Monday, February 6, 2017



ಐಸಲೇ ಕುಮಾರವ್ಯಾಸ!                           --
ಅರಣ್ಯ -೧೩
ಅಸಂಖ್ಯಾತ ಸೇವಕಿಯರ ಓಲೈಕೆಗಳೊಂದಿಗೆ ಊರ್ವಶಿ ಅರ್ಜುನನ ಗೃಹವನ್ನು ಹೊಕ್ಕು ನಿದ್ರಿಸುತ್ತಿದ್ದ ಅವನನ್ನು ಎವೆಯಿಕ್ಕದೆ ನಿಟ್ಟಿಸುತ್ತಾ ನಿಂತಳು. ಅವಳ ಉಪಸ್ಥಿತಿಯಿಂದ ಹರಡಿದ ಪರಿಮಳ ಅರ್ಜುನನನ್ನು ಎಚ್ಚರಗೊಳಿಸಿತು.ಎದ್ದ ಅರ್ಜುನನಿಗೆ ಆಶ್ಚರ್ಯ, ಸಂಭ್ರಮ!
ಇಂದ್ರಸಭೆಯಲ್ಲಿ ಅಪೂರ್ವ ನರ್ತನ ಮಾಡಿದ ಅದ್ಭುತ ಕಲಾವಿದೆ! ಸುರೇಂದ್ರನ ಆಸ್ಥಾನದ ಸ್ತ್ರೀ, ಮೇಲಾಗಿ ತನ್ನ ಶಶಿವಂಶದ ಜನನಿಯೂ ಹೌದು. ನಮಸ್ಕರಿಸಿದ.ನಾನು ನಿಮ್ಮ ಮಗನಂತೆ. ಏನು ಆಜ್ಞೆ ಹೇಳಿ ಎಂದ.

ಇಂದ್ರನ ನೇಮದಂತೆ ಶೃಂಗಾರ ಭಾವನೆಗಳನ್ನು ಹೊಂದಿದ್ದ ಊರ್ವಶಿಗೆ ದಿಗ್ಭ್ರಮೆ! ಇವನೇನು ಹುಚ್ಚನೋ,ನಪುಂಸಕನೊ?.ದೇವತೆಗಳು,ದಾನವರು ಅಷ್ಟೇ ಏಕೆ ಅಪರಿಮಿತ ಸಾಧನೆ ಮಾಡಿ ಸ್ವರ್ಗವನ್ನು ಪಡೆದ ತಪಸ್ವಿಗಳು ಒಂದು ದೃಷ್ಟಿಗಾಗಿ ಹಂಬಲಿಸುವ ತನ್ನನ್ನು ತಾಯಿಯಂತೆ ಅತಿ ಗೌರವ ತೋರುತ್ತಿದ್ದಾನೆ ಅವಿವೇಕಿ!

ಅರ್ಜುನ ಹೇಳಿದ;’ನಮ್ಮ ವಂಶದ ಪೂರ್ವಜ ಪುರೂರವನ ಸತಿ ನೀನು. ನಿನ್ನಿಂದ ಆಯು ಜನಿಸಿದ ಅವನ ಮಗ ನಮ್ಮ ಪೂರ್ವಜ ನಹುಷ. ನಾನು ನಿನಗೆ ಕಂದನೇ’ 
 ಊರ್ವಶಿ ನಗುತ್ತಾ ಹೇಳಿದಳುಃ

‘ಅಯ್ಯನಯ್ಯನು,ನಿಮ್ಮವರ ಮುತ್ತಯ್ಯ
ಆತನ ಭಾವ ಮೈದುನನಯ್ಯನು,
ಅಗ್ರಜರನುಜರೆಂಬೀ ಜ್ಞಾತಿಬಾಂಧವರ
ಕೈಯಲರಿಗಳ ಹೊಯ್ದು ಶಿರನರಿದುಯ್ಯಲಾಡಿದವರ್ಗೆ
ಮೇಣ್ ಮಖದಯ್ಯಗಳಿಗೆ
ಆನೊಬ್ಬಳೆಂದಳು ನಗುತ ನಳಿನಾಕ್ಷಿ..,’

