ಐಸಲೇ ಕುಮಾರವ್ಯಾಸ! -೯೯-
ಭೀಷ್ಮ ಪ ೬-೨೭
‘ಕೆಂಡವಾಗಲಿ ಲೋಕ;
ದಿವಿಜರ ಹೆಂಡಿರೋಲೆಯು ಕಳೆದು ಹೋಗಲಿ
ದಿಂಡುಗೆಡೆಯಲಿ ಮೇರು; ಮೇದಿನಿ ನಿಲಲಿ ವಿತಳದಲಿ..,
ಗಂಡುಗೆಡಿಸಿದರಿಲ್ಲ ದಾನವ ದಿಂಡೆಯರು
ಹಲರೆಮ್ಮೊಡನೆ ಮಾರ್ಕೊಂಡವರು
ಮಾಮಾ ಪ್ರತಿಜ್ಞೆಯ ತೊಡಕು ಬೇಡೆಂದ..,’
(ದಿವಿಜ-ದೇವತೆ; ದಿಂಡುಗೆಡೆ-ಕುಸಿ;ಉರುಳು;
ಮೇದಿನಿ-ಭೂಮಿ; ದಿಂಡೆಯರು-ವೀರರು; ಮಾರ್ಕೊಳ್ಳು-ಎದುರಾಗು)
ಕೋಪಗೊಂಡ ಶ್ರೀಕೃಷ್ಣನ ಬಾಯಿಂದ ಬರುವ
ಬೆಂಕಿಯ ಕಿಡಿಗಳಂಥಾ ಮಾತುಗಳನ್ನು ಕವಿ ಅದ್ಭುತವಾದ ಭಾಷೆಯಲ್ಲಿ ಹಿಡಿದಿಟ್ಟಿರುವುದನ್ನು ಗಮನಿಸಿ.
‘ಈ ದಿನ ಇಡೀ ಲೋಕ ಉರಿದು ಹೋದರೂ
ಚಿಂತೆಯಿಲ್ಲ. ದೇವತೆಗಳ ಹೆಂಡತಿಯರ ಓಲೆಗಳು ಕಳೆದು ಹೋದರೂ ಸರಿಯೆ!(
ದೇವತಾ ಸ್ತ್ರೀಯರು ವಿಧವೆಯರಾದರೂ ಸರಿ;ಅಂದರೆ ಈ ದಿನ ನನ್ನನ್ನು
ಯಾವ ದೇವತೆ ಎದುರಿಸಿದರೂ ಅಮರತ್ವ ಅಳಿದು ಸಾಯುವುದು ಖಚಿತ
ಎಂಬರ್ಥ!)ಮೇರು ಪರ್ವತ ಉರುಳಿಹೋಗಲಿ;
ಭೂಮಿ ಆಧಾರ ತಪ್ಪಿ ವಿತಳದಲ್ಲಿ ಬಿದ್ದರೂ ಸರಿಯೆ! (ನಾನು
ಹಿಮ್ಮೆಟ್ಟುವವನಲ್ಲ)
ಹಲವಾರು ಕ್ರೂರರಾಕ್ಷಸರೊಂದಿಗೆ ಕಾದಿದ್ದೇನೆ.ಯಾರೂ ಸಹಾ
ನನ್ನನ್ನು ಇಷ್ಟು ಅಪಮಾನಿಸಲಿಲ್ಲ; ಅಯುಧ ಹಿಡಿಯಲಾರೆ
ಎಂದು ಪ್ರತಿಜ್ಞೆ ಮಾಡಿದ್ದೇನೆ ನಿಜ ಆದರೆ ಈಗ ಆ ತೊಡಕು ಬೇಕಿಲ್ಲ(ಭೀಷ್ಮನಿಗೆ ತಕ್ಕ ಪಾಠ ಕಲಿಸುತ್ತೇನೆ)’
ಕೋಪದ ತೀವ್ರತೆ ಆ ಮಾತುಗಳಲ್ಲಿ ವ್ಯಕ್ತವಾಗುತ್ತದೆ.
‘ದೇವರೆಂದೇ ನೀವು ಬಗೆವಿರಿ ದೇವತನ
ನಮ್ಮಲ್ಲಿ ಲವವಿಲ್ಲ’ ತಾನು ಕೂಡಾ ಎಲ್ಲರಂತೆ ಸಾಮಾನ್ಯನೇ ಎಂದೇ ಹೇಳುವ ಶ್ರೀಕೃಷ್ಣ
ರೋಷದಿಂದ ಹೇಳುವ ಮಾತುಗಳಲ್ಲಿ ತನ್ನ ಅತಿಮಾನುಷತೆಯ ರಹಸ್ಯವನ್ನು ಹೊರಗೆಡಹುತ್ತಿದ್ದಾನೆ.
ತನಗೆ ಬಂದ ಕೋಪ ಲೋಕವನ್ನು ಸುಡಬಲ್ಲುದು; ಭೂಮಿಯ ಆಧಾರವನ್ನೇ
ಪಲ್ಲಟಿಸಬಲ್ಲುದು; ದೇವತೆಗಳ ಹೆಂಡಿರ ಓಲೆಯನ್ನು ಕಳೆಯಬಲ್ಲುದು!
ಸಾವಿರಾರು ಬಲಶಾಲಿ ರಾಕ್ಷಸರೊಡನೆ ಕಾದಿದ್ದೇನೆ,ಇಷ್ಟು
ಹಿಂಸೆಯನ್ನು ನಾನು ಅನುಭವಿಸಿದ್ದಿಲ್ಲ!
ಶ್ರೀಕೃಷ್ಣನ ಮಾತುಗಳು ಪ್ರಸಂಗದ
ಗಾಂಭೀರ್ಯವನ್ನು ಮತ್ತಷ್ಟು ಹಿಗ್ಗಿಸುತ್ತವೆ.ಈ ಕೋಪದ ಪರಿಣಾಮ ಏನಾಗಬಲ್ಲುದು ಎಂಬ ಆತಂಕಕ್ಕೆ ಎಡೆಗೊಡುವುದಲ್ಲದೆ,ಕೃಷ್ಣನನ್ನು ಈ ಮಟ್ಟದ ರೋಷಕ್ಕೆ ಎಡೆಮಾಡಿದ ಭೀಷ್ಮನ ಸಾಮರ್ಥ್ಯದ ಬಗೆಗೂ ಅರಿವು ಮೂಡಿಸುತ್ತವೆ.
ಕನ್ನಡದ ಕಾವ್ಯಮಯ ಆಡುಮಾತುಗಳಲ್ಲಿ
ಕವಿ ಪ್ರಕಟಗೊಳಿಸಿರುವ ಶ್ರೀಹರಿಯ ರೋಷಾವೇಷ, ಭಾಷೆಯ ಅಗಾಧ ಶಕ್ತಿಯನ್ನು ಸಹಾ ಪರಿಚಯಿಸುತ್ತದೆ.ಅಲ್ಲವೇ?
ಕುಮಾರವ್ಯಾಸ ಪ್ರತಿಷ್ಠಾನ
೨೭/೯/೨೦೧೭
No comments:
Post a Comment