ಐಸಲೇ
ಕುಮಾರವ್ಯಾಸ! -೭೪-
ಅರಣ್ಯ
ಪ
೮-೪೩
ಕ್ರೋಧಗೊಂಡ ಊರ್ವಶಿಯನ್ನು ಕುಮಾರವ್ಯಾಸ
ವಿಶೇಷವಾಗಿ ವರ್ಣಿಸಿದ್ದನ್ನು ನೋಡಿದೆವು.ಅಷ್ಟೇ ಬಿರುಸಾಗಿದೆ ಅವಳ ಮಾತುಗಳು ಹಾಗೂ ಶಾಪ. ಕೋಪದಿಂದ ಬುಸುಗುಡುತ್ತಾ
ನುಡಿಯುತ್ತಾಳೆ;
‘ನರ ಮೃಗಾಧಮ,
ನಿಮ್ಮ ಭಾರತವರ್ಷ ಭೂಮಿಯೊಳು,
ಒಂದು ವರುಷಾಂತರ ನಪುಂಸಕನಾಗಿ ಚರಿಸು
ನಿರಂತರಾಯದಲಿ
ಹರಿಯ ಮೊರೆಯೊಗು, ಹರನ ನೀನನುಸರಿಸು
ನಿಮ್ಮಯ್ಯಂಗೆ ಹೇಳು,
ಇದು ನಿರುತ ತಪ್ಪದು ಹೋಗು,
ಎನುತ ಮೊಗದಿರುಹಿದಳು ಚಪಲೆ..,’
‘ಎಲವೋ ನರಮೃಗವೇ!
ನಿಮ್ಮ ಭಾರತ ಭೂಮಿಯಲ್ಲಿ ಒಂದು ವರ್ಷ ಕಾಲ ನಿರಂತರವಾಗಿ ನಪುಂಸಕನಾಗಿ ಜೀವಿಸು,ಇದು ನನ್ನ ಶಾಪ. ಹರಿಯ ಮೊರೆಹೊಕ್ಕರೂ, ಶಿವನನ್ನು ಬೇಡಿದರೂ,ನಿನ್ನ ಅಪ್ಪ ಇಂದ್ರನಿಗೆ ಹೇಳಿದರೂ ಇದು ತಪ್ಪುವುದಿಲ್ಲ’
ಎಂದು ಬಿರುಸಾಗಿ ನುಡಿದು ಮುಖ ತಿರುಗಿಸಿ ನಡೆದಳು’
ಭೂಲೋಕದಿಂದ ಬಂದು ತನಗೆ ಅವಮಾನ ಮಾಡುವ
ದಾರ್ಷ್ಟ್ಯ ತೋರಿಸಿದ್ದಕ್ಕೆ ಅವಳಿಗೆ ಮಾನವ ಜಾತಿಯ ಮೇಲೇ ತಿರಸ್ಕಾರ! ‘ನರ ಮೃಗಾಧಮ’ ಎಂಬ ಉದ್ಗಾರ!
ನರ ಎನ್ನುವುದೇ ದೇವಲೋಕದವರಿಗೆ ಒಂದು ಬೈಗುಳ. ಜತೆಗೆ ಮೃಗ.ನರನೆಂಬ ಮೃಗ .ಅಷ್ಟೇ ಅಲ್ಲ ಅಧಮ ಬೇರೆ! ಮೂರು ಮೂರು ತಿರಸ್ಕಾರ ಶಬ್ದಗಳು!ಅರ್ಜುನನಿಗೆ ಇಂಥಾ ಶಬ್ದವನ್ನು
ಬೇರಾರೂ ಬಳಸಿರಲಾರರು!
ತನ್ನಂಥ ಹೆಣ್ಣನ್ನು ತಿರಸ್ಕರಿಸಿದವ
ನಪುಂಸಕನೇ ಸರಿ, ಹಾಗಾಗಿ ನಿಜವಾಗಿಯೂ ನಪುಂಸಕನಾಗಿ
ಒಂದು ವರ್ಷ ಜೀವಿಸುವ ಶಿಕ್ಷೆ!. ಜತೆಗೆ ಅರ್ಜುನ ಯಾರುಯಾರ ಮೊರೆ ಹೊಗಬಹುದು?
ಅವಳಿಗೆ ಗೊತ್ತು!.ಆದ್ದರಿಂದಲೇ ಹರಿ, ಹರ, ಇಂದ್ರರು ಸಹಾಯ ಮಾಡದಂತೆ ಉಪ ನಿಬಂಧನೆ ಕೂಡಾ ಇದೆ.
ಕವಿ ಊರ್ವಶಿಯನ್ನು ಮೊಗದಿರುಹಿದಳು
ಚಪಲೆ’ ಎನ್ನುತ್ತಾನೆ.ಸಿಟ್ಟಿನಿಂದ
ಮುಖ ತಿರುಗಿಸಿದ್ದೂ ಹೌದು;ನೇರ ನಡೆಯ ಅರ್ಜುನನ ನೋಟವನ್ನು ಇನ್ನೂ ಎದುರಿಸಲಾರದುದೂ
ಒಂದು.ಅರ್ಜುನನ ತಪ್ಪಿಲ್ಲವಾದರೂ ಅವನನ್ನು ಶಾಪಕ್ಕೆ ಗುರಿ ಮಾಡಿದ್ದು ಅವಳ
ಚಪಲತೆ ತಾನೆ?
ಶಾಪದ ತೀಕ್ಷ್ಣತೆಯನ್ನು, ಊರ್ವಶಿಯ ಕೋಪದ ತೀವ್ರತೆಯನ್ನು ಕವಿ ಬಳಸುವ ಭಾಷೆ ಹೇಗೆ
ಮಾರ್ದನಿಸುತ್ತಿದೆ ನೋಡಿ!
ಕುಮಾರವ್ಯಾಸ ಪ್ರತಿಷ್ಠಾನ
೧೭/೫/೨೦೧೭
No comments:
Post a Comment