Sunday, October 23, 2016

ಐಸಲೇ ಕುಮಾರವ್ಯಾಸ!! -೪೪-

ವಿರಾಟ ಪ ೭-೨೨

ದ್ರೋಣಾಚಾರ್ಯರನ್ನು ರೇಗಿಸುತ್ತಾ ಕರ್ಣ ಬ್ರಾಹ್ಮಣರ ನಡೆ-ನುಡಿಯನ್ನು ವಿಡಂಬಿಸಿದ್ದನ್ನು ನೋಡಿದೆವು.

ತಂದೆಯ ಪರವಾಗಿ ತಿರುಗಿಬಿದ್ದ ಅಶ್ವತ್ಥಾಮ ಸುಮ್ಮನಿದ್ದಾನೆಯೇ?' ನಗುವೆ ವಿಪ್ರರ, ಆವ ರಾಯರ ಮಗನು ಹೇಳಾ. '( ವಿಪ್ರರನ್ನು ಆಡಿಕೊಳ್ಳುವ ನೀನು ಯಾವ ರಾಜನ ಮಗ ಹೇಳು?)' ನೀನಾರು ಇದರೊಳಗೆ ಕೊಂಬವನೋ ಕೊಡುವವನೋ?' (ಕೊಡುವ ಜಾತಿಗೆ ಸೇರಿದ ರಾಜನೂ ಅಲ್ಲ, ಕೊಳ್ಳುವ ಬ್ರಾಹ್ಮಣನೂ ಅಲ್ಲ) ಹೀಗೆ ವಿವಾದದ ಆರಂಭ!

ದುರ್ಯೋಧನನ ಸಮಸ್ಯಯೇ ಬೇರೆ. ಬಂದಿರುವವನು ಪಾರ್ಥನೇ ಆಗಿದ್ದರೆ ಇನ್ನೂ ಮುಗಿಯದ ಅಜ್ಞಾತವಾಸದ ಅವಧಿಯ ನೆಪದಲ್ಲಿ ಪುನಃ ಪಾಂಡವರನ್ನು ಕಾಡಿಗಟ್ಟುವ ಯೋಜನೆ ಅವನದು. ಭೀಷ್ಮರ ಬಳಿ ಹೋಗಿ ನಿವೇದಿಸಿದ. ತಾತಾ, ಅಜ್ಞಾತವಾಸದ ಅವಧಿ ಇನ್ನೂ ಸವೆದಿಲ್ಲ;  ನನ್ನಲ್ಲಿ ಲೆಕ್ಕವಿದೆ ಎಂದ.

ಹಿರಿಯರಾದ ಭೀಷ್ಮರ ಮನಸ್ಸಿನಲ್ಲಿ ಈ ಲೆಕ್ಕಾಚಾರಗಳೆಲ್ಲ ನಡೆಯದೇ ಇರುತ್ತದೆಯೇ?. ಅವರು ಸ್ಪಷ್ಟವಾಗಿ ಅನುಭವಿಯಾಗಿ ದುರ್ಯೋಧನನಿಗೆ ಹೇಳುವ ಮಾತುಗಳನ್ನು ಕುಮಾರವ್ಯಾಸ ಕಡೆದಿರುವುದನ್ನು ನೋಡಿ:

'ಮಗನೇ ಕೇಳ್,
ಈರೈದು ವರ್ಷಕೆ ಮಿಗುವವು ಎರಡೇ ಮಾಸ,
ಮಾಸಾದಿಗಳನವರು ಅನುಭವಿಸಿದರು
ಹದಿಮೂರು ವತ್ಸರವ,
ಮಿಗುವವಧಿ ಬುಧರರಿಯೆ
ನಿನ್ನಿನ ಹಗಲು ನಿನ್ನದು
ಪಾಂಡು ತನಯರು ಹೊಗುವಡೆ
ಇಂದಿನ ದಿವಸವವರದು
ಕಂದ ಕೇಳೆಂದ...'

