Sunday, August 7, 2016

ಐಸಲೇ ಕುಮಾರವ್ಯಾಸ !! ೪
ಆದಿ ಪರ್ವ ೭-೩೫
ಆದಿಪರ್ವದಲ್ಲಿ ತಂದೆಯ ಮರಣಾನಂತರ ಬಡತನದಲ್ಲಿದ್ದ ದ್ರೋಣಾಚಾರ್ಯ,ಆಶ್ರಯ, ಸಹಾಯಕ್ಕಾಗಿ ತನ್ನಬಾಲ್ಯದ ಸಹಪಾಠಿಯಾಗಿದ್ದ ದ್ರುಪದನನ್ನು ಹುಡುಕಿಕೊಂಡು ಬಂದ ಸಂದರ್ಭ ತುಂಬಾ ಸ್ವಾರಸ್ಯಕರವಾಗಿದೆ. ರಾಜ್ಯಮದ, ಐಶ್ವರ್ಯಮದ ಸೇರಿ ದ್ರುಪದ ದ್ರೋಣನನ್ನು ಗುರ್ತಿಸುವುದಿಲ್ಲ ಮಾತ್ರವಲ್ಲ, ಹಂಗಿಸಿ ಅವಮಾನಿಸುತ್ತಾನೆ. ರಾಜನಿಗೂ ಒಬ್ಬ ಬಡ ಬ್ರಾಹ್ಮಣನಿಗೂ ಎಲ್ಲಿಯಗೆಳೆತನ? ಎಂದು ಪ್ರಶ್ನಿಸುತ್ತಾನೆ.ಬಡವನಾಗಿದ್ದರೂ ಮಹಾಸ್ವಾಭಿಮಾನಿಯೂ, ಧನುರ್ವಿದ್ಯೆಯ ಪ್ರಕಾಂಡ ಪರಿಣತನೂ ಆಗಿದ್ದ ದ್ರೋಣ ಇದರಿಂದ ಅಪಮಾನಿತನಾಗಿ ತುಬಿದ ಸಭೆಯಲ್ಲಿ ಎಲ್ಲರೆದುರು ಕೂಗಿ ಪ್ರತಿಜ್ಞೆ ಮಾಡುತ್ತಾನೆ.
ದ್ರೋಣನಂಥ ಪರಾಕ್ರಮಿಯ ಪ್ರತಿಜ್ಞೆಯ ವಾಕ್ಯಗಳು ಕುಮಾರವ್ಯಾಸನ ಗಂಡುಕನ್ನಡದ ಭಾಷೆಯಲ್ಲಿ ಎಷ್ಟುಶಕ್ತಿಯುತವಾಗಿಮೂಡಿಬಂದಿವೆನೋಡಿ:-
'ಎಲವೋ ನಿನ್ನಾಸ್ಥಾನ ಸಹಿತೀ ಹೊಳಲ ಸುಡುವೆನು,
ನಿನ್ನ ಸೀಳಿದು ಬಲಿಯ ಕೊಡುವೆನು ಭೂತಗಣಕೆ
ಇದಿರಲ್ಲ ನೀನೆನಗೆ
ಕಲಿತ ವಿದ್ಯೆಯ ಕೋಲ ಮಕ್ಕಳ ಕಳುಹಿ ಕಟ್ಟಿಸಿ
ವಾಮಪಾದದಿ ತಲೆಯನೊದೆವೆನು
ಮರೆಯದಿರು ನೀನೆಂದನಾ ದ್ರೋಣ'
'ಎಲೋ ದ್ರುಪದ, ಇದೋ ನನ್ನ ಪ್ರತಿಜ್ಞೆ! ನಿನ್ನ ಆಸ್ಥಾನವೂ ಸೇರಿದಂತೆ ಈ ನಗರವನ್ನು ಸುಟ್ಟು ಹಾಕುತ್ತೇನೆ. ನಿನ್ನನ್ನು ಸೀಳಿ ಭೂತಗಳಿಗೆ ಬಲಿ ಹಾಕುತ್ತೇನೆ. ನೀನು ನನಗೆ ಸಮನಲ್ಲ. ನಾನು ಬಿಲ್ಲು ವಿದ್ಯೆ ಕಲಿಸಿದ ಮಕ್ಕಳನ್ನುಕಳಿಸಿ ನಿನ್ನನ್ನು ಕಟ್ಟಿಹಾಕಿಸಿ ನನ್ನ ಎಡಗಾಲಿನಿಂದ ನಿನ್ನ ತಲೆಯನ್ನು ಒದೆಯುತ್ತೇನೆ, ತಿಳಿದುಕೋ'
ಈ ಪ್ರತಿಜ್ಞೆಯನ್ನು ಶಿಷ್ಯಮಕ್ಕಳಾದ ಅರ್ಜುನಾದಿಗಳ ಮೂಲಕ ಸಾಧಿಸುತ್ತಾನೆಸಹಾ.
ಕುಮಾರವ್ಯಾಸ ಪ್ರತಿಷ್ಠಾನ
೦೭/೦೮/೨೦೧೬

No comments:

Post a Comment