Wednesday, August 31, 2016

ಐಸಲೇ ಕುಮಾರವ್ಯಾಸ!! -೧೮-

ಆದಿ ಪ ೩-೧೮

ಕರ್ಣ ಜನನ ಪ್ರಸಂಗದ ಒಂದು ಪದ್ಯವನ್ನು ನೋಡೋಣ:

ದೂರ್ವಾಸ ಮುನಿಯ ಸೇವೆ ಮಾಡಿದ ಕುಂತಿಗೆ ಐದು ಪರಮ ರಹಸ್ಯವಾದ ಮಂತ್ರಗಳನ್ನು ಋಷಿ ಉಪದದೇಶಿಸಿದ್ದಾರೆ. ನೀನು ಯಾವ ದೇವತೆಯನ್ನು ನೆನೆದು ಈ ಮಂತ್ರವನ್ನು ಜಪಿಸುವೆಯೋ ಆ ದೇವನಿಂದ ನಿನಗೆ ಮಗನು ಜನಿಸುತ್ತಾನೆ! ಇನ್ನೂ ಬಾಲ್ಯಾವಸ್ಥೆಯನ್ನು ದಾಟಿರದ ಕುಂತಿಗೆ ಇಂಥದೊಂದು ಮಹತ್ವದ ಕೊಡುಗೆ ಸಿಕ್ಕಿದೆ!

ಬಾಲಕಿಗೆ ಇನ್ನೂ ಆಟೋಟಗಳ ಆಸಕ್ತಿ ಮುಗಿದಿಲ್ಲ. ಅದಕ್ಕೇ ಈ ಮಂತ್ರದ ಪರೀಕ್ಷೆ ಮಾಡೋಣ ಅನ್ನಿಸಿತು.'ಕವಿ ಹೇಳುತ್ತಾನೆ, 'ಮಗುವು ತನದಲಿ ಬೊಂಬೆಯಾಟಕೆ ಮಗುವನೇ ತಹೆನೆಂದು' ಗಂಗಾ ತೀರಕ್ಕೆ ಬಂದು ಸೂರ್ಯನನ್ನು ಧ್ಯಾನಿಸಿ ಮಂತ್ರ ವನ್ನು ಉಚ್ಚರಿಸಿದಳು! ಆಗ ಘಟಿಸಿದ ಅದ್ಭುತವನ್ನು ಕುಮಾರವ್ಯಾಸನ ಮಾತಿನಲ್ಲೇ ಕೇಳಬೇಕು ಮತ್ತು ಅರಿಯಬೇಕು.

" ಅರಸ ಕೇಳ್,
ಮುನಿಯಿತ್ತ ಮಂತ್ರಾಕ್ಷರದ ಕರಹಕೆ ತಳುವಿದರೆ,
ದಿನಕರನ ತೇಜವ ಕೊಂಬನೆ?
ದೂರ್ವಾಸ ವಿಗಡನಲಾ!
ಧರೆಗೆ ಬಂದನು ಸೂರ್ಯನು
ಆತನ ಕಿರಣ ಲಹರಿಯ ಹೊಯ್ಲಿನಲಿ
ಸರಸ ಮುಖಿ ಬೆಚ್ಚಿದಳು
ಬಿಜಯಂಗೈಯಿ ನೀನೆನುತ"

ಸೂರ್ಯ ಕ್ಷಣ ಮಾತ್ರವೂ ನಿಧಾನಿಸಲಿಲ್ಲ; ಓಡಿ ಬಂದ! ಯಾರೋ ಪುಟ್ಟ ಬಾಲಕಿ ಮಂತ್ರಪ್ರಯೋಗ ಮಾಡುತ್ತಿದ್ದಾಳೆ ಎಂದು ಉದಾಸೀನ ಮಾಡದೆ ಪ್ರತ್ಯಕ್ಷನಾದ! ಸೂರ್ಯನ ಅಸಹಾಯಕತೆ ಏನು ಗೊತ್ತೆ? ಆ ಋಷಿಯ ಮಂತ್ರ ತನ್ನನ್ನು ಕರೆಯುತ್ತಿದೆ! ಆ ಮಂತ್ರದ ಕರೆಗೆ ತಾನೇನಾದರೂ ನಿಧಾನಿಸಿದರೆ(ತಳುವಿದರೆ), ತಾನು ಜಗತ್ತಿಗೆಲ್ಲಾ ಬೆಳಕನ್ನು ಕೊಡುವ ಮಹಾ ತೇಜಸ್ವಿ ಸೂರ್ಯ ಎಂದು ಆ ದೂರ್ವಾಸ ಋಷಿ ಲೆಕ್ಕಿಸುತ್ತಾನೇನು? ಖಂಡಿತಾ ಇಲ್ಲ, ಆ ದೂರ್ವಾಸ ಮಹಾ ಪ್ರಚಂಡ, ಯಾರನ್ನು ಏನು ಬೇಕಾದರೂ ಮಾಡಬಲ್ಲ.
'ಮಂತ್ರಬದ್ಧಾ ಹಿ ವೈ ದೇವಾಃ' ಎನ್ನುವ ಮಾತಿದೆ.ಅಂದರೆ ದೇವತೆಗಳು ಎಷ್ಟೇ ಶಕ್ತಿಶಾಲಿಗಳಾದರೂ ಮಂತ್ರಕ್ಕೆ ಬದ್ಧರು.ಅದನ್ನು ಮೀರಲಾರರು.
ಹಾಗೆಯೇ ವಿಶೇಷ ಅಕ್ಷರ ಶಕ್ತಿಗಳನ್ನು ಗುರ್ತಿಸಿ ಮಂತ್ರಗಳನ್ನು ಸೃಷ್ಟಿಸಿ, ಅವನ್ನು ಉಪಾಸನೆ,ಯಜ್ಞ, ಮುಂತಾದ ಅನೇಕ ಪ್ರಕ್ರಿಯೆಗಳಿಂದ ಪ್ರಯೋಗಕ್ಕೆ ಸಿದ್ಧಪಡಿಸುತಿದ್ದ ಮಂತ್ರ ದ್ರಷ್ಟಾರರು ದೇವತೆಗಳನ್ನು ಸಹಾ ಅಳುಕಿಸಬಲ್ಲರಾಗಿದ್ದರು ಎಂಬ ಉಲ್ಲೇಖವೂ ಇದೆ.

