ತಾಗುವುದು ಸಿದ್ಧ. ಮರಳಿ ಬೇಗ ತೊಡು ಕೌರವನ ಅರಸುತನ ಉಳಿಯಲಿ

ಅದಕ್ಕೆ ಉತ್ತರವಾಗಿ ಕರ್ಣ ಹೇಳುವ ಮಾತು ವಿಚಾರಯೊಗ್ಯವಾಗಿದೆ;

ಒಂದು ಶರಸಂಧಾನ
ನಾಲಗೆಯೊಂದು ನಮ್ಮಲಿ
ಕುಟಿಲ ವಿದ್ಯೆಯನೆಂದು ಕಂಡೈ ಶಲ್ಯ ನಾವಡಿಯಿಡುವ ಧರ್ಮದಲಿ
ಇಂದು ಹೂಡಿದ ಶರವನಿಳುಹುವುದಂದವೇ
ನೀನರಿಯೆ ಹೆರಸಾರು
ಎಂದು ತಿರುವಿನೊಳಂಬನೊದೆದನು ಕರ್ಣ ಬೊಬ್ಬಿಡುತ
(ಶರಸಂಧಾನ-ಬಾಣ ಹೂಡುವಿಕೆ; ಇಳುಹುವುದು-ಕೆಳಕ್ಕಿಳಿಸುವುದು,ಹೆರಸಾರು-ಪಕ್ಕಕ್ಕೆ ಹೋಗು; ತಿರುವು-ಬಿಲ್ಲಿನ ಹೆದೆ; ಅಂಬು-ಬಾಣ
ಅರ್ಥಃ‘ನನ್ನಲ್ಲಿ ಶರಸಂಧಾನ (ಬಾಣದ ಗುರಿ)ಒಂದೇ, ನಾಲಗೆಯೂ ಒಂದೇ; ನಾನು ನಡೆಯುವ ಮಾರ್ಗದಲ್ಲಿ ಎಂದಾದರೂ ಕುಟಿಲತೆಯನ್ನು ನೋಡಿದ್ದೀಯೇನು?
ಈಗ ನಾನು ಬಾಣವನ್ನು ಹೂಡಿಯಾಗಿದೆ, ಅದನ್ನು ಇಳಿಸುವುದು, ಬದಲಾಯಿಸುವುದು ಸರಿಯಲ್ಲ;ನಿನಗೆ ತಿಳಿಯದು, ದೂರ ಸರಿ ‘ ಎಂದು ಹೇಳುತ್ತಾ , ಜೋರಾಗಿ ಘರ್ಜಿಸುತ್ತಾ ಬಾಣವನ್ನುಬಿಟ್ಟೇಬಿಟ್ಟ’
ಯುದ್ಧದಲ್ಲಿ ನ್ಯಾಯ-ಅನ್ಯಾಯಗಳ ಪರಾಮರ್ಶೆ ಇರುವುದಿಲ್ಲ ಎನ್ನುತ್ತಾರಾದರೂ ಮಹಾಭಾರತದ ಧರ್ಮಯುದ್ಧದಲ್ಲಿ ಕೆಲವು ನಿಯಮಗಳಿದ್ದವು. ಮಿಗಿಲಾಗಿ ಕರ್ಣ ಸಹಾ ವೀರನಾಗಿ ತನ್ನದೇ ಆದ ವೈಯಕ್ತಿಕ ಮೌಲ್ಯವನ್ನು ಸಹಾ ಕಾಪಾಡಿಕೊಂಡಿದ್ದ. ಕರ್ಣ ದುರ್ಯೋಧನ ಪಕ್ಷಪಾತಿಯಾಗಿದ್ದ ಅನ್ನುವುದನ್ನು ಹೊರತುಪಡಿಸಿದರೆ ಅನೇಕ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡಿದ್ದ. ನನ್ನ ನಡೆ, ಬಾಣಸಂಧಾನ ಒಂದೇ ಎಂದು ಅಷ್ಟೇನೂ ಹಿತೈಷಿಯಲ್ಲದ ಶಲ್ಯನಿಗೆ ಸವಾಲು ಹಾತ್ತಾನೆಂದರೆ ಸಾಮಾನ್ಯವಲ್ಲ. ಶಲ್ಯನೂ ಅದನ್ನು ಅಲ್ಲಗಳೆಯುವುದಿಲ್ಲ!
‘ಬಾಣದ ಗುರಿಯಷ್ಟೇ ಅಲ್ಲ; ನಾಲಗೆಯೂ ನನಗೆ ಒಂದೇ’ ನಿಮಿಷಕ್ಕೊಮ್ಮೆ ಮಾತು,ಮನೋಭಾವ, ಪಕ್ಷ  ಬದಲಿಸುವ ನಮಗೆ ಕರ್ಣ ಎಷ್ಟು ನಿಷ್ಠುರವಾದ ಸಂದೇಶ ನೀಡಿದ್ದಾನೆ!
ಮಹಾಭಾರತದ ಪಾತ್ರಗಳಲ್ಲೇ ವಿಶಿಷ್ಟವಾಗಿ, ಒಳಿತು ಕೆಡುಕುಗಳ ಸಂಗಮವಾಗಿ ಕಾಣುವ ಕರ್ಣನ ಗಟ್ಟಿತನಕ್ಕೆ ಕುಮಾರವ್ಯಾಸನ ಈ ಪದ್ಯ ಸಾಕ್ಷಿಯಾಗಿ ನಿಲ್ಲುತ್ತದೆ.

ಕುಮಾರವ್ಯಾಸ ಪ್ರತಿಷ್ಠಾನ
೨೧/೧೨/೨೦೧೬