Tuesday, October 10, 2017

ಐಸಲೇ ಕುಮಾರವ್ಯಾಸ! -೧೦೨



ಐಸಲೇ ಕುಮಾರವ್ಯಾಸ!                           -೧೦೨
ಭೀಷ್ಮ ಪ ೬-೩೭

ಭೀಷ್ಮನನ್ನು ಕೊಲ್ಲಲು ಚಕ್ರ ಹಿಡಿದು ನುಗ್ಗಿದ ಹರಿಯನ್ನು ಯಾರು ಎದುರಿಸ ಬೇಕು? ಯಾರು ಸಮಾಧಾನ ಮಾಡಬೇಕು? ಅವನ ಕೋಪದೆದುರು ನಿಲ್ಲುವ ಧೈರ್ಯ,ಸಾಮರ್ಥ್ಯ ಯಾರಿಗಿದೆ?

ನರಸಿಂಹನ ಕೋಪವನ್ನು ತಿದ್ದಲು ಪ್ರಹ್ಲಾದನೇ ಬರಬೇಕಾದಂತೆ, ಆ ಹೊಣೆಗಾರಿಕೆ ಭೀಷ್ಮನಿಗೇ ಬಂತು.ಅವನೆದುರಿಗೆ ಎರಡು ಆಯ್ಕೆಗಳು. ಹರಿಯನ್ನು ಪರಾಕ್ರಮದಿಂದ ಎದುರಿಸುವುದು ಒಂದು.ತನ್ನಲ್ಲಿರುವ ಪ್ರೇಮದಿಂದ ಭಕ್ತಿಯಿಂದ ಎದುರಿಸುವುದು ಇನ್ನೊಂದು.ಎರಡರಲ್ಲೂ ಸಮರ್ಥನೇ!
ಅತ್ಯಂತ ಅನುಭವಿಯಾದ, ಪ್ರಾಜ್ಞನಾದ ಭೀಷ್ಮ ಎರಡನೆಯ ಆಯ್ಕೆ ಮಾಡಿಕೊಂಡ. ಯುದ್ಧದ ಕ್ರೋಧ, ಆವೇಶದಿಂದ ನಿರಾಯಾಸವಾಗಿ ಭಕ್ತಿಯ ಮಡಿಲಿಗೆ ಜಾರಿಕೊಂಡ!


ಹರಿ ಮುಕುಂದ ಮುಕುಂದ ಲಕ್ಷ್ಮೀವರ ನೃಕೇಸರಿ ಎನುತ
ಚಾಪವ ಶರವನವನಿಗೆ ಬಿಸುಟು
ಮೈಯಿಕ್ಕಿದನು ಕಲಿ ಭೀಷ್ಮ
ಕರಯುಗವ ಮುರಿದೆದ್ದು, ಮುರಹರ ಸರಿಜಾಂಭಕ ರಾಮ ರಕ್ಷಿಸು
ತರಳನಲಿ ಗುಣದೋಷದರಕೆಯೆ ದೇವ ಹೇಳೆಂದ..,’


ಆಹಾ,ನಾರಾಯಣಾ,ಹರಿ, ಮುಕುಂದ, ನರಸಿಂಹಾ ಎಂದು ಭಕ್ತಿಭಾವದಿಂದ ಉದ್ಗರಿಸುತ್ತಾ ಬಿಲ್ಲು ಬಾಣಗಳನ್ನು ಭೂಮಿಗೆ ಎಸೆದು ನುಗ್ಗಿ ಬರುತ್ತಿರುವ ಶ್ರೀಕೃಷ್ಣನಿಗೆ ಉದ್ದಕ್ಕೆ ನಮಸ್ಕರಿಸಿದ! ಕೈಮುಗಿದುಕೊಂಡು ಎದ್ದುನಿಂತು ಮುರಹರ,ಶ್ರೀರಾಮಚಂದ್ರ,  ಇದೇನಿದು? ಮಗುವಿನಲ್ಲಿ ಗುಣ-ದೋಷಗಳನ್ನು ಎಣಿಸುತ್ತಿರುವೆ ? ಸರಿಯೇನು?’

