Saturday, August 13, 2016

ಐಸಲೇ ಕುಮಾರವ್ಯಾಸ!!! ೭
ಉದ್ಯೋಗ ಪರ್ವ ೮-೭
ಶ್ರೀಕೃಷ್ಣ ಹಸ್ತಿನಾವತಿಯ ಕೌರವನ ಅರಮನೆಗೆ ಪಾಂಡವರ ಪ್ರತಿನಿಧಿಯಾಗಿ ಬಂದದ್ದು ಮಹಾಭಾರತದ ಅತ್ಯಂತ ಮಹತ್ವದ ರಾಜತಾಂತ್ರಿಕ ಘಟನೆ.
ದುರ್ಯೋಧನನಿಗೆ ಸಂತೋಷವಿರಲಿಲ್ಲವಾದರೂ ಅದ್ಭುತವಾದ ವ್ಯವಸ್ಥೆಯನ್ನೇ ಮಾಡಿದ್ದ ಎಂಬುದು ತಿಳಿಯುತ್ತದೆ.ಶ್ರೀಕೃಷ್ಣ ಸಹಾ ಅಗತ್ಯವಾದ ರಾಜನಿಯಮಕ್ಕೆ(ಪ್ರೋಟೋಕಾಲ್) ಅನುಸಾರವಾಗಿಯೇ ಬಂದದ್ದರಿಂದ ದುರ್ಯೋಧನನ ಅರಮನೆಯಲ್ಲಿ ಸಭೆ, ಚರ್ಚೆ,ಭೋಜನ,ಇವುಗಳನ್ನ ನಿಯಮಾನುಸಾರ ಮಾಡಿ ಕೃಷ್ಣನ ಮನಗೆಲ್ಲುವುದು,ಅಲ್ಲದೆ ತನ್ನ ವೈಭವವನ್ನು ಪ್ರಕಟಪಡಿಸುವುದು ಅವನ ಉದ್ದೇಶವಾಗಿತ್ತು.ಆದರೆ ಈ ರಾಜತಾಂತ್ರಿಕ ವ್ಯವಸ್ಥೆಯನ್ನು ಎರಡು ಬಾರಿ ಶ್ರೀಕೃಷ್ಣ ಉದ್ದೇಶಪೂರ್ವಕವಾಗಿ ಮೀರಿ ನಡೆದು ಅಚ್ಚರಿ ಮೂಡಿಸಿದ !
ಮೊದಲನೆಯದು ಅರಮನೆಯನ್ನೇ ಪ್ರವೇಶಿಸದೆ ವಿದುರನ ಮನೆಗೆ ಹೋದದ್ದು.ಇದು ಭೇಟಿಯ ಆರಂಭದಲ್ಲಿ. ಎರಡನೆಯದು,ಭೇಟಿಯ ಅಂತ್ಯದಲ್ಲಿ ಕಳಿಸಲುಬಂದ ಎಲ್ಲರನ್ನೂ ಬಿಟ್ಟು ಸ್ವಲ್ಪ ದೂರ ಜತೆಗೆ ಬಾ ಎಂದು ಕರ್ಣನನ್ನು ಕರೆದು ಕೊಂಡು ಹೋದದ್ದು. ಅದನ್ನು ಅನಂತರ ಚರ್ಚಿಸೋಣ.
ತನ್ನ ಆರಾಧ್ಯ ದೈವವಾದ ಶ್ರೀಕೃಷ್ಣನನ್ನು ಅರಮನೆಯಲ್ಲಿ ಯಾವಾಗ ,ಎಲ್ಲಿ ,ಹೇಗೆ ಭೇಟಿಯಾಗಲಿ, ನನಗೆ ಸಮಯ,ದರ್ಶನ ಸಿಕ್ಕೀತೆ ಎಂದೆಲ್ಲ ವಿದುರ ಚಿಂತಿಸುತ್ತಿದ್ದಿರಬೇಕು. ಯಾಕೋ ಬಾಗಿಲ ಕಡೆ ನೋಡಿದ.ಎಂಥಾ ಅದ್ಭುತ ದೃಶ್ಯ !! ಕುಮಾರವ್ಯಾಸನ ಮಾತಿನಲ್ಲೇ ಕೇಳಿ:

'ಸಿರಿಮೊಗದ ಕಿರುಬೆಮರ
ತೇಜಿಯ ಖುರಪುಟದ ಕೆಂದೂಳಿ ಸೋಂಕಿದ ಸಿರಿಮುಡಿಯ
ಕುಡಿಮೀಸೆಯಲಿ ಕೆಂಪಡರ್ದ ರೇಣುಗಳ
ಖರ ಮರೀಚಿಯ ಝಳಕೆ ಬಾಡಿದ
ತರುಣ ತುಳಸಿಯ ಮಾಲೆಯೊಪ್ಪುವ
ಗರುವ ದೇವನ ಬರವ ಕಂಡನು ಬಾಗಿಲಲಿ ವಿದುರ '
ತನ್ನೊಡನೆ ಬಂದಿದ್ದ ಎಲ್ಲಾ ರಾಜತಾಂತ್ರಿಕ ಪರಿವಾರವನ್ನು ತೊರೆದು ಏಕಾಂಗಿಯಾಗಿ ವಿದುರನ ಮನೆಯನ್ನು ತಾನೇ ಹುಡುಕಿ ಬಂದಿದ್ದಾನೆ!
ಶ್ರೀಕೃಷ್ಣನ ಸುಂದರ ಮುಖದಲ್ಲಿ ಬೆವರಿನ ಹನಿಗಳಿವೆ.ಹರಡಿಕೊಂಡಿರುವ ತಲೆಗೂದಲ ಮೇಲೆ , ಹಾಗು ಮೀಸೆಯ ಮೇಲೆ ಕುದುರೆಯ ಗೊರಸುಗಳಿಂದ ಹಾರಿದ ಕೆಂಪು ಧೂಳಿನ ಕಣಗಳು ಮೆತ್ತಿಕೊಂಡಿವೆ.ರಥದ ಮೇಲೆ ದೀರ್ಘ ಪ್ರಯಾಣ ಮಾಡಿ ಬಂದಿದ್ದನಲ್ಲವೇ? ಕೊರಳಿನಲ್ಲಿ ಧರಿಸಿರುವ ತನಗೆ ಪ್ರಿಯವಾದ ತುಳಸಿಯ ಮಾಲೆ ಪ್ರಖರವಾದ ಬಿಸಿಲಿನ ಝಳಕ್ಕೆ ಬಾಡಿದೆ.
ಇಂಥಾ ಮಹಾಮಹಿಮ ಯಾವುದೇ ಪೂರ್ವ ಸೂಚನೆಯಿಲ್ಲದೆ ತನ್ನ ಮನೆಯ ಬಾಗಿಲಲ್ಲಿ ಬಂದು ನಗುತ್ತಾ ನಿಂತಿದ್ದಾನೆ! ಹೇಗಾಗಬೇಡ ವಿದುರನಿಗೆ?
ವಿದುರನಿಗೆ ಮಾತ್ರವೇನು? ಭಕ್ತನಾದ ಕುಮಾರವ್ಯಾಸನಿಗೂ ಭಕ್ತಿಯ ಆವೇಶ ಉಕ್ಕುತ್ತದೆ. ಆ ಪ್ರಸಂಗದ ಸೊಗಸನ್ನು ಓದಿಯೇ ಅನುಭವಿಸಬೇಕು !
ಕುಮಾರವ್ಯಾಸ ಪ್ರತಿಷ್ಠಾನ
೧೩/೦೮/೨೦೧೬

No comments:

Post a Comment