Monday, September 12, 2016

ಐಸಲೇ ಕುಮಾರವ್ಯಾಸ!! - ೨೮-

'ಅರಸುಗಳಿಗಿದು ವೀರ..,'

ದ್ರೋಣಪ ೫-೫೬

ಅಭಿಮನ್ಯುವಿನ ಸಾರಥಿಗೆ ಒಂದು ಸಣ್ಣ ಸಂದೇಹ!

'ಕುಮಾರ, ಕೊರಳಿನ ಶಕ್ತಿಯನ್ನು ತಿಳಿಯದೆ ಬೆಟ್ಟವನ್ನು ಹೊರಲು ಮುಂದಾಗಬಹುದೇ? ಕರ್ಣ, ಕೃಪ, ದ್ರೋಣ ,ಜಯದ್ರಥ ಇವರೆಲ್ಲ ಹರಕುಮಾರನಾದ ಷಣ್ಮುಖನನ್ನೂ ಮೀರಿಸುವಂಥವರು; ನೀನು ಗೆಲ್ಲುವುದು ಸಾಧ್ಯವೇ?' ಎಂದ.

ಅಭಿಮನ್ಯುವಿನ ಅತ್ಮವಿಶ್ವಾಸಭರಿತ ಉತ್ತರ ಈ ಅದ್ಭುತ ಸಾಲುಗಳಲ್ಲಿ;

'ಬವರವಾದರೆ ಹರನ ವದನಕೆ ಬೆವರ ತಹೆನು,
ಅವಗಡಿಸಿದರೆ ವಾಸವನ ಸದೆವೆನು,
ಹೊಕ್ಕಡೆ ಅಹುದೆನಿಸುವೇನು ಭಾರ್ಗವನ,
ಜವನ ಜವಗೆಡಿಸುವೆನು,
ಸಾಕಿನ್ನು  ಅವರಿವರಲೇನು?
ಅರ್ಜುನನು ಮಾಧವನು ಮುನಿದಡೆ ಗೆಲುವೆನು
ಅಂಜದೆ ರಥವ ಹರಿಸೆಂದ'

ನಮ್ಮನ್ನು ನಾವೇ ಹೊಗಳಿಕೊಳ್ಳಬಾರದು ಎಂದು ಪ್ರಾರಂಭಿಸಿದ ಅಭಿಮನ್ಯು,ಯುದ್ಧ ವಿದ್ಯೆಯಲ್ಲಿ ಅಪ್ರತಿಮರೆನಿಸಿದವರ ಜತೆ ತನ್ನನ್ನು ಹೋಲಿಸಿಕೊಳ್ಳುತ್ತಾನೆ!
' ಪರಶಿವನ ಜತೆ ಯುದ್ಧ ಮಾಡಬೇಕಾಗಿ ಬಂದರೆ ಅವನ ಮುಖದಲ್ಲಿ ಬೆವರ ತರಿಸುತ್ತೇನೆ; ಇಂದ್ರ (ತನ್ನ ತಾತ!) ನನ್ನು ಸದೆಯಬಲ್ಲೆ; ಪರಶುರಾಮ ಎದುರಿಸಿ ನಿಂತರೆ ಅವನೂ ಹೌದು ಎನ್ನಬೇಕು; ಹಾಗೆ ಕಾದುತ್ತೇನೆ; ಮೃತ್ಯು ದೇವತೆಯಾದ ಯಮ? ಅವನು ದಿಕ್ಕು ತಪ್ಪುವಂತೆ ಮಾಡುತ್ತೇನೆ; ಅವರಿವರ ಮಾತು ಬಿಡು; ಸಾಕ್ಷಾತ್ ಮಾವನಾದ ಕೃಷ್ಣನಾಗಲಿ, ಅಥವಾ ತಂದೆಯಾದ ಅರ್ಜುನನೇ ಮುನಿದು ಎದುರಾದರೆ ಗೆಲ್ಲುವ ಸಾಮರ್ಥ್ಯಇದೆ; ನೀನು ಹೆದರದೆ ರಥವನ್ನು ನಡೆಸು'

ಎಂಥ ಆತ್ಮ ವಿಶ್ವಾಸ! ಎಚ್ಚರಿಕೆಯ ಆತ್ಮವಿಶ್ವಾಸ!

ಅವನು ಉದಾಹರಿಸಿದ ಒಬ್ಬೊಬ್ಬರೂ ಯುದ್ಧದಲ್ಲಿ , ಪರಾಕ್ರಮದಲ್ಲಿ ಮುಕುಟಪ್ರಾಯರಾದವರು. ಹರ ಯುದ್ಧಭಯಂಕರ! ಅವನನ್ನು ಗೆಲ್ಲುವ ಮಾತಾಡುವುದಿಲ್ಲ; ಬೆವರು ತರಿಸುತ್ತೇನೆ ಎನ್ನುತ್ತಾನೆ! ಇಂದ್ರ ಯಮರನ್ನು ಗೆಲ್ಲಬಲ್ಲೆ ಎನ್ನುತ್ತಾನೆ.ಪರಶುರಾಮನೋ? ಅವನ ಕೈಲಿ ಭೇಷ್ ಅನ್ನಿಸಿಕೊಳ್ಳಬಲ್ಲೆ. ಮತ್ತೂ ಧೈರ್ಯದ  ಮಾತೆಂದರೆ, ಅರ್ಜುನ ಮಾಧವರೂ ಯುದ್ಧದಲ್ಲಿ ನನ್ನನ್ನು ಗೆಲ್ಲಲಾರರು!

ಇದು ಬರೀ ಸ್ವ-ಪ್ರಶಂಸೆಯ ಮಾತಾಗಿ ಉಳಿಯದೆ ನಿಜವಾಗುವುದನ್ನು ಮುಂದೆ ಕಾಣುತ್ತೇವೆ.

'ಕುಮಾರ ವ್ಯಾಸನು ಹಾಡಿದನೆಂದರೆ ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು' ಎಂದು ಕುವೆಂಪು ಹೇಳಿರುವುದು ಇಂಥಾ ಮಾತುಗಾರಿಕೆಯನ್ನು ನೋಡಿಯೇ!

ಕುಮಾರವ್ಯಾಸ ಪ್ರತಿಷ್ಠಾನ

೧೨/೯/೨೦೧೬

#


No comments:

Post a Comment