ದಿನಕರನ ತೇಜವ ಕೊಂಬನೆ? ಎಂಬ ಉದ್ಗಾರದಲ್ಲಿ ಜಗತ್ತಿಗೆ ಬೆಳಕು ಬೀರುವ ಸೂರ್ಯನಿಗೂ ಇರುವ ದೂರ್ವಾಸನ ಭಯವನ್ನು ಕುಮಾರವ್ಯಾಸ ಸಮರ್ಥವಾಗಿ ಹೇಳಿದ್ದಾನೆ.ಇದು ಕುಮಾರವ್ಯಾಸನ ವಿಶೇಷ  ಭಾಷಾ ಶೈಲಿ ಕೂಡ.

ಸೂರ್ಯನ ಕಿರಣಗಳ ಪ್ರಖರ ಕಾಂತಿಯನ್ನು ನೋಡಲು ಸಾಧ್ಯವಾಗದೆ ಕುಂತಿ ಬೆಚ್ಚಿ ಕೂಗಿಕೊಂಡಳಂತೆ, ಬೇಡ,ಬೇಡ, ನಾನು ನೋಡಲಾರೆ,ನೀನು ಮರಳಿಹೋಗು, ಎಂದು.

ಆಮೇಲೆ ನಡೆದದ್ದು ನಮಗೆಲ್ಲಾ ಗೊತ್ತಿರುವ ಕರ್ಣನ ಜನನ.'ತರಣಿ ಬಿಂಬದ ಮರಿಯೋ ( ಮರಿ ಸೂರ್ಯನೋ),ಕೌಸ್ತುಭ ವರಮಣಿಯ ಖಂಡದ ಕಣಿಯೋ (ಕೌಸ್ತುಭ ರತ್ನದ ತುಣುಕೋ),ಮರ್ತ್ಯರಿಗೆ ಮಗನಿವನಲ್ಲ ಮಾಯಾ ಬಾಲಕನೊ ಮೇಣು( ಮನುಷ್ಯರ ಮಗುವಂತೂ ಅಲ್ಲ ಮಾಯಾ ಬಾಲಕನಿರಬೇಕು) ಅನ್ನುವಷ್ಟು ಸುಂದರ ವಾಗಿದ್ದ , ಕೈ ಕಾಲುಗಳನ್ನು ಬಡಿಯುತ್ತಾ ಮರಳ ರಾಶಿಯನ್ನು ಕೆದರುತ್ತಿದ್ದ ಶಿಶು ಕರ್ಣ.

ಒಂದು ಕಾಲದಲ್ಲಿ ಯುದ್ಧ ವಿದ್ಯೆಯಿಂದ ಹಿಡಿದು ಯಜ್ಞ ಯಾಗಾದಿ ಎಲ್ಲ ಕರ್ಮಗಳಲ್ಲಿ ಬಳಕೆಯಾಗುತ್ತಿದ್ದ ಮಂತ್ರಗಳ ಬಗ್ಗೆ ಏನೋ ಒಂದು ಗಂಭೀರ ಚಿಂತನೆ ಮೂಡುವಂತೆ ಮಾಡುತ್ತದಲ್ಲವೇಈ ಪದ್ಯ?

ಕುಮಾರವ್ಯಾಸ ಪ್ರತಿಷ್ಠಾನ

೨೮/೦೮/೨೦೧೬

#




No comments:

Post a Comment