Thursday, January 12, 2017



ಐಸಲೇ ಕುಮಾರವ್ಯಾಸ!                           -೬೬-
ಉದ್ಯೋ -೩೦


ಶ್ರೀಕೃಷ್ಣನನ್ನು ಸಹಾಯ ಕೇಳಲು ಪಾರ್ಥ-ದುರ್ಯೋಧನರು ಹೋದ ಸಂದರ್ಭವನ್ನು ಕುಮಾರವ್ಯಾಸ ಅತ್ಯಂತ ಸೂಕ್ಷ್ಮತೆಯಿಂದ ಸ್ವಾರಸ್ಯಕರವಾಗಿ ಕಡೆದಿದ್ದಾನೆ.ಒಬ್ಬ ಅನುಭವೀ ವ್ಯಕ್ತಿಯ ಮನೋಗತಗಳು ತೆರೆದುಕೊಂಡಂತೆ!. ಅತ್ಯಂತ ಗಂಭೀರ ಸಂದರ್ಭಗಳಲ್ಲಿ ಎಂತಹ ಪಕ್ವವಾದ ಭಾಷೆಯನ್ನು ಬಳಸಬಲ್ಲನೆಂಬುದಕ್ಕೆ ಈ ಸಂದರ್ಭ ಸಾಕ್ಷಿ

ಶ್ರೀಕೃಷ್ಣ ಇಬ್ಬರನ್ನೂ ಉದ್ದೇಶಿಸಿ ಹೇಳುವ ಮತ್ತೊಂದು ಮಾತೂ ಮನೋಜ್ಞವಾಗಿದೆ.

ತಗರೆರಡ ಖತಿಗೊಳಿಸಿ ಬಲುಗಾಳಗವ ನೋಡುವರಂತೆ
ನಿಮ್ಮನು ತೆಗೆತೆಗೆದು ಕಲಿಮಾಡಿ ಬಿಡುವರು ಖುಲ್ಲರಾದವರು..,
ನಗುತ ಹೆರೆಹಿಂಗುವರು, ಪಿಸುಣರು, ಬಗುಳಿದವದಿರು
ಬಳಿಕ ಕಡೆಯಲಿ ಹೊಗುವಿರೈ ನೀವಿಬ್ಬರು
ಅಪಕೀರುತಿಯ ಹಾದರಕೆ..’

(ತಗರು-ಟಗರು; ಖತಿ- ಕೋಪ; ಬಲುಗಾಳಗ-ಘೋರ ಯುದ್ಧ; ಖುಲ್ಲರು, ಪಿಸುಣರು- ಕೀಳುಜನ; ಹಿಂಗು-ನಿರ್ಗಮಿಸು)
‘ ಎರಡು ಟಗರುಗಳನ್ನು ಕೋಪದಿಂದ ಕಾದಾಡುವಂತೆ ಮಾಡಿ ಅದರ ವಿಕೃತ ಆನಂದ ಪಡೆಯುವ ಜನರು ನಿಮಗೆ ಗೊತ್ತಿಲ್ಲವೇನು? ಆ ಕ್ಷುಲ್ಲಕ ಜನ ನಿಮ್ಮನ್ನು ಉಬ್ಬಿಸಿ ಒಬ್ಬರಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟಿ ನೀವು ಕಾದಾಡುವಂತೆ ಮಾಡುತ್ತಾರೆ. ಅನಂತರ ಒಳಗೇ ನಗುತ್ತಾ, ಆನಂದಿಸುತ್ತಾ ಹಿಂದೆ ಸರಿಯುತ್ತಾರೆ. ಅಂತಿಮವಾಗಿ ಅವರ ಮಾತುಗಳಿಗೆ  ಮರುಳಾದ ನೀವು ಮೂರ್ಖರಂತೆ ಹೊಡೆದಾಡಿ ಅಪಕೀರ್ತಿ ಹೊಂದುತ್ತೀರಿ, ತಿಳಿದುಕೊಳ್ಳಿ’

ಶ್ರೀಕೃಷ್ಣ ದುರ್ಜನರನ್ನು ಕುರಿತ ಸಾರ್ವಕಾಲಿಕವಾದ ಲೋಕಾನುಭವವನ್ನು ಹೇಳುತ್ತಿದ್ದಾನೆ!

ಶಕುನಿ ಮುಂತಾದವರು ಮಾಡುತ್ತಿದ್ದುದೂ ಅದನ್ನೇ.ಇತಿಹಾಸದಲ್ಲಿ ಇಂಥ ನಿದರ್ಶನಗಳು ಎಷ್ಟೋ ಇವೆ.ತನ್ನನ್ನು ಅರಸಿ ಬಂದವರಿಗೆ  ಅನುಭವದ ಸತ್ಯವನ್ನು ಹೇಳಬೇಕು ತಾನೆ? ಈ ಲೋಕಾನುಭವದ ಮಾತುಗಳು, ಉದಾಹರಣೆ, ಎಷ್ಟುಸಮಯೋಚಿತವಾಗಿವೆ! ಅಪಕೀರ್ತಿ ಸಹಾ ಕವಿಯ ಮಾತಿನಲ್ಲಿ ಒಂದು ಹೆಣ್ಣಿನ ರೂಪಕವನ್ನು ಪಡೆದಿದೆ.


‘ಹೊಗುವಿರಿ ಅಪಕೀರ್ತಿಯ ಹಾದರಕೆ’ ತೀಕ್ಷ್ಣ ಆಡುಮಾತಿನ ಬಳಕೆ ಕೃಷ್ಣ ನೈಜ ಕಳಕಳಿಯನ್ನು ಬಿಂಬಿಸುತ್ತದೆ.

ಕುಮಾರವ್ಯಾಸ ಪ್ರತಿಷ್ಠಾನ                                            ೧೨/೦೧/೨೦೧೭

No comments:

Post a Comment