Saturday, September 15, 2018

ಐಸಲೇ ಕುಮಾರವ್ಯಾಸ !! - ೧೨೮ -


ಐಸಲೇ ಕುಮಾರವ್ಯಾಸ !!                  -  ೧೨೮  -
ಉದ್ಯೋಗ -೪೧

ಎರಡು ಬಲವನು ಮಸೆದು ಕೊಲಿಸುವ
ಭರವೆ ಯಾದವನದು,ನಿಧಾನಿಸಲು
ಅರಿ ನಮಗೆ ಮುರವೈರಿಯಲ್ಲದೆ ಪಾಂಡುನಂದನರೆ?
ತರಿಸಿ ಹುರಿ ನೇಣುಗಳ
ಈತನ ಕರವೆರಡನೊಡೆ ಬಿಗಿದಡೆ
ಅವದಿರು ಕೆರಳಿ ಮಾಡುವುದಾವುದೆಂದನು ಕೌರವರ ರಾಯ..,’

ಶ್ರೀಹರಿ ಸಂಧಿಯ ಪ್ರಸ್ತಾಪ ನಡೆಸುತ್ತಿರುವಾಗಲೇ ದುರ್ಯೋಧನನಿಗೆ ದುರಾಲೋಚನೆ ಬಂತು. ಆಪ್ತರೊಂದಿಗೆ ಸಮಾಲೋಚನೆ ನಡೆಸಿದ. ಬೆಳವಣಿಗೆಗಳಿಗೆ ನೇರ ಹೊಣೆ ಶ್ರೀಕೃಷ್ಣನೇ ಸರಿ.
ಪಾಂಡವರಿಗೆ ಇಷ್ಟು ಧೈರ್ಯಎಲ್ಲಿಂದಬರಬೇಕು?

ಎರಡೂ ಕಡೆಯವರನ್ನು ಎತ್ತಿ ಕಟ್ಟಿ ಯುದ್ಧ ಮಾಡಿಸಿ ಎಲ್ಲರನ್ನೂಕೊಲ್ಲಿಸುವ ಹುನ್ನಾರ ಈಕೃಷ್ಣನದು ( ಯಾದವನದು ಎಂಬ ಏಕ ವಚನದ ಪ್ರಯೋಗ ಗಮನಿಸಿ).ಸರಿಯಾಗಿ ಯೋಚಿಸಿದರೆ ನಮಗೆ ಶತ್ರು ಮುರವೈರಿಯೇ ವಿನಾ ಪಾಂಡವರಲ್ಲ.
ಹಗ್ಗ,ಹುರಿಗಳನ್ನು ತರಿಸಿ, ಇವನ ಎರಡೂ ಕೈಗಳನ್ನು ಬಿಗಿಯಿರಿ. ಆಮೇಲೆ ಪಾಂಡವರು ಕೆರಳಿ ಅದೇನು ಮಾಡುತ್ತಾರೋ ನೋಡೋಣಎಂದು ಸಲಹೆ ನೀಡಿದ ಗುಪ್ತವಾಗಿ.

ಶ್ರೀಹರಿಯ ಸಂಧಿಯ ಮಾತುಗಳು ಭೀಷ್ಮ,ದ್ರೋಣಾದಿ ಹಿರಿಯರ ಮನಸ್ಸಿಗೆ ಹೌದು ಅನ್ನಿಸಿದವು.ಧೃತರಾಷ್ಟ್ರ, ಗಾಂಧಾರಿ,ವಿದುರ ಮುಂತಾದ ಹಿರಿಯರು ಸಹಾ ಹರಿಯ ಮಾತಿಗೆ ದನಿಗೂಡಿಸಲಾರಂಭಿಸಿದರು.ಸಂದರ್ಭ ಕೈತಪ್ಪುವ ಸೂಚನೆ ಕಂಡ ದುರ್ಯೋಧನನಿಗೆ ರಾವಣನಿಗೆ ಬಂದ ದುರಾಲೋಚನೆಯೇ ಬಂತು! ಅದು, ರಾಯಭಾರಿಯಾಗಿ ಬಂದಿರುವ ಹರಿಯನ್ನು ಬಂಧಿಸುವುದು!

ಇದರಿಂದ ಹರಿಯ ಉಪಟಳವನ್ನು ತಗ್ಗಿಸಿದಂತಾಗುತ್ತದೆ! ಪಾಂಡವರಲ್ಲಿ ಆತಂಕ, ಭಯದ ಅಲೆಯನ್ನು ಮೂಡಿಸಿದಂತಾಗುತ್ತದೆ! ಹಾಗೂ ತನ್ನ ಪದವಿಯ ಶಕ್ತಿಯನ್ನೂ ತೋರಿಸಿದಂತಾಗುತ್ತದೆ!
ಶ್ರೀಕೃಷ್ಣನನ್ನೇ ಬಂಧಿಸಿದನೆಂದು ತಿಳಿದರೆ ಧರ್ಮರಾಯ ಎಚ್ಚರಿಕೆ ವಹಿಸುತ್ತಾನೆ. ಎಚ್ಚರಿಕೆಯ ಸಂದೇಶವನ್ನೂ ಸಹಾ ರವಾನಿಸಿದಂತಾಗುತ್ತದೆ!

ಎಲ್ಲ ಕಾಲದ ಹತಾಶ ರಾಜಕಾರಣದಲ್ಲೂ ಅಂಶವನ್ನು ನಾವು ಗಮನಿಸಬಹುದು.ಇಂದಿನ ರಾಜಕಾರಣವೂ ಅದಕ್ಕೆ ಹೊರತಲ್ಲ.ಇದೇ ರಾಮಾಯಣ ಮಹಾಭಾರತಗಳ ಸಾರ್ವಕಾಲಿಕ ವ್ಯಾಪ್ತಿಯ ವಿಶೇಷ ಸಹಾ.

ಕುಮಾರವ್ಯಾಸ ಪ್ರತಿಷ್ಠಾನ
೧೪/೦೯/೨೦೧೮

No comments:

Post a Comment