Saturday, August 27, 2016

ಐಸಲೇ ಕುಮಾರವ್ಯಾಸ!! ೫
ಅರಣ್ಯಪರ್ವ ೨೩-೧೫
ಕುಮಾರವ್ಯಾಸನ ಅದ್ಭುತ ಕವಿತಾ ಶಕ್ತಿಯ ದ್ಯೋತಕ ಈ ಸರೋವರದ ವರ್ಣನೆ:
ದಟ್ಟ ಕಾಡಿನ ನಡುವೆ ಇರುವ ಸುಂದರವಾದ ಸರೋವರವನ್ನು ಕವಿ ಹೇಗೆ ವರ್ಣಿಸಬಹುದು? ತಂಗಾಳಿ, ಶುಭ್ರ ನೀರು, ತಾವರೆ,ದುಂಬಿಗಳ ಕಲರವ, ಮೇಲೆ ಹಾರುವ ಹಕ್ಕಿಗಳು ಇತ್ಯಾದಿ ಇತ್ಯಾದಿ., ಆದರೆ ಈ ಸರೋವರವನ್ನು ಕುಮಾರವ್ಯಾಸ ವಿಚಿತ್ರವಾದ ಹೋಲಿಕೆ
ಯೊಡನೆ ವರ್ಣಿಸಿ ಒಂದು ರೀತಿಯ ನಿಗೂಢತೆಯನ್ನು ಸೃಷ್ಟಿಸುತ್ತಾನೆ. ಓದಿನೋಡಿ:
'ಇರವಿನಲಿ ರಚನೆಯಲಿ
ಮಧುರೋತ್ತರವ ನೆರೆ ಬೀರುತ್ತ
ಅಂತಃಕರಣದಲಿ ಕತ್ತರಿಸಿಕೊಂಡಿಹ ಕುಜನರಂದದಲಿ
ಪರಿಮಳದ ಪಸರದಲಿ
ಶೈತ್ಯೋತ್ಕರುಷದಲಿ ಲೇಸೆನಿಸಿ
ಕುಡಿದೊಡೆ ಹರಣವನೆ ಹಿಂಗಿಸುವ
ಸರಸಿಯ ವಾರಿ ಚೆಲ್ವಾಯ್ತು '
ಮೇಲ್ನೋಟಕ್ಕೆ ಮಧುರವಾಗಿ ಕಾಣುತ್ತ , ಮಧುರವಾದ ಮಾತುಗಳನ್ನಾಡುತ್ತ ಇದ್ದರೂ ಅಂತಃಕರಣದಲ್ಲಿ ಕೃತ್ರಿಮವಾಗಿರುವ ದುಷ್ಟ ವ್ಯಕ್ತಿ ಗಳ ಹಾಗೆ ಈ ಸರೋವರ ಇದೆಯಂತೆ ! .ಅದರಿಂದ ಬರುವ ಪರಿಮಳ ಮನೋಹರವಾಗಿದೆ.ನೀರು ಸಹ ಅತ್ಯಂತ ತಂಪಾಗಿ ಆಪ್ಯಾಯಮಾನವಾಗಿದೆ.ಸರೋವರವೂ ತುಂಬಾ ಚೆಲುವಾಗಿದೆ.ಹಾಗಿದ್ದರೆ ಏಕೆ ಕುಜನರ ಹೋಲಿಕೆ ಎನ್ನುತ್ತೀರಾ? ಒಂದು ವಿಶೇಷವೂಇದೆ. ನೀರು ಕುಡಿದವರ ಪ್ರಾಣಹೋಗುತ್ತದೆ ಅಷ್ಟೇ.
ಗೊತ್ತಾಯಿತಲ್ಲ? ಇದು ಯಕ್ಷ ಪ್ರಶ್ನೆಗಾಗಿಒಡ್ಡಿದ ಸರೋವರ. ನೀರು ಕುಡಿದ ನಾಲ್ವರು ಪಾಂಡವ ಸಹೋದರರು ಸಾಯುತ್ತಾರೆ.ಅನಂತರ ಬಂದ ಧರ್ಮರಾಯ ತನ್ನ ಉತ್ತರದಿಂದ ಯಕ್ಷರೂಪಿ ಯಮನನ್ನು ಮೆಚ್ಚಿಸಿ ಸಹೋದರರನ್ನು ಮರಳಿ ಬದುಕಿಸುತ್ತಾನೆ. ಇರಲಿ.
ಸರೋವರದ ರಚನೆ,ಕೃತ್ರಿಮತೆ ಇವ ಕ್ಕೆ ಅನುರೂಪವಾದ ಹೋಲಿಕೆ ಹಾಗೂ ಬಳಸಿದ ಭಾಷೆಯ ಸತ್ವ ಮತೊಮ್ಮೆ ಮಗದೊಮ್ಮೆ ಚಿಂತಿಸುವಂತಿದೆ ಅಲ್ಲವೇ?
ಕುಮಾರವ್ಯಾಸ ಪ್ರತಿಷ್ಠಾನ
೦೯/೦೮/೧೯೧೬

No comments:

Post a Comment