Tuesday, October 25, 2016

ಐಸಲೇ ಕುಮಾರವ್ಯಾಸ!! -೪೫-

ವಿರಾಟ ಪ ೭-೪೦

ಯುದ್ಧಕ್ಕೆ ಬಂದವನು ಅರ್ಜುನ ಎಂಬ ಅಂಶ ಬಲವಾಗುತ್ತಲೇ ಕೌರವರ ತಂತ್ರ ಬದಲಾಯಿತು!

ದುರ್ಯೋಧನ ಮತ್ತು ಕೆಲವರು ಗೋವುಗಳೊಂದಿಗೆ ಹಸ್ತಿನಾಪುರಕ್ಕೆ ಪ್ರಯಾಣ ಮಾಡುವುದು, ದ್ರೋಣ, ಭೀಷ್ಮ, ಕರ್ಣ ಮೊದಲಾದ ವೀರರು ಅರ್ಜುನನನ್ನು ತಡೆದು ಕಾದುವುದು. ಸರಿ, ದುರ್ಯೋಧನ ಗೋ ಸಂಪತ್ತಿನೊಂದಿಗೆ ಹೊರಟದ್ದನ್ನು ಅರ್ಜುನ ನೋಡಿ ಉತ್ತರನ ಸಾರಥ್ಯದಲ್ಲಿ ಬೆನ್ನಟ್ಟಿದ.

ದಶಕಗಳ ಕಾಲ ಯುದ್ಧ ಮಾಡದೆ ಇದ್ದ ಅರ್ಜುನನಿಗೆ ದೊಡ್ಡ ಅವಕಾಶ!. ಉತ್ತರನ ಮೂಲಕ ತಾವು ಬನ್ನಿಯ ಮರದಲ್ಲಿ ಅಡಗಿಸಿಟ್ಟಿದ್ದ ಮಹಾ ಅಸ್ತ್ರಗಳನ್ನು ಪಡೆದದ್ದಾಗಿತ್ತು. ಶತ್ರುಸೇನೆ ತಲ್ಲಣಿಸುವಂತಹ ರೀತಿಯಲ್ಲಿ ಬಾಣ ಪ್ರಯೋಗದ ಆರಂಭ!

ಮಹಾಭಾರತದಲ್ಲಿ ಎಷ್ಟೊಂದು ಜನ ಮಹಾರಥರಿದ್ದರೂ ಅರ್ಜುನನ ಬಿಲ್ಗಾರಿಕೆಯೇ ಭಿನ್ನವಾದದ್ದು.ಅವನ ನೈಪುಣ್ಯ, ದಿಟ್ಟತನ ,ನಿಖರವಾದ ಗುರಿ ಇವಕ್ಕೆ ಎಣೆಯಿಲ್ಲ. ಆನೆ, ಕುದುರೆ, ಪದಾತಿಗಳ ಹೆಣಗಳ ರಾಶಿ , ನೆತ್ತರ ಹೊಳೆ ಇವು  ಒತ್ತಟ್ಟಿಗಿರಲಿ; ಅವಿರತವಾದ ಬಾಣಪ್ರಯೋಗದ ಪರಿಣಾಮವನ್ನು ಕುಮಾರವ್ಯಾಸ ವರ್ಣಿಸುವ ರೀತಿ ಅದ್ಭುತವಾಗಿದೆ ನೋಡಿ;

'ಮುಂದೆ ಕವಿದಂಬುಗಳು ಸುಭಟರ ಕೊಂದು ಬಿದ್ದವು,
ಮತ್ತೆ ಬಳಿಯಲಿ ಬಂದವಕೆ ಗುರಿಯಿಲ್ಲ
ಹೇಳುವೆನೇನನದ್ಭುತವ
ಒಂದು ಗುರಿಗೆರಡಂಬ ತೊಡಬೇಡೆಂದು
ಪಾರ್ಥನ ಬೇಡಿಕೊಂಡವು
ಸಂದ ಮಂತ್ರಾಸ್ತ್ರಂಗಳು
ಎಲೆ ಜನಮೇಜಯ ಕ್ಷಿತಿಪ ..,'

ಪಾರ್ಥ ಸರಣಿ ಸರಣಿಯಾಗಿ ಬಾಣ ಬಿಡುತ್ತಿದ್ದನಷ್ಟೇ?

'ಮುಂದೆ ಹೋದ ಬಾಣ ಗುರಿಯಲ್ಲಿದ್ದ ಯೋಧನನ್ನು ತಪ್ಪದೇ ಕೊಂದು ಕೆಡವುತ್ತಿತ್ತು. ಅದರ ಹಿಂದೆ ಬಂದ ಬಾಣಕ್ಕೆಯಾವುದೇ ಗುರಿ ಸಿಗದೆ ವ್ಯರ್ಥವಾಗುತ್ತಿತ್ತು. ಹಾಗಾಗಿ ಬಾಣಗಳು ಪಾರ್ಥನನ್ನು ಬೇಡಿಕೊಳ್ಳುತ್ತಿದ್ದವಂತೆ! ಅಯ್ಯಾ ಪಾರ್ಥ, ಒಂದು ಗುರಿಗೆ ಎರಡೆರಡು ಬಾಣಗಳನ್ನು ದಯಮಾಡಿ ತೊಡಬೇಡ. ನಾವು ಮಂತ್ರಾಸ್ತ್ರಗಳು, ಗುರಿಯನ್ನು ಸಾಧಿಸದೆ ವ್ಯರ್ಥವಾಗುವುದು ಶೋಭೆಯಲ್ಲ.'

ತುಸು ಉತ್ಪ್ರೇಕ್ಷೆ ಅನಿಸಿದರೂ ಆ ಕಾಲದ ಧನುರ್ವಿದ್ಯೆಯಲ್ಲಿ ನಿಸ್ಸೀಮನಾದ ಅರ್ಜುನನ ರಣಕೌಶಲವನ್ನು ಬೇರೆ ಹೇಗೆ ಹೇಳಲು ಸಾಧ್ಯ?

ಕುಮಾರವ್ಯಾಸ ಪ್ರತಿಷ್ಠಾನ

೨೫/೧೦/೨೦೧೨
#



No comments:

Post a Comment