'ಮಗೂ, ದುರ್ಯೋಧನ, ಹತ್ತು ವರ್ಷಕ್ಕೆ ಎರಡು ಅಧಿಕ ಮಾಸಗಳು ಸಹಾ ಬರುತ್ತವೆ. ವರ್ಷಕ್ಕೆ ಹನ್ನೆರಡು ಮಾಸದಂತೆ ಅವರ ವನವಾಸ,ಅಜ್ಞಾತವಾಸದ ಅವಧಿಯನ್ನು ಅವರು ಪೂರ್ಣಗೊಳಿಸಿದ್ದಾರೆ. ಆ ಲೆಕ್ಕದಂತೆ ನಿನ್ನೆಯ ದಿನದ ಹಗಲು ನಿನ್ನದಾಗಿತ್ತು. ಆದರೆ ಇಂದಿನ ಹಗಲು ಪಾಂಡವರ ಸ್ವಂತದ್ದು. ನೀನು ಪ್ರಶ್ನಿಸುವ ಹಾಗಿಲ್ಲ.'

'ಅಷ್ಟೇ ಅಲ್ಲ ಸಮುದ್ರ ಎಲ್ಲೇ ಮೀರಿದರೂ, ಭೂಭಾರವನ್ನು ಹೊತ್ತಿರುವ ದಿಕ್ಕರಿಗಳು ತಮ್ಮ ಹೊರೆಯನ್ನು ಇಳಿಸಿದರೂ, ಬೆಟ್ಟಗಳು ನಡೆದಾಡಿದರೂ ಸರಿ, ಯುಧಿಷ್ಠಿರ ಸತ್ಯಭಾಷೆಯನ್ನು ಮೀರುವವನಲ್ಲ ತಿಳಿದುಕೋ,'

ವರ್ಷಕ್ಕೆಹನ್ನೆರಡು ತಿಂಗಳಿನ ಲೆಕ್ಕದಲ್ಲಿ ಪಾಂಡವರ ಅವಧಿ ಕಳೆದಿತ್ತು. ಆದರೆ ವನವಾಸಕ್ಕೆ ಹೊರಟ ತಿಥಿಯನ್ನು ಪರಿಗಣಿಸಿದರೆ ಹದಿಮೂರು ವರ್ಷ ಇನ್ನೂ ಮುಗಿದಿರಲಿಕ್ಕಿಲ್ಲ. ಅಧಿಕ ಮಾಸ ನಾಲ್ಕು ವರ್ಷಕ್ಕೊಮ್ಮೆ ಬರುವುದು ಎಲ್ಲರಿಗೂ ಗೊತ್ತು. ಆ ವರ್ಷ ಕಳೆಯಲು ಹದಿಮೂರು ತಿಂಗಳು ಬೇಕಾಗುತ್ತದೆ. ಈ ತಾಂತ್ರಿಕ ಅಂಶವನ್ನು ಭೀಷ್ಮರು ತಿಳಿಸಿ ಅವಧಿ ಪೂರೈಸಿದ್ದನ್ನು ಸಮರ್ಥಿಸುತ್ತಾರೆ.

ಮನೆಯ ಹಿರಿಯರಿಗೆ ಮಕ್ಕಳು, ಮೊಮ್ಮೊಕ್ಕಳಲ್ಲಿರುವ ಕಳಕಳಿ, ಅವರಿಗಾಗಿ ಮರುಗುವ , ನೋಯುವ ಮನೋಭಾವ ವೃದ್ಧರಾದ ಭೀಷ್ಮರಿಗೆ ಒಂದೊಂದು ದಿನನ ಲೆಕ್ಕವನ್ನೂ ಕರಾರುವಾಕ್ಕಾಗಿ ಮನಸ್ಸಿನಲ್ಲೇ ಎಣಿಸುವಂತೆ ಮಾಡಿದ್ದೀತು!

'ನಿನ್ನಿನ ಹಗಲು ನಿನ್ನದು, ಇಂದಿನ ದಿವಸ ಅವರದು... ' ಕವಿ ವ್ಯಾವಹಾರಿಕ ಭಾಷೆಯನ್ನೂ ಹೇಗೆ ಉತ್ತಮ ಕಾವ್ಯ ಮಾಡಬಲ್ಲ ಎಂಬುದರ ನಿದರ್ಶನ!

ಕುಮಾರವ್ಯಾಸ ಪ್ರತಿಷ್ಠಾನ
೨೨/೧೦/೨೦೧೬
#












No comments:

Post a Comment