Friday, September 9, 2016

ಐಸಲೇ ಕುಮಾರವ್ಯಾಸ!! -೨೫-

ಕರ್ಣ ಪ ೨೬-೪೯

'ವಿದ್ಯಾ ಪರಿಣತರಲಂಕಾರ..'

ಕರ್ಣ ಪರ್ವ ಕುಮಾರವ್ಯಾಸ ಭಾರತದಲ್ಲಿಯೇ ಅತ್ಯಂತ ರಸವತ್ತಾದ ಭಾಗ ಎಂದು ವಿಧ್ವಾಂಸರ ಮತ.ಕವಿಯ ಪ್ರತಿಭೆಗೆ ಸಾಟಿಯಾದ ಪ್ರಸಂಗಗಳೂ ಹೇರಳವಾಗಿವೆ!

ಕರ್ಣನ ಸಾಹಸ, ಪರಾಕ್ರಮ ವಿಜಯಲಕ್ಷ್ಮಿ ಒಮ್ಮೆ ಅತ್ತ ಒಮ್ಮೆ ಇತ್ತ ತೊನೆದಾಡುವಂತೆ ಮಾಡುತ್ತದೆ. ಯುದ್ಧದ ವರದಿ ಕೇಳುತ್ತಿರುವ ಧೃತರಾಷ್ಟ್ರನಿಗೆ ಆತಂಕ. ತನ್ನ ಮಕ್ಕಳು ಗೆದ್ದರೆ? ಗೆಲುವಾಯಿತೆ? ಪ್ರಶ್ನಿಸುತ್ತಾನೆ.
ಈ ತೊನೆದಾಟದ ಬಗ್ಗೆ ನೀಡುವ ಸ್ಪಷ್ಟನೆಯಲ್ಲಿ ಕುಮಾರವ್ಯಾಸ ರೂಪಕದ ಸರಮಾಲೆಯನ್ನೇ ಹೆಣೆದಿದ್ದಾನೆ. ಅದರ ಸೊಗಸು ನೋಡಿ;

'ಅರಸ ಕೇಳಯ್,
ಜೂಜುಗಾರರ ಸಿರಿಯ ಸಡಗರ,
ಕಳಿವಗಲ ತಾವರೆಯ ನಗೆ,
ಸಜ್ಜನರ ಖಾತಿ, ನಿತಂಬಿನೀ ಸ್ನೇಹ
ಪರಮ ಯೋಗಿಯ ಲೀಲೆ
ಕೌರವರರಸನೊಡ್ಡಿನ ಜಯ
ಇದೀಸರ ಗರುಡಿಯೊಂದೇ ಶ್ರಮವ ಕೊಡುವುದು,
ಶಕ್ರ ಧನು ವೆಂದ'

'ಜನಮೇಜಯ ಕೇಳು, ಜೂಜುಕೊರರು ಜೂಜಿನಲ್ಲಿ ಹಣಬಂತೆಂದು ಹಿಗ್ಗಿ ಸಡಗರಿಸುವುದು, ಸಂಜೆಯ ಬಿಸಿಲಿಗೆ ತಾವರೆ ನಗುವಂತೆ ಕಾಣುವುದು, ಸಜ್ಜನರಿಗೆ ಬರುವ ಸಿಟ್ಟು, ವಿಲಾಸಿನೀ ಸ್ತ್ರೀಯೊಡನೆ ಇರುವ ಸ್ನೇಹ, ಪರಮ ಯೋಗಿಯಾದವನು ರಚಿಸುವ ಲೀಲೆ, ಕೌರವರ ಅರಸನ ವಿಜಯ; ಇದಿಷ್ಟರ ಅಂತಿಮ ಪರಿಣಾಮ ಒಂದೇ! ಏನೆಂದೆಯಾ? 'ಕಾಮನ ಬಿಲ್ಲಿನಂತೆ ಕ್ಷಣಭಂಗುರ!

ಮತ್ತೊಮ್ಮೆ ಎಲ್ಲಾ ಉದಾಹರಣೆಗಳನ್ನೂ ವಿಚಾರಮಾಡಿ ನೋಡಿ. ಕ್ಷಣಿಕವಾದದ್ದು ಎಂಬುದಕ್ಕೆ ಎಷ್ಟು ಸಮರ್ಥವಾದ ವಿಷಯಗಳನ್ನು ಕಲೆ ಹಾಕಿದ್ದಾನೆ ಕವಿ! ಈ ಎಲ್ಲಾ ಕಸರತ್ತುಗಳ(ಗರುಡಿ!) ಶ್ರಮವೂ ಒಂದೇ ಅಂತೆ! , ಎಲ್ಲಾ ಹೋಲಿಕೆಗಳ ಫಲವನ್ನು ಹೇಳುವಾಗ ಅದಕ್ಕೆ ಕಾಮನಬಿಲ್ಲಿನ ಮತ್ತೊಂದು ಹೋಲಿಕೆ! ಅಪರೂಪದ ಕವಿತ್ವ ಇದು.


ಕುಮಾರವ್ಯಾಸ ಪ್ರತಿಷ್ಠಾನ

೮/೯/೨೦೧೬
#






No comments:

Post a Comment