Wednesday, September 14, 2016

ಐಸಲೇ ಕುಮಾರವ್ಯಾಸ!! -೨೯-

'ವಿದ್ಯಾ ಪರಿಣತರಲಂಕಾರ..,'

ದ್ರೋಣ ಪ ೫-೫೮

ಪಾಂಡವರ ಅನುಮತಿ ಸಿಕ್ಕೊಡನೆಯೇ ಅಭಿಮನ್ಯುವಿನ ರಥ ಪಾಳಯದಿಂದ ಯುದ್ಧರಂಗಕ್ಕೆ ಚಿಮ್ಮಿತು!

ರಥದ ರಭಸ ಹೇಗಿತ್ತೆಂದರೆ ಒಂದು ಇಡೀ ಪದ್ಯದಲ್ಲಿ ಅದು ಎಬ್ಬಿಸಿದ ಧೂಳನ್ನು ಕವಿ ವರ್ಣಿಸುತ್ತಾನೆ. ಅದೂ ವಿಶಿಷ್ಟ ರೀತಿಯಲ್ಲಿ!

' ಸುರನದಿಗೆ ಶಿವನಾಯ್ತು,
ಮಕರಾಕರಕೆ ಕಳಶಜನಾಯ್ತು,
ತರಣಿಗೆ ಅರಿ ವಿಧುಂತುದನಾಯ್ತು
ರಥಪದ ತಳಿತ ಧೂಳಿಯಲಿ,
ಅರರೆ!
ಸತ್ವ ರಜಸ್ ತಮಂಗಳೋಳ್
ಎರಡು ಗುಣವಡಗಿದವು
ರಜೋಗುಣದುರುಳೆಯಾದುದು ಲೋಕ ಎನೆ
ಘಾಡಿಸಿತು ಪದಧೂಳಿ'

ಸಾಮಾನ್ಯ ವಿಚಾರವನ್ನೂ ಚಮತ್ಕಾರಿಕವಾಗಿ ಹೇಳಬಲ್ಲ ಕುಮಾರವ್ಯಾಸ ಇಂಥ ಅದ್ಭುತ ರಭಸವನ್ನು ಬಿಟ್ಟಾನೆಯೇ? ತುಸು ಉತ್ಪ್ರೇಕ್ಷೆ ಎನಿಸಿದರೂ ಮನೋಹರವಾಗಿರುವ ಈ ಹೋಲಿಕೆಯನ್ನು ಅರ್ಥೈಸಿಕೊಳ್ಳೋಣ!

'ರಥದ ರಭಸಕ್ಕೆ ಎದ್ದ ಧೂಳು ಸುರನದಿಯಾದ ಗಂಗೆಯನ್ನು ಮುಚ್ಚಿಹಾಕಿ ಶಿವನಂತೆ ರಾರಾಜಿಸಿತು!( ಶಿವ ಗಂಗೆಯನ್ನು ಜಟೆಯಲ್ಲಿ ಬಂಧಿಸಲಿಲ್ಲವೇ?); ಮಕರಾಕರವಾದ ಸಮುದ್ರವನ್ನು  ಅಗಸ್ತ್ಯ ಋಷಿಯಂತೆ ಆಪೋಶನ ತೆಗೆದು ಕೊಂಡಿತು! (ಮುಚ್ಚಿ ಹಾಕಿತು) ; ಸೂರ್ಯನಿಗೆ ರಾಹುವಾಯಿತು !( ಸೂರ್ಯನನ್ನು ಸಹಾ ಕಾಣದಂತೆ ನುಂಗಿ ಹಾಕಿತು);
ಅರರೆ! ( ಕುಮಾರವ್ಯಾಸನ ಉದ್ಗಾರ!) ಸತ್ವ, ರಜಸ್ಸು,ತಮಸ್ಸು ಎಂಬ ಮೂರು ಗುಣಗಳು ಲೋಕದಲ್ಲಿವೆ ಎಂದು ತಿಳಿದಿದ್ದೇವೆ ತಾನೇ? ಆದರಿಲ್ಲಿ ಸತ್ವ,ತಮ ಮರೆಯಾಗಿ ಕೇವಲ ರಜೋಗುಣವೊಂದರಿಂದಲೇ ಲೋಕವೆಲ್ಲಾ ತುಂಬಿ ಹೋಗಿದೆ ಏನಾಶ್ಚರ್ಯ!'

'ರಜ' ಶಬ್ದ ರಜೋಗುಣ ಮತ್ತು ಧೂಳು ಎರಡು ಅರ್ಥದಲ್ಲೂ ಬಳಕೆಯಾಗುತ್ತದೆ. ಇಲ್ಲಿ ತುಂಬಿರುವುದು ಧೂಳು. ಈ ಎರಡೂ ಅರ್ಥ ಸಾಧ್ಯತೆಯನ್ನು  ಚಮತ್ಕಾರಿಕವಾಗಿ ಬಳಸಿ ,ಲೋಕವೆಲ್ಲಾ ರಜೋಗುಣಮಯವಾಯ್ತು ಎಂದು ನುಡಿಯುತ್ತಾನೆ ಕವಿ!

ಪದ್ಯದ ಮೊದಲರ್ಧ ಒಂದು ರೀತಿಯ ಸೊಗಸು; ಉತ್ತರಾರ್ಧ ಮತ್ತೊಂದು ಸೊಗಸು!

ಕುಮಾರವ್ಯಾಸ ಪ್ರತಿಷ್ಠಾನ

೧೩/೯/೨೦೧೬
#





No comments:

Post a Comment