Wednesday, October 18, 2017

ಐಸಲೇ ಕುಮಾರವ್ಯಾಸ! -೧೦೩-



ಐಸಲೇ ಕುಮಾರವ್ಯಾಸ!                           -೧೦೩-
ಭೀಷ್ಮ ಪ  ೬-೩೯

ಭೀಷ್ಮನ ವರ್ತನೆ ಅವನ ಅನುಭವೀ ವ್ಯಕ್ತಿತ್ವಕ್ಕೆ ತಕ್ಕ ಹಾಗೆ ಪಕ್ವವಾದದ್ದು. ಶ್ರೀಕೃಷ್ಣನ ಕ್ರೋಧಕ್ಕೆ ಪ್ರತಿಯಾಗಿ ಕ್ರೋಧವೂ ಇಲ್ಲ. ಪರಮಾತ್ಮಸೆಂಬ ಭಯವೂ ಇಲ್ಲ. ಕೋಪಗೊಂಡ ತಂದೆಯ ಎದುರು ತಮಾಷೆ ಮಾಡುವ ಮಗನ ಹಾಗೆ! ಅವನ ಮಾತಿನಲ್ಲಿರುವ ಸರಳತೆ ಹಾಗೂ ಗಾಂಭೀರ್ಯ ಎರಡೂ ಮೇಳೈಸಿದ ಭಾವ ನೋಡಿ;

ದೇವ, ನಿಮ್ಮಯ ಖಾತಿ ಪರ್ಯಂತಾವು ಲಕ್ಷ್ಯವೇ?
ಜೀಯ, ನೊರಜಿನ ದೇವಗಿರಿಯಂತರವೆ? ಸಂಭಾವನೆಯೆ ನನ್ನೊಡನೆ?
ದೇವ ಮುನಿಗಳ ನಗೆಯ ನೋಡದೆ
ಇದಾವುದುಚಿತವ ಮಾಡಿದಿರಿ?
ಮಹಿಮಾವಲಂಬವ ಮರೆದುದಕೆ ನಗೆ ಬಂದುದೆನಗೆಂದ’

‘ದೇವಾ, ನಿನಗೆ ಕೋಪ ತರಿಸುವಷ್ಟು ನಾನು ದೊಡ್ಡವನೇನು? ನೊರಜಿಗೆ (ನುಸಿ; ಸಣ್ಣ ಕೀಟ)ಸಮನಾದ ನಾನೆಲ್ಲಿ? ಮೇರು ಪರ್ವತವಾದ ನೀನೆಲ್ಲಿ?  ನನ್ನೊಂದಿಗೆ ಇಷ್ಟು ದೊಡ್ಡ ವರ್ತನೆಯೆ?ನಿನ್ನ ಪರಮಾತ್ಮ ಸ್ವರೂಪವನ್ನು ಅರಿತಿರುವ ದೇವತೆಗಳು, ಮುನಿಗಳು ಈ ನಿನ್ನ ವ್ಯವಹಾರವನ್ನು ನೋಡಿ ನಗಲಾರರೇನು? ನಿನ್ನ ವರ್ತನೆ ಉಚಿತವೇನು? ನಿನ್ನ ಮಹಿಮೆಯನ್ನೂ ಮರೆತು ನಡೆತ್ತಿರುವುದನ್ನು ನೋಡಿ ನನಗೆ ನಗೆ ಬರುತ್ತಿದೆ ಕೃಷ್ಣಾ’

 ಭಕ್ತನಾದ ಭೀಷ್ಮ ಹರಿಗೆ ಅವನ ಮಹಿಮೆಯನ್ನು ಸೂಕ್ಷ್ಮವಾಗಿ ನೆನಪು ಮಾಡಿಕೊಡುತ್ತಿದ್ದಾನೆ.ತನ್ನ ಅರಾಧ್ಯ ದೈವ ಹರಿಗೆ ಅಪಚಾರವಾಗುವುದು ಅವನಿಗೆ ಬೇಡ. ತನ್ನ ಮೇಲೆ ಹರಿ ಹರಿಹಾಯ್ದು ಬರುವುದು ಅವನಿಗೆ ಬೇಸರವಿಲ್ಲ. ಆದರೆ ಹರಿಯ ಮಹಿಮೆ ಮಾಸುವುದು ಇಷ್ಟವಿಲ್ಲ. ಅಂಥಾ ನೈಜ ಭಕ್ತಿ;ಅವ್ಯಾಜ ಪ್ರೇಮ!
ಸಂದರ್ಭದ ಗಾಂಭೀರ್ಯವನ್ನು ಹಗುರಗೊಳಿಸುವ ಭೀಷ್ಮನ ಮಾತುಗಳು ‘ಅತ್ಯುನ್ನತಿಯೊಳಮರ ಸಿಂದೂದ್ಭವಂ,’ ಎಂಬ ಪಂಪನ ಹೊಗಳಿಕೆಯನ್ನು ಸಮರ್ಥಿಸುತ್ತವೆ

ಕುಮಾರವ್ಯಾಸ ಪ್ರತಿಷ್ಠಾನ
೧೮/೧೦/೨೦೧೭

No comments:

Post a Comment