(ಮಖ=ಯಜ್ಞ; ಮಖದಯ್ಯ-ಯಜ್ಞ ಮಾಡಿ ಸ್ವರ್ಗ ಪಡೆದವರು)

‘ಅಪ್ಪ, ಅವನಪ್ಪ, ಅಜ್ಜ್ಜ,ಮುತ್ತಜ್ಜ,ಅಣ್ಣ, ತಮ್ಮ, ಭಾವ, ಮೈದುನ ಮುಂತಾದ ನಿಮ್ಮ ಭೂಲೋಕದ ಸಂಬಂಧಿಕರಿಗೆ, ಯುದ್ಧದಲ್ಲಿ ಶತ್ರುಗಳನ್ನು ಸಂಹಾರಮಾಡಿ ವೀರಸ್ವರ್ಗ ಪಡೆದವರಿಗೆ, ಯಾಗ ಯಜ್ಞ ಮಾಡಿ ಇಲ್ಲಿಗೆ ಬಂದವರಿಗೆಲ್ಲಾ ಇಲ್ಲಿ ದೊರೆಯುವ ಸುಖದ ಕೊಡುಗೆ ತಾನೊಬ್ಬಳೇ,ತಿಳಿಯಿತೇನು?

ಅರ್ಜುನ ಮುಂದಿಟ್ಟ ಭೂಲೋಕದ ಸಂಬಂಧಗಳ ನಂಬುಗೆಗಳನ್ನು ಹಂಗಿಸುತ್ತಿದ್ದಾಳೆ ಊರ್ವಶಿ. ‘ಎಲ್ಲ ಸಂಬಂಧಗಳೂ ನಿಮ್ಮ ಲೋಕಕ್ಕಷ್ಟೇ ಸೀಮಿತ. ಇಂದ್ರಲೋಕಕ್ಕಲ್ಲ. ಇಲ್ಲಿಯ ಕಟ್ಟುಪಾಡುಗಳೇ ಬೇರೆ!
ನಾನೂ ಸಹಾ ನಿನ್ನನ್ನು ಮನಸಾರೆ ಬಯಸಿ ಬಂದವಳು.ಇಲ್ಲಿಗೆ ಬರುವವರು ಸುಖ ಪಿಪಾಸುಗಳು. ಮೂರ್ಖನಂತೆ ಮಾತಾಡಬೇಡ’  ಅಷ್ಟೇ ಅಲ್ಲ ‘ಮಾನಿನಿಯರ ಇಚ್ಛೆಯನರಿಯದವ ಸುರೇಂದ್ರನಾಗಲಿ, ಚಂದ್ರನಾಗಲಿ, ಕುರಿ ಕಣಾ’

ಅರ್ಜುನನ ಶೀತಲ ನಡವಳಿಕೆಯಿಂದ ಊರ್ವಶಿಯ ಶೃಂಗಾರ ಭಾವ ಕ್ರೋಧಕ್ಕೆ ತಿರುಗುತ್ತದೆ. ಕೋಮಲತೆಯ ಸೌಂದರ್ಯ ಕರ್ಕಶತೆಯತ್ತ ವಾಲುತ್ತದೆ. ಸುರೇಂದ್ರನಾದರೂ ಸರಿ ಹೆಣ್ಣನ್ನು ಅವಗಣಿಸಿದರೆ ಕುರಿಯಂತೆ ಎನ್ನಲೂ ಹೇಸುವುದಿಲ್ಲ.

ಊರ್ವಶಿಯಲ್ಲಿನ ಭಾವ ಪರಿವರ್ತನೆಯ ಹಂತಗಳನ್ನು ಎಳೆ ಎಳೆಯಾಗಿ ಬಿಡಿಸುತ್ತಾನೆ ಕುಮಾರವ್ಯಾಸ.ಸಂಬಂಧಗಳ ಬಗ್ಗೆ ಪದ್ಯದಲ್ಲಿರುವ ವ್ಯಂಗ್ಯ,ಅದಕ್ಕಾಗಿ ಬಳಸಿದ ದೇಸಿ ಕನ್ನಡದ ಶಬ್ದಗಳನ್ನು ಗಮನಿಸಿ.

ಕುಮಾರವ್ಯಾಸ ಪ್ರತಿಷ್ಠಾನ
೫/೨/೨೦೧೭

No comments:

Post a Comment