Tuesday, January 17, 2017



ಐಸಲೇ ಕುಮಾರವ್ಯಾಸ!                           --
ಉದ್ಯೋ -೩೬
ಅರ್ಜುನನ ಮುಂದೆ ಹರಿ ಆಯ್ಕೆಯನ್ನಿಟ್ಟ. ಬಲರಾಮ,ಕೃತವರ್ಮ ಮತ್ತು ಯಾದವ ಸೈನ್ಯ ಒಂದು ಕಡೆ. ಯುದ್ಧ ಮಾಡದ ತಾನು ಒಂದು ಕಡೆ. ಇಡೀ ಮಹಾಭಾರತ ಯುದ್ಧದ ಫಲಿತಾಂಶ ಈ ಆಯ್ಕೆಯಲ್ಲಡಗಿದೆ.ಅರ್ಜುನನ ಆಯ್ಕೆ ಸರ್ವಥಾ ಕೃಷ್ಣನೇ. ಇಡೀ ಭೂಮಿಯೇ ಇನ್ನೊಂದು ಪಕ್ಷದಲ್ಲಿದ್ದರೂ ಅವನ ಆಯ್ಕೆ ಬದಲಾಗಲಿಕ್ಕಿಲ್ಲ.

ಇತ್ತ ದುರ್ಯೋಧನನಿಗೂ ಆತಂಕ. ಅರ್ಜುನ ಬಲರಾಮ ಸಹಿತ ಸೈನ್ಯವನ್ನು ಕೇಳಿಕೊಂಡು ಬಿಟ್ಟರೆ ತನ್ನ ಸ್ಥಿತಿ? ಆದರೆ ಹಾಗಾಗಲಿಲ್ಲ.ಅರ್ಜುನ ತನ್ನ ಆಯ್ಕೆ ನೀನೇ ಎನ್ನುವುದನ್ನು ಸ್ಪಷ್ಟಪಡಿಸಲು ಕುಮಾರವ್ಯಾಸ ಬಳಸಿದ ಮಾತುಗಾರಿಕೆಯ ಜಾಣತನವನ್ನು ನೋಡಿ;

‘ಮುರಮಥನ ಚಿತ್ತೈಸು,
ಕೌರವರರಸ ಅತಿ ಸಿರಿವಂತ,
ಸಂತರಿಸಲಾಪನು ಬಹಳ ಯಾದವ ಸ್ಸೈನ್ಯ ಸಾಗರವ
ಧರೆಯ ಸಂಪದವಿಲ್ಲದ ಅಡವಿಯ ತಿರುಕರಾವು,
ಇನಿಬರನು ಸಲೆ ಸಂತರಿಸಲಾಪೆವೆ?
ಕೃಷ್ಣ ನೀನೇ ಸಾಕು ನಮಗೆಂದ,

(ಚಿತ್ತೈಸು-ಕೇಳು; ಸಂತರಿಸು-ನಿರ್ವಹಿಸು; ಇನಿಬರು-ಇಷ್ಟು ಜನ; )

‘ಕೃಷ್ಣಾ ಕೇಳು, ದುರ್ಯೋಧನ ರಾಜ; ಶ್ರೀಮಂತ. ನಿನ್ನ ಯಾದವ ಸೈನ್ಯವೆಲ್ಲವನ್ನೂ ಸಲಹಬಲ್ಲ ಶಕ್ತಿ ಅವನಿಗಿದೆ. ನಾವು ಭೂಮಿಯಿಲ್ಲದೆ ಅಡವಿಯಲ್ಲಿ ಭಿಕ್ಷುಕರಾಗಿದ್ದು ಈಗಷ್ಟೇ ಹೊರಬಂದಿರುವವರು. ರಾಜ್ಯ-ಕೋಶವಿಲ್ಲದವರು ಅಷ್ಟು ಜನ ಸೈನಿಕರನ್ನು ಹೇಗೆ ನಿರ್ವಹಿಸಬಲ್ಲೆವು? ನಮಗೆ ನೀನೇ ಸಾಕು. ಎಂಥ ತಾರ್ಕಿಕ ಮಾತಿನ ಸರಣಿ!

ಸಾಲದ್ದಕ್ಕೆ ಮತ್ತೊಂದು ಮಾತು ಸಹಾ.’ನಾವು ಬಡವರು; ಬಡವರಿಗೆ ದಿಟ ನೀವೆ ಬೆಂಬಲವೆಂಬ ಬಿರುದನು ಕೇಳಿ ಬಲ್ಲೆವು;’ ಅರ್ಥಾತ್,  ಬಡವರಿಗೆ ಯಾವಾಗಲೂ ಇರುವ ಏಕೈಕ ಆಧಾರ ನೀನು,ನಾವು ಬಡವರೂ ಹೌದು. ನಮಗೆ ನೀನಲ್ಲದೆ ಬೇರೇನು ಗತಿ?

ಅರ್ಜುನನ ಮಾತು ಕೇವಲ ಯುದ್ಧ ಸಹಾಯಕ್ಕೆ ಸೀಮಿತವಾಗದೆ ಅದರಾಚೆಯ ಭಕ್ತೋದ್ಧಾರದ ಮಜಲನ್ನೂ ಸೂಚಿಸಿ ಕೃಷ್ಣನನ್ನೂ ಕರಗಿಸುವಷ್ಟು ಸಮರ್ಥವಾಗಿದೆ.
ಇಂಥಾ ಆಯ್ಕೆ, ಸಂಪೂರ್ಣ ಶರಣಾಗತಿ ಪಾಂಡವರನ್ನು ತನ್ನ  ಪ್ರಾಣ ಎಂದು ಕೃಷ್ಣ ಕಾಪಾಡಿದ್ದರ ಹಿಂದಿನ ಸತ್ಯ ಎಂಬುದನ್ನು ಕವಿ ಬಿಂಬಿಸುತ್ತಾನೆ.

ಕುಮಾರವ್ಯಾಸ ಪ್ರತಿಷ್ಠಾನ
೧೭/೦೧/೨೧೧೭

No comments:

Post a Comment