ಆಸ್ತಿಕರಿಗೆ ರೋಮಾಂಚನ ಉಂಟುಮಾಡುವ ನುಡಿ, ನಡೆ ಭೀಷ್ಮನದು! ಪರಮ ಭಕ್ತರಿಗೆ ಮಾತ್ರಾ ಸಾಧ್ಯವಾಗುವಂಥದು.ಯುದ್ಧರಂಗದ ರೌದ್ರ ಸನ್ನಿವೇಶದಿಂದ ಕ್ಷಣಾರ್ಧದಲ್ಲಿ ಮನಸ್ಸನ್ನು ಭಕ್ತಿಯ ತೆಕ್ಕೆಗೆ ಬದಲಿಸಿಕೊಳ್ಳುವುದು ಸಾಮಾನ್ಯವೆ? ಅದರಲ್ಲೂ ಕೃಷ್ಣನ ಬಿರುನುಡಿಗಳನ್ನು ಕೇಳಿದ ಮೇಲೂ!

 ಭೀಷ್ಮನ ಉದ್ಗಾರಗಳನ್ನ ನೋಡಿ, ನರಸಿಂಹಾ, ರಾಮಚಂದ್ರಾ, ಮುರಹರ, ಮುಕುಂದಾ ಇತ್ಯಾದಿಯಾಗಿ ನಾರಾಯಣನ ಅನೇಕ ನಾಮಗಳನ್ನು ಉದ್ಗರಿಸುತ್ತಿದ್ದಾನೆ.ಅಂತರಂಗದಲ್ಲೇ ಸುಪ್ತವಾಗಿದ್ದ ಭೀಷ್ಮನ ಭಕ್ತಿಯ ಕಟ್ಟೆಯೊಡೆದು ಪ್ರವಾಹದಂತೆ ಹರಿಯುತ್ತದೆ.ಭೀಷ್ಮ ಭಯಕ್ಕಿಂತಾ ಆಶ್ಚರ್ಯ ಪ್ರಕಟಪಡಿಸುತ್ತಿದ್ದಾನೆ.ನಾರಾಯಣನಾದ ನೀನೆಲ್ಲಿ,ನಿನ್ನ ಶಿಶುವಾದ ನಾನೆಲ್ಲಿ?ನನ್ನೆಡೆಗೆ ನೀನು ನುಗ್ಗಿ ಬರುವಷ್ಟು ನಾನ್ಯಾವಾಗ ದೊಡ್ಡವನಾದೆ? ಎಂಬ ಭಾವ!
  
ಇಡೀ ರಣರಂಗ ಎಲ್ಲಿ ತೀವ್ರ ಭಯ,ಆತಂಕವನ್ನು ಅನುಭವಿಸುತ್ತಾ ದಿಗಿಲುಗೊಂಡಿದೆಯೋ ಅಲ್ಲಿ ಸ್ವಲ್ಪವೂ ಅಧೀರನಾಗದೇ ಲೀಲಾಜಾಲವಾಗಿ ಭಕ್ತಿಯ ದಿಟ್ಟತನವನ್ನು ಪ್ರದರ್ಶಿಸುತ್ತಿದ್ದಾನೆ ಭೀಷ್ಮ!

(ನಾರಾಯಣನ ಅವತಾರ ಎನ್ನಿಸಿದ ಶ್ರೀರಾಮನ ಬಗೆಗೂ ಕವಿಗೆ ಅತ್ಯಂತ ಆದರ,ಭಕ್ತಿ.ಅವಕಾಶ ದೊರೆತಲ್ಲೆಲ್ಲಾ ಶ್ರೀಕೃಷ್ಣನನ್ನುರಾಮಎಂದು ಸಂಬೋಧಿಸುವುದು ಬಲು ಮೆಚ್ಚು! ಮೊದಲ ಪದ್ಯದಲ್ಲೇ ರಾವಣಾಸುರ ಮಥನ! ಎಂದಿರುವುದನ್ನು ಗಮನಿಸಿ)

ಕುಮಾರವ್ಯಾಸ ಪ್ರತಿಷ್ಠಾನ
/೧೦/೨೦೧೭

No comments:

Post a Comment