Tuesday, October 4, 2016

ಐಸಲೇ ಕುಮಾರವ್ಯಾಸ!! -೩೭-

ವಿರಾಟ ಪ ೬-೭

'ಕುಣಿಸಿ ನಗನೇ...,'

ಸರಿಯಾದ ಸಾರಥಿಯೊಬ್ಬ ಸಿಕ್ಕಿದರೆ ದುರ್ಯೋಧನನಿಗೆ ಸರಿಯಾದ ಪಾಠ ಕಲಿಸುತ್ತಿದ್ದೆ ಎಂದು  ಹೊಗಳಿಕೊಳ್ಳುತ್ತಿದ್ದ ಉತ್ತರನಿಗೆ ಅರ್ಜುನ ದ್ರೌಪದಿಯ ಮೂಲಕ  ಸಂದೇಶ ರವಾನಿಸುತ್ತಾನೆ. ಅರಮನೆಯಲ್ಲಿರುವ ಬೃಹನ್ನಳೆ ಹಿಂದೆ ಅರ್ಜುನನ ಸಾರಥಿಯಾಗಿದ್ದವನಂತೆ!

ಉತ್ತರ ಕೇಳಿಕೊಂಡ; 'ನೀನು ಸಾರಥಿಯಾಗಿ ಸಮರದಲಿ ಉಳುಹಬೇಹುದು, ನೀನು ಮೆಚ್ಹುವ ಹಾಗೆ ಕಾದಿ ತೋರಿಸುತ್ತೇನೆ'. ಅರ್ಜುನ ಹೇಳಿದ, ನಾವು ಭರತ ವಿದ್ಯೆಯಲ್ಲಿ (ನಾಟ್ಯ)ಪ್ರವೀಣರು ಸರಿ ,ಸಾರಥಿತನ ಮರೆತುಹೋಗಿದೆ.ಅದೂ ಅಲ್ಲದೆ ಅರಿಭಟರು ಭೀಷ್ಮಾದಿಗಳು ನಿಲಲರಿದು, ಅಂಥವರೊಂದಿಗೆ ಯುದ್ಧ ಕೊಳ್ಳೆ ಹೊಡೆದಂತಲ್ಲ'

ಉತ್ತರ ಆಶ್ವಾಸನೆ ಕೊಟ್ಟ: 'ನಾನಿರಲು ಭೀಷ್ಮಾದಿಗಳು ನಿನಗೇನ ಮಾಡಲುಬಲ್ಲರು? ಅಳುಕದೆ ನೀನು ನಿಲ್ಲು,ಸಾಕು, ಒಂದು ನಿಮಿಷಕೆ ಗೆಲುವೆನವರುಗಳ' ದ್ರೋಣ, ಕರ್ಣ ,ಗುರುಪುತ್ರ(ಅಶ್ವತ್ಥಾಮ) ನಾನರಿಯದವರಲ್ಲ 'ಎಂದ.

ಅಂತೂ ಸಾರಥಿಯಾಗಿ ಅರ್ಜುನ ರಥ ಓಡಿಸಿದ. 'ಹೊಸ ಪರಿಯ ಸಾರಥಿಯಲಾ , ನಮಗಸದಳವು ಸಂಗಾತ ಬರಲು'(ಯಾರಿವ? ಹೊಸ ಸಾರಥಿ, ನಮಗೆ ಜತೆಯಲ್ಲಿ ಸಾಗಲು ಆಗುತ್ತಿಲ್ಲ ')ಎಂದು ಚತುರಂಗ ಬಲ ಹಿಂದಕ್ಕೆ ಉಳಿಯಿತು.'ಸಮೀರನ ಮಿಸುಕಲೀಯದೆ ಮುಂದೆ ಮಿಕ್ಕವು ವಿಗಡ ವಾಜಿಗಳು' (ಕುದುರೆಗಳು  ಗಾಳಿಯನ್ನೂ ಮೀರಿಸಿ ಶತ್ರುಸೈನ್ಯಕ್ಕೆ ಎದುರಾಗಿ ಓಡಿದವು.)

