Friday, September 9, 2016

ಐಸಲೇ ಕುಮಾರವ್ಯಾಸ!! ೨೬-೪೯-

ದ್ರೋಣ ಪ ೪-೩೭

'ವಿದ್ಯಾ ಪರಿಣತರಅಲಂಕಾರ..,'

ದಳಪತಿ ದ್ರೋಣರು ಪದ್ಮವ್ಯೂಹ ರಚಿಸಿ ನಿಲ್ಲಿಸಿದ್ದಾರೆ. ಮತ್ತೊಂದು ತಂತ್ರದ ಮೇರೆಗೆ ಅರ್ಜುನನನ್ನು ಸಮಸಪ್ತಕರು ಯುದ್ಧಕ್ಕೆ ಕರೆದು ದೂರ ಒಯ್ದಿದ್ದಾರೆ. ವ್ಯೂಹವನ್ನು ಭೇದಿಸುವವರಾರು?
ಧರ್ಮರಾಯ ಚಿಂತಿಸುವಾಗ ಅಭಿಮನ್ಯು ಮುಂಗೈ ಕಡಗವನ್ನು ತಿರುಗಿಸುತ್ತಾ' ದೊಡ್ಡಪ್ಪ, ತಾ ಬಲ್ಲೆ ಪದ್ಮವ್ಯೂಹ ಭೇದನವ, ಅನುವರವ (ಯುದ್ಧ) ಗೆಲುವೆನು ತನ್ನನ್ನು ಕಳಿಸು" ಎಂದು ಬೇಡುತ್ತಾನೆ.

ಪದ್ಮವ್ಯೂಹದ ಸಂಕೀರ್ಣತೆ, ಜಟಿಲತೆ ಎಂಥದು? ಧರ್ಮರಾಯನ ಮಾತಲ್ಲಿ ಕೇಳಿ;

'ಸುಳಿಯಬಹುದು ಅಂಬುಧಿಯ ನಡುವಣ ಸುಳಿಯೊಳಗೆ,
ಸಂವರ್ತಕನ ಕೊರಳೊಳು ಕುಣಿಯಲುಬಹುದು,
ಮೃತ್ಯುವಿನ ಅಣಲ ಹೊಳಲೊಳಗೆ ಹೊಳಕಬಹುದು,
ಅಹಿಪನ ಫಣಾಮಂಡಳದೊಳಗಾಡಲು ಬಹುದು
ಕಾಣೆನು ಗೆಲುವ ಹದನನು, ಮಗನೇ,
ಪದ್ಮವ್ಯೂಹದ ಒಡ್ಡಣದ'

'ಮಗನೇ,(ಅಭಿಮನ್ಯುವನ್ನು 'ಮಗನೇ' ಎಂದು ಧರ್ಮರಾಯ ಸಂಬೋಧಿಸುವುದು ಎಷ್ಟು ಆತ್ಮೀಯವಾಗಿದೆ!) ಸಮುದ್ರದ ಮಧ್ಯೆಇರುವ ಮಹಾ  ಸುಳಿಯೊಳಗೆ ಬೇಕಾದರೂ ಹೋಗಿ ಬರಬಹುದು; ಪ್ರಳಯಕಾಲದ ಅಗ್ನಿಯ ( ಸಂವರ್ತಕ) ಕೊರಳಲ್ಲಿ ಕುಣಿಯುವ ಪ್ರಯತ್ನ ಮಾಡಬಹುದು; ಮೃತ್ಯುವಿನ ಬಾಯಿಯ ಅಂಗುಳಲ್ಲಿ ನುಸಿದು ಬರಬಹುದು; ಆದಿ ಶೇಷನ ಹೆಡೆಯ ಮೇಲೆ ಆಡಲೂ ಬಹುದು; ಆದರೆ ಈ ಪದ್ಮವ್ಯೂಹವನ್ನು ಗೆಲ್ಲುವ ಸಾದ್ಯತೆ ನಾನು ಕಾಣೆ'

ಪದ್ಮವ್ಯೂಹದ ಭಯಂಕರತೆಗೆ ಇದಕ್ಕಿಂತಾ ಮಿಗಿಲಾದ ಹೋಲಿಕೆ, ವಿವರಣೆ ಸಾಧ್ಯವೇ?
(ಬಳಸಿರುವ ಕನ್ನಡ ಪದಗಳನ್ನು ಸಹಾ ಗಮನಿಸಿ)



ಕುಮಾರವ್ಯಾಸ ಪ್ರತಿಷ್ಠಾನ

೯/೯/೨೦೧೬
#



No comments:

Post a Comment