Tuesday, January 31, 2017



ಐಸಲೇ ಕುಮಾರವ್ಯಾಸ!                           --
ಅರಣ್ಯ ಪ ೮-೧೩

ವನವಾಸದ ಅವಧಿಯಲ್ಲಿ ಹರನನ್ನು ತಪಸ್ಸಿನಿಂದ ಮೆಚ್ಚಿಸಿ ಪಾಶುಪತಾಸ್ತ್ರವನ್ನು ಅರ್ಜುನ ಪಡೆದ. ನಂತರ ಇಂದ್ರಾದಿ ಎಲ್ಲಾ ದಿಕ್ಪಾಲಕರೂ ಬಂದು ಅರ್ಜುನನನ್ನು ಅಭಿನಂದಿಸಿದರು.

ಇಂದ್ರ ಮಗನನ್ನು ಹರಸಿ ಹೇಳಿದ, ‘ತಪಸ್ಸಿನಿಂದ ದೇಹವನ್ನು ದಂಡಿಸಿದ್ದೀಯೆ. ಸಾರಥಿಯಾದ ಮಾತಲಿಯನ್ನು ರಥಸಹಿತ ಕಳಿಸುತ್ತೇನೆ. ಕೆಲದಿನ ಅಮರಾವತಿಯಲ್ಲಿ ವಿಶ್ರಮಿಸು’.ಅರ್ಜುನ ಒಪ್ಪಿದ.

ಅಮರಾವತಿಗೆ ಆಗಮಿಸಿದ  ಮಗ ಅರ್ಜುನನನ್ನು ಇಂದ್ರ ತನ್ನ ಸಿಂಹಾಸನದಲ್ಲಿ ಕುಳ್ಳಿರಿಸಿಕೊಂಡು ಗಾನ, ನರ್ತನಾದಿಗಳನ್ನು ಏರ್ಪಡಿಸಿದ. ನರ್ತಿಸುತ್ತಿದ್ದ ದೇವಸುಂದರಿ ಊರ್ವಶಿಯನ್ನು ಅರ್ಜುನ ಎವೆಯಿಕ್ಕದೆ ನೋಡುತ್ತಿದ್ದುದನ್ನು ಇಂದ್ರ ಗಮನಿಸಿ, ಊರ್ವಶಿಗೆ ಸಂದೇಶ ಕಳಿಸಿದ.

ಅತ್ಯಂತ ಸುಂದರನಾದ ಅರ್ಜುನನನ್ನು ಊರ್ವಶಿ ಮೋಹಿಸಿದ್ದಳು ಕೂಡ.ಇಂದ್ರನ ಆಣತಿ ಸಿಕ್ಕಿದಮೇಲೆ ಮಾತೇನು? ಕವಿ ಹೇಳುತ್ತಾನೆ ‘ನಾರಾಯಣನ ಮೈದುನನ ಬರೆದಳು ಚಿತ್ತ ಭಿತ್ತಿಯಲಿ (ಮನಸ್ಸಿನಲ್ಲೇ ಅರ್ಜುನನನ್ನು ಮೋಹಿಸಿದಳು)

ಸಾಲಂಕೃತಳಾಗಿ ಅರ್ಜುನನಿದ್ದ ಅರಮನೆಗೆ ಬಂದ ಊರ್ವಶಿಯನ್ನು ಕವಿ ವರ್ಣಿಸುತ್ತಾನೆ

ಬಂದಳೂರ್ವಶಿ,
ಬಳ್ಳಿ ಮಿಂಚಿನ ಮಂದಿಯಲಿ ಮುರಿದಿಳಿವ
ಮರಿಮುಗಿಲಂದದಲಿ,
ದಂಡಿಗೆಯನಿಳಿದಳು ರಾಜ ಭವನದಲಿ,
ಮುಂದೆ ಪಾಯವಧಾರು ಸತಿಯರ ಸಂದಣಿಯ
ಸಿಂಜಾರವದ ಸೊಗಸಿಂದ ಶಬ್ದ ಬ್ರಹ್ಮ ಸೋತುದು ಸೊರಹಲೇನೆಂದ..’