ಎದುರಿಗೆ ಸಾಗರದೋಪಾದಿಯಾಗಿ ನಿಂತ ಸೈನ್ಯವನ್ನು ದೂರದಿಂದಲೇ ನೋಡಿದ ಉತ್ತರನಿಗೆ ಎದೆ ನಡುಗಿತು! ಕವಿ ಹೇಳುತ್ತಾನೆ 'ವಿರಾಟನ ಮಗನಿಗೆ ದಾವಾಗ್ನಿಯಂತೆ ತೋರಿತು' ತೀರ್ಮಾನಿಸಿದ;'ಈ ಸೈನ್ಯದೊಡನೆ ಕಾದುವಾತ ಪರಶಿವ ಮಾತ್ರ.ಕೌರವನ ಬಲಕ್ಕೆ ನಮೋನ್ನಮಃ! ನಾವು ಕಾದಿ ಗೆದ್ದೆವು ಅದಾಯ್ತು ! ಸಾರಥಿಗೆ ಹೇಳುತ್ತಾನೆ:

'ಹಸಿದ ಮಾರಿಯ ಮಂದೆಯಲಿ
ಕುರಿ ನುಸುಳಿದಂತಾದೆನು ಬೃಹನ್ನಳೆ,
ಎಸಗದಿರು ತೇಜಿಗಳ,
ತಡೆ, ಚಮ್ಮಟಿಗೆಯನು ಬಿಸುಡು,
ಮಿಸುಕ ಬಾರದು,
ಪ್ರಳಯ ಕಾಲನ ಮುಸುಕನುಗಿವವನಾರು,
ಕೌರವ ಅಸಮ ಬಲನೈ
ರಥವ ಮರಳಿಚು,
ಜಾಳಿಸುವೆನೆಂದ'

"ಹಸಿದು ಬೊಬ್ಬಿಡುತ್ತಿರುವ ಮಾರಿಯರ ಮಂದೆಯ ನಡುವೆ ಒಂದು ಕುರಿ ನುಸುಳಿದರೆ ಅದರ ಕಥೆ ಏನಾದೀತು? ನನ್ನ ಕಥೆ ಹಾಗಾಗಿದೆ ಬೃಹನ್ನಳೆ, ಕುದುರೆಗಳನ್ನು ಹಿಡಿದು ನಿಲ್ಲಿಸು, ನಿನ್ನ ಚಾವಟಿಯನ್ನು ಬಿಸಾಕು. ಅಲ್ಲಾಡಿದರೆ ಕೆಟ್ಟೆ. ಮಲಗಿರುವ ಪ್ರಳಯಕಾಲನಾದ ರುದ್ರನ ಮುಸುಕನ್ನು ತೆಗೆದು ಎಬ್ಬಿಸುವುದೂ ಒಂದೇ, ಈ ಮಹಾಸೈನ್ಯದೊಂದಿಗೆ ಯುದ್ಧ ಮಾಡುವುದೂ ಒಂದೇ. ನಾನು ಏನೋ ಅಂದುಕೊಂಡಿದ್ದೆ, ಪರವಾಗಿಲ್ಲ ಕೌರವನ ತುಂಬಾ ದೊಡ್ದಸೈನ್ಯವನ್ನೇ ಹೊಂದಿದ್ದಾನೆ!
ಇರಲಿ, ರಥವನ್ನು ಹಿಂದಕ್ಕೆ ಮರಳಿಸು, ನಾನು ಪಲಾಯನ ಮಾಡುತ್ತೇನೆ."

ಮಾರಿ ಎಂದರೇ ಪ್ರಾಣಿಗಳ ಬಲಿಯನ್ನು ಬಯಸುವವಳು.ಹಸಿದ ಮಾರಿ ಇನ್ನೂ ಭಯಂಕರ. ಅಂತಹ  ಹಸಿದ ಮಾರಿಯರ ಸಮೂಹವಿದ್ದ ಹಾಗಿದೆ ಕೌರವ ಸೈನ್ಯ! ಅದರ ಮುಂದೆ  ತಾನೊಂದು ಕುರಿ ಇದ್ದಹಾಗೆ.ನುಸುಳಿದರೆ?

ಉತ್ತರಕುಮಾರನ ಭಯ, ದಿಗಿಲು, ಅಸಹಾಯಕತೆಗಳನ್ನ ಬಿಂಬಿಸಲು ತಂದಿರುವ ಮಾರಿಯರ ಉಪಮೆ ಎಷ್ಟು ಪರಿಣಾಮಕಾರಿಯಾಗಿದೆ!

ಕುಮಾರವ್ಯಾಸ ಪ್ರತಿಷ್ಠಾನ
೪/೧೦/೨೦೧೬
#







No comments:

Post a Comment