Saturday, February 25, 2017



ಐಸಲೇ ಕುಮಾರವ್ಯಾಸ!                           --
ಅರ ಪ ೮-೫೩


ಊರ್ವಶಿಯಿಂದ ನಪುಂಸಕತ್ವದ ಶಾಪ ಪಡೆದ ಅರ್ಜುನನಿಗೆ ಅಪಮಾನವೊಂದು ಕಡೆ, ಅನುಮಾನವೊಂದುಕಡೆ.ಧರ್ಮ ಹೇಳಿದಂತೆ ನಡೆದದ್ದಕ್ಕೆ ಇಂಥಾ ಶಿಕ್ಷೆಯೆ?

ಅನೇಕ ವೇಳೆ ನಮಗೊದಗಿದ ಅನಾನುಕೂಲಗಳನ್ನು ನಾವು ಶಿಕ್ಷೆಯೆಂದೇ ಪರಿಗಣಿಸುತ್ತೇವೆ. ಇದು ಸಹಜ.ಆದರೆ ವಿಶಾಲ ದೃಷ್ಟಿಯಿಂದ ಅದು ನಮಗೆ ಲಾಭವನ್ನೇ ತರಬಹುದು!

ಅರ್ಜುನನಿಗೆ ಒದಗಿದ ಶಾಪವನ್ನು ಗಂಧರ್ವನಿಂದ ಅರಿತ ಇಂದ್ರ  ಮಗನನ್ನು ಸಂತೈಸುತ್ತಾ ಹೇಳಿದಃ


ಖೋಡಿಯಿಲ್ಲೆಲೆ ಮಗನೆ, ಚಿಂತಿಸಬೇಡ
ನಿಮ್ಮಜ್ಞಾತದಲಿ ನೆರೆ ಜೋಡಲಾ
ಜಾಣಾಯ್ಲ ರಿಪುಜನ ದೃಷ್ಟಿ ಶರ ಹತಿಗೆ,
ಕೂಡಿತಿದು ಪುಣ್ಯದಲಿ
ಸುರಸತಿ ಮಾಡಿದಪಕೃತಿ ನಿನ್ನ ಭಾಷೆಯ ಬೀಡ ಸಲಹಿದುದರಿಯೆ,
ನೀ ಸಾಹಿತ್ಯನಲ್ಲೆಂದ’

(ಖೋಡಿ-ತಪ್ಪು; ಜೋಡು- ಕವಚ; ಜಾಣಾಯ್ಲ- ಜಾಣರಾದ; ರಿಪು- ಶತೃ;  ಅಪಕೃತಿ- ಅಪಕಾರ; )

‘ಮಗನೇ, ಯೋಚಿಸಬೇಡ. ನಿನ್ಗೆ ದೊರೆತ ಶಾಪ ನಿಜಕ್ಕೂ ನಿನ್ನ ಪುಣ್ಯದಿಂದ ದೊರೆತ ವರವೆಂದು ತಿಳಿ.ಆಜ್ಞಾತವಾಸದಲ್ಲಿ ಶತ್ರುಗಳ ದೃಷ್ಟಿಬಾಣಗಳಿಂದ ತಪ್ಪಿಸಿಕೊಳ್ಳಲು ನಿನಗೆ ಇದು ರಕ್ಷಾ ಕವಚ. ಊರ್ವಶಿ ಮಾಡಿದ ಅಪಕಾರ ನಿನ್ನ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಸಹಕಾರಿಯಾಯ್ತು. ಈ ಘಟನೆಗಳ ಒಳ ಅರಿವು ನಿನಗಿಲ್ಲ’ ಎಂದ ಇಂದ್ರ. ಅರ್ಜುನ ತುಸು ಸಮಾಧಾನಗೊಂಡ.

ವಿವೇಕದ ಮಾತುಗಳನ್ನಾಡುವಾಗಿನ ಗಟ್ಟಿತನ, ಸಮರ್ಥವಾದ ಶಬ್ದಗಳು,ಕುಮಾರವ್ಯಾಸನಲ್ಲಿ ಗಮನಿಸಬೇಕಾದ ಅಂಶಗಳು. ‘ಅರಿಯೆ, ನೀ ಸಾಹಿತ್ಯನಲ್ಲೆಂದ (ನಿನಗೆ ಅವು ಅರ್ಥವಾಗುವುದಿಲ್ಲ ಎಂಬ ಅರ್ಥದಲ್ಲಿ) ಅಪರೂಪದ ಪ್ರಯೋಗ.

‘ಜಾಣಶತ್ರುಗಳ ದೃಷ್ಟಿ ಎಂಬ ಬಾಣಗಳಿಗೆ ಇದು ಕವಚವಾಯ್ತು’ ಎಂಬ ಪುಟ್ಟ ರೂಪಕ ಸಹಾ ಸುಂದರ!

ಕುಮಾರವ್ಯಾಸ ಪ್ರತಿಷ್ಠಾನ
೨೪/೨/೨೦೧೭

No comments:

Post a Comment