ಐಸಲೇ ಕುಮಾರವ್ಯಾಸ! -೯೮-
ಭೀಷ್ಮಪ ೬-೨೬
ಭೀಷ್ಮನ ಬಾಣ ಶ್ರೀಕೃಷ್ಣನ ಹಣೆಯನ್ನು
ಹೊಕ್ಕು ಘಾಸಿ ಮಾಡಿತಷ್ಟೆ? ಬಾಣವನ್ನು ಕಿತ್ತು
ಬಿಸುಟ ಹರಿಗೆ ನೋವು, ಆಘಾತಗಳಿಂದ ಸೈರಣೆ ತಪ್ಪಿದ್ದೂ ಹೌದು!
ಆ ಕ್ಷಣದ ಶ್ರೀಕೃಷ್ಣನ ಚಿತ್ರ ಹೇಗಿತ್ತು?
‘ಕೆಂಪ ಕಾರಿದವಾಲಿಗಳು,
ಮೈ ಕಂಪಿಸಿದುದಡಿಗಡಿಗೆ
ರೋಷದ ಬಿಂಪಿನೊಳು ತಗ್ಗಿದನು, ಗಂಟಿಕ್ಕಿದನು ಹುಬ್ಬುಗಳ..
ಸೊಂಪುಗೆಟ್ಟುದು ಸಿರಿವದನ ,ಮನದಿಂಪು ಬೀತುದು,
ಭಕ್ತ ಮೋಹದಲಂಪು ಮಸುಳಿತು,
ಬಿಸುಟು ಕಳೆದನು ರಥದ ವಾಘೆಗಳ..’
(ಬಿಂಪು-ಬಿಗಿತ; ಅಲಂಪು-ಪ್ರೀತಿ; ಮಸುಳಿತು-ತಗ್ಗಿತು; ವಾಘೆ-ಲಗಾಮು,ಕುದುರೆನಿಯಂತ್ರಿಸುವ ಹಗ್ಗ)
‘ಕೋಪದಿಂದಾಗಿ ಕೃಷ್ಣನ ಕಣ್ಣುಗಳು
ಕಡುಕೆಂಪನ್ನು ಕಾರಿದವು!ಮೈ ಕೂಡಾ ನಡುಗಿತು.ಅತಿಶಯವಾದ ರೋಷದಿಂದ ಹುಬ್ಬುಗಳು ತಾನೇ ತಾನಾಗಿ ಗಂಟಿಕ್ಕಿಕೊಂಡವು.
ಪ್ರಸನ್ನವಾಗಿರುತ್ತಿದ್ದ ‘ಸಿರಿವದನ’ ಅಂದಗೆಟ್ಟಿತು! ಮನದ ಉಲ್ಲಾಸ ಮಾಸಿತು.ಭಕುತನ ಬಗೆಗೆ ಯಾವಾಗಲೂ ಇರುತ್ತಿದ್ದ ಪ್ರೇಮ ಸಹಾ ಕ್ಷಣ ಮಸುಕಾಯಿತು.
ಪರಿಣಾಮ; ಕೈಯಲ್ಲಿ ಹಿಡಿದಿದ್ದ ರಥ ನಡೆಸುವ ಹಗ್ಗ(ಲಗಾಮು)ವನ್ನು ಕಿತ್ತೆಸೆದ ಶ್ರೀಕೃಷ್ಣ!
ಅಗಾಧವಾದ ಕೋಪದಿಂದ ಹರಿಯ ದೇಹ, ಮನಸ್ಸಿನಲ್ಲಾದ ಪಲ್ಲಟವನ್ನು ಒಂದೊಂದಾಗಿ ವರ್ಣಿಸುತ್ತಾನೆ
ಕವಿ.’ಸೊಂಪುಗೆಟ್ಟುದು ಸಿರಿವದನ’ ಪ್ರಯೋಗ ಗಮನಿಸಿ.
ಹರಿಯ ಮುಖ ಯಾವಾಗಲೂ ಲಲಿತ; ಸುಂದರ.ಅದರಲ್ಲಿ ಈಗ ಕಾಠಿಣ್ಯತುಂಬಿದೆ! ತನ್ನನ್ನು ನೋಯಿಸಿದ ಭೀಷ್ಮ ಪರಮ ಭಕ್ತ ಎನ್ನುವ ಕಾರುಣ್ಯಭಾವ ಸಹಾ ಮಾಯ!
ಮುಂಬರುವ ಅಪಾಯದ ಮುನ್ಸೂಚನೆಯೋ ಎನ್ನುವ
ಹಾಗೆ ಕೃಷ್ಣನ ಕೈಯಿಂದ ಹಗ್ಗ ಜಾರಿತು ಎನ್ನುವುದನ್ನು ಕೊನೆಯ ಸಾಲಿನಲ್ಲಿ ಧ್ವನಿಸುತ್ತದೆ ಪದ್ಯ! ವೀರ ರಸದಿಂದ ರೌದ್ರದೆಡೆಗೆ ಜಾರುವ ಪ್ರಸಂಗವನ್ನು ಕವಿಯ
ಮಾತುಗಳು ಸಮರ್ಥವಾಗಿ ಅಭಿವ್ಯಕ್ತಿಸುತ್ತವೆ;
ಮುಂದೇನು? ಎಂಬ ಆತಂಕ,ಕುತೂಹಲವನ್ನು
ಹಿಡಿದಿಡುತ್ತವೆ.
ಕುಮಾರವ್ಯಾಸ ಪ್ರತಿಷ್ಠಾನ
೨೫/೯/೨೦೧೭
No comments:
Post a Comment