Monday, April 10, 2017

ಐಸಲೇ ಕುಮಾರವ್ಯಾಸ! -೮೫-



ಐಸಲೇ ಕುಮಾರವ್ಯಾಸ!                           --

ಆದಿ ಪ ೧೫-೩

ಧನುಸ್ಸನ್ನು ಎತ್ತಬಂದ ಉಳಿದ ಅರಸರಿಗೂ ಅರ್ಜುನನಿಗೂ ಇರುವ ವ್ಯತ್ಯಾಸವೇನು?
 ಕುಮಾರವ್ಯಾಸ ಚಿತ್ರಿಸಿದ ಅರ್ಜುನನ  ಉನ್ನತ ಸಂಸ್ಕಾರದ ವಿವರ ಇಲ್ಲಿದೆ;

ಬರುವ ದಾರಿಯಲ್ಲೇ ಭೀಷ್ಮ, ದ್ರೋಣ, ಕೃಪಾಚಾರ್ಯರಿಗೆ ಮನಸ್ಸಿನಲ್ಲೇ ವಂದಿಸಿದ.ಯಾದವರ ಗುಂಪಿನಲ್ಲಿ ಕುಳಿತಿದ್ದ ಶ್ರೀಕೃಷ್ಣನನ್ನು ಕಣ್ಣಿನಲ್ಲೇ ಅಭಿವಂದಿಸಿದ.ಇಂದ್ರ, ಗಣಪ, ಷಣ್ಮುಖ, ದಿಕ್ಪಾಲಕರು, ಆದಿತ್ಯರು, ರುದ್ರ ಇವರಿಗೆ ನಮನ ಸಲ್ಲಿಸಿದ.

ಬಿಲ್ಲಿನ ಸಮೀಪಕ್ಕೆ ಬಂದವನೇ ತುದಿಯಲ್ಲಿ ಬಹ್ಮನನ್ನು, ಮಧ್ಯದಲ್ಲಿವಿಷ್ಣುವನ್ನೂ, ಮತ್ತೊಂದು ತುದಿಗೆ ಶಿವನನ್ನೂ ಆಹ್ವಾನಿಸಿದ. ಮಹಾ ರಾಜರುಗಳ ಬಿಂಕವನ್ನು ಭಂಗಿಸಿದ ಧನುಸ್ಸು ಇದೇ ಏನು? ಎಂದು ನಿರಾಯಾಸವಾಗಿ ಮೇಲಕ್ಕೆತ್ತಿ ಹೆದೆಯನ್ನು ತೊಡಿಸಿದ.ಕಿವಿಯವರೆಗೆ ತಿರುವನ್ನು ಸೆಳೆದು ತನ್ನಲ್ಲೇ ಹೇಳಿಕೊಂಡ ‘ಬಿಲ್ಲು ಮಾಗದಾದಿಗಳು ಹೆದರುವಷ್ಟು ಘನವಾದದ್ದರಂತೆ ಕಾಣುತ್ತಿಲ್ಲವಲ್ಲ! ಇರಲಿ ನನಗೆ ಹೆಸರು ಬರಲೆಂದೇ ಹಾಗೆ ಮಾಡಿರಬೇಕು’. ಐದು ಬಾಣಗಳನ್ನು ಹೂಡಿ ಕೆಳಗೆ ಹೊಳಹನ್ನು ನೋಡಿ ಗುರಿಯಿಟ್ಟ.

ಪರಿಣಾಮ ಹೇಳಬೇಕೇ? ಗುರಿ ತಾಗಿದ್ದೇ ಅಲ್ಲೋಲ ಕಲ್ಲೋಲವಾಯಿತು. ಹೇಗೆ?

ಆಯೆನುತ ಬೊಬ್ಬಿರಿದು ವಿಪ್ರ ನಿಕಾಯ ಕುಣಿದುದು,
ಕಮಲಮುಖಿ ನಿರ್ದಾಯದಲಿ ಸೇರಿದಳು ಹಾರುವಗೆನುತ
ಹರುಷದಲಿ
ಆ ಯುವತಿ ಜನ ಜಲಧಿ ಮಸಗಿತು
ಬಾಯ ಮೌನದ ಬೆರಳ ಮೂಗಿನ ರಾಯರಿದ್ದರು
ಬಿಗಿದ ಬೆರಗಿನ ಹೊತ್ತ ದುಗುಡದಲಿ…,’

ಮೊದಲ ಪ್ರತಿಕ್ರಿಯೆ ವಿಪ್ರ ಸಮುದಾಯದಿಂದ. ಈ ಅನಿರೀಕ್ಷಿತ ಸಾಧನೆಯಿಂದ ಉನ್ಮಾದಗೊಂಡು ಹಾರಿ ಕುಣಿದರು ;ದ್ರೌಪದಿ ಹಾರುವನೊಬ್ಬನ ಸೊತ್ತಾದಳು ಎಂಬ ಹರ್ಷೋದ್ಗಾರ!

ಸೋತ ರಾಜರನ್ನು ಗೇಲಿ ಮಾಡಿ ನಗುತ್ತಿದ್ದ ಯುವತಿಯರ ಗುಂಪಿನಲ್ಲಿ ಈ ಅನಿರೀಕ್ಷಿತ ಗೆಲುವಿನ ಗದ್ದಲದ ಸಂಭ್ರಮಾಚರಣೆ!

ದಿವ್ಯ ನಿರ್ಲಕ್ಷ್ಯ, ಅಹಂಹಾರದಿಂದ ಬೀಗುತ್ತಿದ್ದ ರಾಜ ಸಮೂಹದಲ್ಲಿ ಸಂಪೂರ್ಣ ಮೌನ;ಮೂಗಿನ ಮೇಲೆ ಬೆರಳು; ಅರಗಿಸಿಕೊಳ್ಳಲಾರದ ಬೆರಗು;ಜತೆಗೆ ಒಳಗೊಳಗೇ ಅಪಮಾನದ, ನಾಚಿಕೆಯ, ಕ್ರೋಧದ ಭಾವಗಳಿಂದ ಆದ ದುಗುಡ. ಯಾವ ಕ್ಷಣದಲ್ಲಾದರೂ ಸ್ಫೋಟಿಸುವ ಜ್ವಾಲಾಮುಖಿಯ ನೀರವತೆ!
ಕಿವಿ ಗಡಚಿಕ್ಕಿದ ಕೊಂಬು ಕಹಳೆಗಳ ಯಶೋಭೇರಿ ಮೊಳಗಿದ್ದೇ ತಡ, ಕತ್ತ್ತಿ ಹಿರಿದ ಸಹಸ್ರಾರು ವೀರ ಭಟರು ರಾಜಾಜ್ಞೆಯಂತೆ ಓಡಿ ಬಂದು ಅರ್ಜುನನ ಸುತ್ತ ಕಾವಲಿಗೆ ನಿಂತರಂತೆ!

ಗೆದ್ದ ವೀರ ತಾನೆ? ಅಸಂತುಷ್ಟ ರಾಜಸಮೂಹದಲ್ಲಿ ಏನು ಬೇಕಾದರೂ ಸಂಭವಿಸಬಹುದಲ್ಲವೇ? 

ಪ್ರಸಂಗವನ್ನು ಅತ್ಯಂತ ನಾಟಕೀಯವಾಗಿ,ಸ್ವಾರಸ್ಯಕರವಾಗಿ ವಿವರಿಸಿದ್ದಾನೆ ಕವಿ.

ಕುಮಾರವ್ಯಾಸ ಪ್ರತಿಷ್ಠಾನ
೭/೪/೨೦೧೭


No comments:

Post a Comment