Wednesday, October 26, 2016

ಐಸಲೇ ಕುಮಾರವ್ಯಾಸ!! -೪೬-

ವಿರಾಟ ಪ ೭-೫೧

ವಿರಾಟನ ಗೋವುಗಳನ್ನು ಕೌರವರು ಅಪರಿಸಿದ್ದರು, ಅರ್ಜುನ ಬಿಡಿಸಿ ತೆರಳಿಸಿದ್ದು ಕಥೆ. ಅವುಗಳಿಗಾಗಿ ಒಂದು ಮಹಾ ಯುದ್ಧವೇ ನಡೆದುಹೋಯಿತು!

ಆದರೆ ಗೋವುಗಳಿಗೆ ಇದಾವುದರ ಪರಿವೆಯೂ ಇಲ್ಲದ ತಮ್ಮದೇ ಮುಗ್ಧ ಲೋಕ! ಮಹಾ ಕವಿ ಕುಮಾರವ್ಯಾಸ 'ತಿರುಗಿ ಕೆಂದೂಳಿಡುತ ತುರುಗಳು ಪುರಕೆ ಹಾಯ್ದವು '(ಕೆಂಪು ಧೂಳೆಬ್ಬಿಸುತ್ತಾ ನಗರದ ಕಡೆಗೆ ಹೋದವು) ಎನ್ನುತ್ತಾನೆ.

ಅಷ್ಟಕ್ಕೇ ನಿಲ್ಲುವುದಿಲ್ಲ, ಆ ಗೋ ಲೋಕದ ಚಟುವಟಿಕೆಯ ಒಂದು ಕಿರು ಚಿತ್ರವನ್ನು ಸಹಾ ಕೊಡುತ್ತಾನೆ! ಹೇಗಿತ್ತು ಆ ಚಿತ್ರ?

'ಕೆಲವು ಕಡೆಗಂದಿಗಳು
ಬಾಲದ ಬಳಿಗೆ ಮೂಗಿಟ್ಟು
ಅಡಿಗಡಿಗೆ ಮನ ನಲಿದು,
ಮೋರೆಯನೆತ್ತಿ ಸುಕ್ಕಿಸಿ,
ಮತ್ತೆ ಹರಿಹರಿದು,
ಮಲೆತು ಕಾಲಲಿ ನೆಲನ ಕೆರೆದು,
ಅವ್ವಳಿಸಿ ಮತ್ತೊಂದಿದಿರುವರೆ
ಬಲುಸಲಗ ಈಡಿರಿದಾಡುತಿದ್ದುದು ಹಿಂಡು ಹಿಂಡಿನಲಿ'

'ಕೆಲವು ತುಂಟ ಕಡಸುಗಳು( ಇನ್ನೂ ಕರು ಹಾಕದ ಯುವ ಪ್ರಾಯದ್ದು) ಹಸುಗಳ  ಬಾಲವಸ್ನ್ನು ಮೂಸುವುದು, ಮುಖವನ್ನು ಮೇಲೆತ್ತಿ ,ಮೊರೆಯನ್ನು ಕಿವುಚಿ ಖುಷಿಗೊಂಡು ಹಿಗ್ಗುತ್ತಿದ್ದವಂತೆ. ಮತ್ತೆ ಕೆಲವು ಅಲ್ಲಿಂದ ಇಲ್ಲಿಗೆ ಅಡ್ಡಾಡುತ್ತಾ, ಮದದಿಂದ ನೆಲವನ್ನು ಕಾಲಿನಿಂದ ಕೆರೆಯುತ್ತಾ, ಎದುರಿಗೆ ಬಂದ ಮತ್ತೊಂದು ಸಲಗವನ್ನು ಕೋಡಿನಿಂದ ತಿವಿದಾಡುತ್ತಾ ಕಾದುತ್ತಿದ್ದವು. ಇದು ಅಪಾರವಾದ ವಿರಾಟನ ಗೊಸಂಪತ್ತಿನ ಹಿಂಡುಗಳಲ್ಲಿ ನಡೆಯತ್ತಿದ್ದ ವಿದ್ಯಮಾನ!

ಯಾರಾದರೂ ಅಪಹರಿಸಲಿ, ಯಾರಾದರೂ ಮರಳಿಸಲಿ ಅವುಗಳ ಆನಂದ ಅವಕ್ಕೆ!

ಹಸುಗಳ ಹಿಂಡನ್ನು ನೋಡಿದವರಿಗೆ ಈ ದೃಶ್ಯದ ವರ್ಣನೆ ಎಷ್ಟು ಸಹಜ ,ಸೂಕ್ಷ್ಮವಾಗಿದೆ ಎಂದು ತಿಳಿಯುತ್ತದೆ.

ಕೇವಲ ಭಾರತದ ಕಥೆಯಷ್ಟೇ ಅಲ್ಲ. ಕುಮಾರವ್ಯಾಸ, ಬದುಕಿನ ಒಂದೊಂದು ಸೂಕ್ಷ್ಮವನ್ನೂ ಗಮನಿಸಿ ಬೆರಗಾಗುವಂತೆ ವರ್ಣಿಸಬಲ್ಲವ!

ಕುಮಾರವ್ಯಾಸ ಪ್ರತಿಷ್ಠಾನ

೨೬/೧೦/೨೦೧೬
#

No comments:

Post a Comment