Saturday, September 30, 2017

ಐಸಲೇ ಕುಮಾರವ್ಯಾಸ! -೧೦೦-



ಐಸಲೇ ಕುಮಾರವ್ಯಾಸ!                           -೧೦೦-
ಭೀಷ್ಮ ಪ ೬-೩೧

ಶ್ರೀಕೃಷ್ಣನ ಕೋಪ ಹೆಚ್ಚುತ್ತಾ ಹೋಯಿತು!

ಇಡೀ ಮಹಾಭಾರತದಲ್ಲೇ ಅಪೂರ್ವ ಎನಿಸುವ ಶ್ರೀಹರಿಯ ಕ್ರೋಧದ ಪರಿಣಾಮವನ್ನು ಕುಮಾರವ್ಯಾಸ ಅಷ್ಟೇ ಅತಿಶಯವಾದ ಮಾತುಗಳಲ್ಲಿ ಹೇಳಿದ್ದಾನೆ.

ಇನ್ನೆಲ್ಲಿಯ ಭೂಮಿ? ಎಲ್ಲಿಯ ಪರ್ವತಗಳು?ಎಲ್ಲಿಯ ದೇವತೆಗಳು? ಎಲ್ಲಿಯ ಹರ, ಬ್ರಹ್ಮಾದಿಗಳು? ಲೋಕವನ್ನು ಕಾಪಾಡಬೇಕಾದ ವಿಷ್ಣು ಸಂಹಾರಕಾರ್ಯಕ್ಕಿಳಿದಾಯಿತು, ಅಕಾಲದಲ್ಲಿ ಪ್ರಳಯ ವಾದಂತೆಯೇ ಸರಿ ಎಂದು ದೇವತೆಗಳು ಗಾಬರಿಯಾದರು! ತಾವರೆ ಎಲೆಯ ನೀರಹನಿಯಂತೆ ಬ್ರಹ್ಮಾಂಡ ಅಲುಗಾಡಲಾರಂಭಿಸಿತು! ಸಮುದ್ರದ ನೀರು ಪ್ರಳಯದ ಮುನ್ಸೂಚನೆಯನ್ನು ನೀಡುವಂತೆ ತಗ್ಗಿತು! ಈ ಭೂಮಿಯ ನಾಶ ಸಿದ್ಧವಾಯಿತು, ಯಾರಾದರೂ ಇದನ್ನು ಪರಿಹರಿಸಲಾರರೇ? ಎಂದು ಸೃಷ್ಟಿಕರ್ತನಾದ ಬ್ರಹ್ಮ ಆತಂಕಗೊಂಡ

ಶ್ರೀಹರಿಯ ಇಚ್ಛೆಯಂತೆ ಸುದರ್ಶನ ಚಕ್ರ ಪ್ರತ್ಯಕ್ಷವಾಯಿತು.ಇದು ಮತ್ತಷ್ಟು ನಡುಕ ಹುಟ್ಟಿಸಿತು!

ಮುರಮಥನ ಕೆಲ್ಲೈಸಿ ನೋಡಿದನು
ಉರುಭಯಂಕರ ಚಕ್ರವನು,
ದುರ್ಧರುಷ ಧಾರಾಲೂಯಮಾನ ನಿಶಾತ ಚಕ್ರವನು
ತರಳ ತರಣೀ ಚಕ್ರವನು, ಸಂಗರ ವಿನಿರ್ಜಿತ ಚಕ್ರವನು
ಭಯ ಭರ ವಿವರ್ಜಿತ ಚಕ್ರವನು
ಕಡುಗೋಪ ಕಿಡಿಯಿಡಲು….’

( ಕೆಲ್ಲೈಸಿ-ದಿಟ್ಟಿಸಿ; ಧಾರಾಲೂಯಮಾನ-ಹರಿತವಾದ ಮೊನೆಗಳಿಂದ ಹೊಳೆಯುತ್ತಿರುವ; ತರಣಿ-ಸೂರ್ಯ;ಸಂಗರ-ಯುದ್ಧ)

ಶ್ರೀಕೃಷ್ಣ ಚಕ್ರವನ್ನು ತೀಕ್ಷ್ಣವಾದ ನೋಟದಿಂದ ನೋಡಿದ. ಅತ್ಯಂತ ಭಯಂಕರವಾಗಿದೆ! ತಡೆಯಲು ಅಸಾಧ್ಯ ಎನಿಸುವ ಹರಿತವಾದ ಮೊನೆಗಳು ಬೆಂಕಿಯನ್ನು ಉಗುಳುತ್ತಿರುವಂತಿದೆ!ಎಳೆಯ ರವಿಯಂತೆ ಹೊಳೆಯುತ್ತಿದೆ! ಈ ಹಿಂದಿನ ಎಲ್ಲಾ ಯುಧ್ಧದಲ್ಲೂ ಹರಿಗೆ ಗೆಲುವನ್ನೇ ತಂದುಕೊಟ್ಟ ವಿಶೇಷ ಆಯುಧ! ಭಯವೆಂಬುದನ್ನೇ ಅರಿಯದ ಚಕ್ರ! ಕೋಪದಿಂದ ಕಿಡಿಕಿಡಿಯಾದ ಹರಿ ಅದರ ಪ್ರಯೋಗಕ್ಕೆ ಅಣಿಯಾಗುತ್ತಿದ್ದಾನೆ!’

ಚಕ್ರಶಬ್ದವನ್ನು ಪುನರಾವರ್ತಿಸುತ್ತಾ , ಕುಮಾರವ್ಯಾಸ ಕನ್ನಡ-ಸಂಸ್ಕೃತದ ಹದವಾದ ಮಿಶ್ರಣದಿಂದ ಕೊಡುವ ವಿಶೇಷಣಗಳ ಸೊಬಗನ್ನು ಓದಿಯೇ ಅನುಭವಿಸಬೇಕು! ಅದೆಂಥಾ ಮಹತ್ವದ ಆಯುಧ? ಹಿಂದಿನ ಯುಧ್ಧಗಳಲ್ಲಿ ಅದರ ಪರಿಣಾಮದ ತೀವ್ರತೆಯೇನು? ಅದಕ್ಕೆಂಥಾ ಅಪೂರ್ವವಾದ ಚರಿತ್ರೆ ಭಾಗವತದಲ್ಲಿ ಇದೆ! ಇದನ್ನೆಲ್ಲಾ ನೆನಪಿಸುವುದರ ಜೊತೆಗೆ ಪ್ರಸಂಗದ ಗಾಂಭೀರ್ಯ,ಕುತೂಹಲವನ್ನು ಪರಾಕಾಷ್ಠೆಗೆ ಒಯ್ಯುತ್ತದೆ

ಕುಮಾರವ್ಯಾಸ ಪ್ರತಿಷ್ಠಾನ
೨೯//೨೦೧೭

No comments:

Post a Comment