(ಮರಿಮುಗಿಲು- ಪುಟ್ಟ ಮೋಡ; ದಂಡಿಗೆ- ಪಲ್ಲಕ್ಕಿ;  ಪಾಯವಧಾರು-ನಡೆಮುಡಿ ಹಾಸುವ ಸಖಿಯರು; ಸಂದಣಿ-ಸಮೂಹ; ಸಿಂಜಾರವ-ಗೆಜ್ಜೆಯ ಶಬ್ದ)

ಫಳಫಳನೆ ಮಿಂಚುತ್ತಿರುವ ಮಿಂಚಿನ ಗೊಂಚಲುಗಳನ್ನು ಧರಿಸಿದ ಪುಟ್ಟ ಮೋಡವೊಂದು ಆಗಸದಿಂದ ಇಳಿಯುವಂತೆ ಊರ್ವಶಿ ಪಲ್ಲಕ್ಕಿಯಿಂದ ಇಳಿದಳು. ಅವಳ ಮುಂದೆ ‘ಪಾಯವಧಾರು’ ಎಂದು (ರಾಜರೇ ಮೊದಲಾದ ಪ್ರಮುಖ ವ್ಯಕ್ತಿಗಳಿಗೆ ಸಲ್ಲಿಸುವ ಗೌರವದ ಸೇವೆ) ಸೂಚಿಸುವ ಹೆಂಗಳೆಯರ ನೂಪುರದ ಧ್ವನಿಯಿಂದ ಶಬ್ದಬ್ರಹ್ಮವೇ ಸೋತು ಹೋಯಿತು. ನಾನು ಒಣ ಶಬ್ದದಿಂದ ಏನು ಹೇಳಲಿ?

ದೇವಲೋಕದ ಪರಮಸುಂದರಿ ಊರ್ವಶಿ.ಮಿಂಚುವ ಆಭರಣಗಳು!ವಿಶೇಷವಾದ ಅಲಂಕಾರ ಬೇರೆ.ಪಲ್ಲಕ್ಕಿಯಿಂದ ಇಳಿದವಳಿಗೆ ಹೋಲಿಕೆ ಮಿಂಚುಗಳಿಂದ ತುಂಬಿದ ಮರಿಮುಗಿಲು.

ಅವಳಿಗೆ ಸೇವೆ ಮಾಡುವ ದಾಸಿಯರ ಲೆಕ್ಕವಿಲ್ಲ. ಅವರ ಕಾಲ್ಗೆಜ್ಜೆಯ ಧ್ವನಿ ಶಬ್ದಬ್ರಹ್ಮನನ್ನು ಸೋಲಿಸಿತೆಂದ ಮೇಲೆ?.ಊರ್ವಶಿಯ ಆಗಮನದ ಭವ್ಯತೆಯನ್ನು ಒಂದೇ ಪದ್ಯದಲ್ಲಿ ಸುಂದರವಾಗಿ ಕಟ್ಟಿ ಕೊಡುತ್ತಾನೆ ಕವಿ!

ಗಮನಿಸಿ,ದೇವಸುಂದರಿಯನ್ನು ವರ್ಣಿಸುತ್ತಿರುವ ಭಾಷೆ ಬಹುತೇಕ ದೇಸೀ ಕನ್ನಡ! ಎಲ್ಲಕ್ಕೂ ಸಂಸ್ಕೃತ ಬೇಕೆಂದಿಲ್ಲ. ಭಾಷೆಯನ್ನು ದುಡಿಸಬಲ್ಲ ಸಮರ್ಥ ಕವಿಗೆ ಇದು ಸಾಧ್ಯ.

ಕುಮಾರವ್ಯಾಸ ಪ್ರತಿಷ್ಠಾನ
೩೧/೧/೨೧೦೭

No comments:

Post a Comment