Sunday, September 11, 2016

ಐಸಲೇ ಕುಮಾರವ್ಯಾಸ!! -೨೭-

'ಅರಸುಗಳಿಗಿದು ವೀರ..,'
ದ್ರೋಣ ಪ ೫=೫೧

ಯುದ್ಧಕ್ಕೆ ಅಭಿಮನ್ಯುವಿನ ಪ್ರವೇಶವಾದ ಕೂಡಲೇ ಕುಮಾರವ್ಯಾಸನ ಲೇಖನಿ ಸೂಕ್ಷ್ಮ ಮತ್ತು ಹರಿತವಾಗುತ್ತಾ ಹೋಗುತ್ತದೆ!
ದ್ವಾಪರದ ಯುದ್ಧದ ಮಿಂಚಿನ ಸಂಚಾರವಾಗುತ್ತದೆ!

ಪದ್ಮವ್ಯೂಹ ಭಯಂಕರ; ಎದುರಿಗಿರುವ ವೀರರು 'ಇಂದುಧರ( ಶಿವ) ಅಡಹಾಯ್ದರೆ ಹಿಂದೆಮುಂದೆನಿಸುವ ' ಅದಟರು! ಸಮರವಿದು ಸಾಮಾನ್ಯವಲ್ಲ ಎಂದು ಧರ್ಮರಾಯ ಎಷ್ಟು ಸಂತೈಸಿದರೂ ಅಭಿಮನ್ಯು ಕದಲಲಿಲ್ಲ.'ಅವನಿಯನು ಗೆಲದೇ ಮಹಾರಥರೆನಿಪ ನಾಯಕರ  ಅವನಿಯೊಳಗೊರಗಿಸದೆ ಬಿಟ್ಟರೆ ದಿವಿಜಪತಿ ತನಯಂಗೆ( ಇಂದ್ರನ ಮಗನಾದ ಅರ್ಜುನನಿಗೆ) ತಾ ಜನಿಸಿದವನಲ್ಲ' ಎಂದು ಪ್ರತಿಜ್ಞೆ ಯನ್ನೂಮಾಡಿದ .

ಅನಿವಾರ್ಯವಾಗಿ ಧರ್ಮರಾಯ ಒಪ್ಪಬೇಕಾಯಿತು. ಸರಿ, ಒಟ್ಟಾಗಿ ನಿಂತಿರುವ ಶತ್ರುಗಳನ್ನು' ನೀನು ಹೊಯ್ದು ಮೊದಲಲಿ ಬಿಡಿಸು, ಅನಂತರ ನಾವು ಬಂದು ನಿನ್ನನು ಕೂಡಿಕೊಂಬೆವು' ಎಂದ.

'ಹಗೆಯಲಿ ಹೂಣಿ ಹೊಗದಿರು, ಮೈತೆಗೆದು ಕಾದುವುದು( ಶತ್ರುಗಳ ಮೇಲೆ ತುಂಬಾ ಆಕ್ರಾಮಕವಾಗಿ ಹೋಗ ಬೇಡ, ರಕ್ಷಣಾತ್ಮಕವಾಗಿರು) ಎಂದು ಹಿರಿಯರಂತೆ  ಎಚ್ಚರಿಸಿದ ಸಹಾ.

ಅವಕಾಶಕ್ಕಾಗಿ ಆನಂದಗೊಂಡ ಅಭಿಮನ್ಯು ಯುದ್ಧಕ್ಕೆ ಹೊರಡುವುದೇ ಒಂದು ಸೊಗಸು! ಗಂಡುಡುಗೆ ಉಟ್ಟ; ಹೊನ್ನಿನ ಕಠಾರಿಯನ್ನು ಸೊಂಟಕ್ಕೆ ಸಿಗಿಸಿದ ;ಹೊನ್ನಿನ ಉಡುಗೆ, ಹಾರ ಧರಿಸಿ 'ನಸುನಗೆ ಮೊಗದ ಸೊಂಪಿನಲಿ ' ಉತ್ಸಾಹದಿಂದ ಅನುವಾದ. ಅಗತ್ಯವಾದ ಅಸ್ತ್ರ ಶಸ್ತ್ರಗಳನ್ನು ತುಂಬಿಕೊಂಡ ,ಉತ್ತಮ ಕುದುರೆಗಳು, ಫಲಕ, ಧ್ವಜದಿಂದ ಕೂಡಿದ ರಥ ಸಿದ್ಧವಾಗಿ ನಿಂತಿತು!

ಅಭಿಮನ್ಯು ಯುದ್ಧಕ್ಕೆ ಹೊರಡುವ ಕ್ರಮ   ನೋಡಿ:

'ತುರಗ ತತಿಗಭಿನಮಿಸಿ,
ರಥವನ್ನು ತಿರುಗಿ ಬಲವಂದು, ಎರಗಿ,
ಚಾಪಕೆ ಕರವ  ನೊಸಲಲಿ ಚಾಚಿ,
ಭಾರಿಯ ಭುಜವ ಒದರಿಸುತ,
ಅರಸಗಭಿವಂದಿಸುತ
ಭೀಮನ ಹರಕೆಗಳ ಕೈಗೊಳುತ,
ನಕುಲಾದ್ಯರಿಗೆ ಪೊಡವಟ್ಟು
ಅಡರಿದನು ನವರತುನಮಯ ರಥವ'

'ರಥದ ಕುದುರೆಗಳಿಗೆ ನಮಿಸಿದ; ರಥಕ್ಕೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿದ; ಬಿಲ್ಲನ್ನು ಕೈಯಲ್ಲಿ ಹಿಡಿದು ಹಣೆಗೊತ್ತಿಕೊಂಡ; ಭುಜವನ್ನೊಮ್ಮೆ ಉತ್ಸಾಹದಿಂದ ಒದರಿದ; ಧರ್ಮರಾಯನಿಗೆ ನಮಿಸಿದ; ಭೀಮನ ಹಲವು ಹಾರೈಕೆ, ಹಿತನುಡಿಗಳನ್ನು ಪಡೆದ; ಚಿಕ್ಕಪ್ಪಂದಿರಾದ ನಕುಲ ಸಹದೇವರಿಗೆ ಸಹಾ ನಮಸ್ಕರಿಸಿ ನವರತ್ನಮಯವಾದ ರಥವನ್ನು ಏರಿದನಂತೆ!

ಯುದ್ಧಕ್ಕೆ ಹೊರಡುವ ಸುಸಂಸ್ಕೃತಿಯ ಒಂದು ಮುಖದ ಪರಿಚಯ ಮಾಡಿಸುತ್ತಾನೆ ಕವಿ!

ಕುಮಾರವ್ಯಾಸ ಪ್ರತಿಷ್ಠಾನ
೧೧/೯/೨೦೧೬

#

No comments:

Post a Comment