Thursday, October 5, 2017

ಐಸಲೇ ಕುಮಾರವ್ಯಾಸ! -೧೦೧-



ಐಸಲೇ ಕುಮಾರವ್ಯಾಸ!                           -೧೦೧-
ಭೀಷ್ಮ ಪ ೬-೩೫

‘ತುಡುಕಿದನು ಚಕ್ರವನು,
ರಥದಿಂ ಪೊಡವಿಯೊಳು ಧುಮ್ಮಿಕ್ಕಿದನು,
ಹತ್ತಡವ ಹಾಯಿಕಿ ಹರಿದನು, ಒಡಬಿದ್ದವರನೊಡೆತುಳಿದು..
ಸುಡುವೆನಹಿತಾನ್ವಯವ,
ಭೀಷ್ಮನ ಕಡಿದು ಭೂತಗಣಕ್ಕೆ ಬೋನವ ಬಡಿಸುವೆನು
ನೋಡಿಲ್ಲಿ ಮೇಳವೇ ಎನುತ ಸೈವರಿದ..’

(ಪೊಡವಿ-ಭೂಮಿ; ಹತ್ತಡ-ದಾಪುಗಾಲು; ಅಹಿತಾನ್ವಯ=ಅಹಿತ-ಶತ್ರು,  ಅನ್ವಯ-ವಂಶ; ಬೋನ-ಭೋಜನ)

‘ಚಕ್ರವನ್ನು ತುಡುಕಿ ಹಿಡಿದುಕೊಂಡ ಶ್ರೀಹರಿ ಅರ್ಜುನನ ರಥದಿಂದ ಕೆಳಕ್ಕೆ ಧುಮುಕಿದ! ದಾಪುಗಾಲು ಹಾಕುತ್ತಾ ಭೀಷ್ಮನ ಕಡೆಗೆ ನುಗ್ಗಿದ! ಭಕ್ತಿಯಿಂದಲೋ, ಭಯದಿಂದಲೋ ಎದುರು ಬಿದ್ದವರನ್ನು ತುಳಿದುಕೊಂಡೇ ನುಗ್ಗಿದ. ಬಾಯಲ್ಲಿ ಒಂದೇ ಮಂತ್ರ, ಈ ದಿನ ಶತ್ರುಗಳ ವಂಶವನ್ನೇ ನಾಶ ಮಾಡಿಬಿಡುತ್ತೇನೆ; ಈ ಭೀಷ್ಮನನ್ನು ಕಡಿದು ತುಂಡುಮಾಡಿ ಭೂತಗಣಗಳಿಗೆ ಔತಣ ಮಾಡುತ್ತೇನೆ, ನನಗೆ ಸರಿಯೇನು ಅವನು?’

ಶ್ರೀಕೃಷ್ಣನ ಕೋಪ ಹೇಗಾದರೂ ತಣ್ಣಗಾಗಬಹುದು ಎಂದುಕೊಂಡವರ ಊಹೆ ತಪ್ಪಾಯಿತು! ಕೃಷ್ಣನ ಕೋಪದ ತೀವ್ರತೆ ಸರ್ವ ವಿದಿತವಾಗಿತ್ತು.ಯಾರ ಎದುರು ಅವನು ಕೋಪಗೊಂಡು ಎರಗಿಹೋಗುತ್ತಾನೋ ಅವರ ಸಮಾಪ್ತಿ!
ಇತ್ತ ಭೀಷ್ಮ?ಯಾರಿಗೂ ಸೋಲದ ಅಜೇಯ ವೀರ! ತನ್ನ ಗುರು, ಆ ಯುಗದ ಮಹಾಪುರುಷ ಪರಶುರಾಮನನ್ನು ಸಹಾ ಗೆದ್ದವನು.ಹಾಗಿದ್ದಲ್ಲಿ ಗತಿ?

ಮಹಾಭಾರತ ಯುದ್ಧ ಭೀಷ್ಮ-ಕೃಷ್ಣರ ಹಣಾಹಣಿಯಾಗುತ್ತೇನು?ಶಿವ ಶಿವ ಏನಾಗುವುದೋ ಎಂಬ ಉದ್ಗಾರ ಇಡೀ ಜಗದಲ್ಲಿ! ಕೌರವರ ಸೈನ್ಯ ಚದುರಲು ಆರಂಭಿಸಿತು! ಪಾಂಡವರು ಸಹಾ ಇದನ್ನು ನಿರೀಕ್ಷಿಸಿರಲಿಲ್ಲ, ಅವರೂ ಸಹಾ ಸಣ್ಣಗೆ ನಡುಗಿದರು.ದಾವಾನಲ ಹತ್ತಿ ಉರಿದರೆ ಅದು ಯಾರನ್ನು ಉಳಿಸುತ್ತದೆ? ಅರ್ಜುನನ ಕಥೆ? ಕವಿ ಹೇಳುತ್ತಾನೆ;’ಪಾರ್ಥ ಬಲುಗರವವಚಿದಂತಿರೆ ಮೂಕನಾದನು,ಬೆರಳ ಮೂಗಿನಲಿ…’ (ದೊಡ್ಡ ಗ್ರಹ ಮೆಟ್ಟಿಕೊಂಡವನಂತೆ ಮೂಕನಾಗಿ ಬೆರಗಾಗಿ ಹೋದ)
ಚಕ್ರ ಹಿಡಿದು ನುಗ್ಗಿದ ಕೃಷ್ಣನ ಆರ್ಭಟಕ್ಕೆ ಇಡೀ ಯುದ್ಧರಂಗ ಸ್ಥಂಭೀಭೂತವಾಯಿತು. ಆ ಬೆರಗನ್ನು ಕವಿ ಸಮರ್ಥವಾಗಿ ನಿರ್ಮಿಸಿದ್ದಾನೆ.
ಕುಮಾರವ್ಯಾಸ ಪ್ರತಿಷ್ಠಾನ
೪/೧೦/೨೧೦೭

No comments:

Post a Comment