Saturday, January 14, 2017



ಐಸಲೇ ಕುಮಾರವ್ಯಾಸ!                           --
ಉದ್ಯೋ -

ಭೂಮಿಗಾಗಿ ಸೋದರರು ಹೊಯ್ದಾಡಿ ಹರಿಹಂಚಾದರೆಂದು ಜನ ಆಡಿಕೊಳ್ಳುವಂತಾಗುವುದು ಬೇಡ. ಹೊಂದಿಕೊಂಡು ಬಾಳುವುದರಲ್ಲಿ ಜಾಣತನವಿದೆ, ನಾವು ಕೂಡಾ ಅದನ್ನೇ ಹಾರೈಸುವುದು ಎಂದು ಶ್ರೀಕೃಷ್ಣ ಮನವೊಲಿಸಲು ನೋಡಿದ.
ಆದರೆ ದುರ್ಯೋಧನನಿಗೆ ಅದನ್ನು ಕೇಳಲೂ ವ್ಯವಧಾನವಿಲ್ಲ. ಅವನ ಗಮನವೆಲ್ಲಾ ಯಾದವ ಸೈನ್ಯದ ಮೇಲೆ. ಕೃಷ್ಣ ಏನಾದರೂ ಕಪಟ ಮಾಡಿದರೆ? ಅದಕ್ಕೆ ನೇರವಾಗಿ ಹೇಳಿದಃ


‘ಅವಧರಿಸು ಮುರವೈರಿ,
ಧರ್ಮ ಶ್ರವಣಕೋಸುಗ ಬಾರೆವಾವ್,
ಪಾರ್ಥಿವರ ಪಂಥದ ಕದನ ವಿದ್ಯಾ ಕಾಮವೆಮಗಾಯ್ತು
ನಿವಗೆ ನಾವಿತ್ತಂಡ ಸರಿ
ಪಾಂಡವರಿಗೆಯು ಮನದೊಲವಿನಲಿ
ಕೌರವರಿಗೆಯು ಬಲವಾಗಬೇಕೆಂದನು ಸುಯೋಧನನು’

(ಅವಧರಿಸು- ಕೇಳು;ಪಾರ್ಥಿವರು- ರಾಜರು ;ಪಂಥ- ಛಲ, ಆಹ್ವಾನ; ಇತ್ತಂಡ- ಎರಡು ತಂಡ; )

‘ಮುರವೈರಿ ಕೇಳು, ನಾವು ನಿನ್ನ ಪುರಾಣ ಪ್ರವಚನ ಕೇಳಲು ಬಂದಿಲ್ಲ. ಕ್ಷತ್ರಿಯರಿಗೆ ಅನುಗುಣವಾದ ಯುದ್ಧದಲ್ಲಿ ನಮಗೆ ಇಚ್ಛೆಯಾಗಿದೆ. ನಮ್ಮಿಬ್ಬರಲ್ಲೂ ನಿನಗೆ ಸಮಾನ ಆಸಕ್ತಿ , ಕಾಳಜಿ. ಆದ್ದರಿಂದ ನಮ್ಮ ಎರಡೂ ತಂಡಕ್ಕೂ ನೀನು ಬಲವಾಗಬೇಕು, ಇದೇ ನಮ್ಮ ಇಂಗಿತ’

ಕೃಷ್ಣ ಎಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಪಾಂಡವರ ಪರ ನಿಂತಾನೋ ಎಂಬುದು ಸುಯೋಧನನ ಆತಂಕ. ಅದಕ್ಕಾಗಿ ನಾವಿಬ್ಬರೂ ನಿನಗೆ ಒಂದೇ ಅಲ್ಲವೆ? ಎಂದು ತಾನೇ ಹೇಳಿಕೊಂಡ. ಅವನು ಯಾದವ ಸೈನ್ಯದ ಬಗ್ಗೆ ಚಿಂತಿತನಾಗಿದ್ದಾನೆ.ಅದರಲ್ಲಿ ಅವನ ಗುರು ಬಲರಾಮನೂ ಇದ್ದಾನಾದ್ದರಿಂದ ನನಗೂ ಪಾಲು ದೊರಕಬೇಕಾದ್ದು ಅಗತ್ಯಎಂಬುದು ಅವನ ಗ್ರಹಿಕೆ.

‘ಧರ್ಮ ಶ್ರವಣ’ ಮತ್ತು ‘ಕದನ ವಿದ್ಯಾ ಕಾಮ’ ಶಬ್ದಗಳ ಮಹತ್ವ ಗಮನಾರ್ಹ.ನೀನು ಹೇಳಹೊರಟಿರುವುದು ಧರ್ಮ. ಆದರೆ ನಾವು ಪುರುಷಾರ್ಥದ ಮತ್ತೊಂದು ಮೌಲ್ಯ ಕಾಮದಲ್ಲಿ ಆಸಕ್ತರು.ಯಾವ ಕಾಮ?’ ಪಾರ್ಥಿವರ ಪಂಥದ ಕದನ ವಿದ್ಯಾ ಕಾಮ!’ ಯುದ್ಧ ಕಾಮ! ಪೌರುಷಭರಿತ ಯುದ್ಧಕಾಮಿಗಳಿಗೆ ನಿನ್ನ ಧರ್ಮ  ಶ್ರವಣವೆ?

ಕೃಷ್ಣನ ಅನುಭವ ವಾಕ್ಯಗಳನ್ನು ಧರ್ಮಶ್ರವಣ ಎಂದು ತಿರಸ್ಕರಿಸಿದ್ದಕ್ಕೆ ಹರಿ ಬೇಸರಿಸಲಿಲ್ಲ. ತಂಬುಲ ಸೂಸುವಂತೆ ನಗುತ್ತಾ ಹೇಳಿದ ‘ಹಾಗಿದ್ದಲ್ಲಿ ಸರಿ ಒಂದು ಕಡೆ ಯುದ್ಧ ಮಾಡದ ನಾನು. ಮತ್ತೊಂದು ಕಡೆ ಬಲರಾಮ, ಕೃತವರ್ಮ ಸಮೇತ ಕಾದುವ ಶಕ್ತಿಯುಳ್ಳ ಯಾದವ ಸೈನ್ಯ’ ನಿನ್ನ ಆಯ್ಕೆ ಯಾವುದು ಅರ್ಜುನ? ‘ಎಂದು ಕೇಳಿದ

ಕುಮಾರವ್ಯಾಸನ ಮಾತುಗಳಲ್ಲಿನ ಕಟಕಿ,ವ್ಯಂಗ್ಯ,ನಾಜೂಕು ಮೆಲುಕುಹಾಕುವಂಥವು.

ಕುಮಾರವ್ಯಾಸ ಪ್ರತಿಷ್ಠಾನ
೧೪/೧/೨೦೧೭

No comments:

Post a Comment