Sunday, September 18, 2016

ಐಸಲೇ ಕುಮಾರವ್ಯಾಸ!! -೩೧-

ದ್ರೋಣ ಪ ೬-೨೫

'ಅರಸುಗಳಿಗಿದು ವೀರ..,'

ಅಭಿಮನ್ಯುವಿನ ಪರಾಕ್ರಮ ಹೆಚ್ಚುತ್ತಾ ಹೋಗುತ್ತದೆ!

ಮಹಾರಥರನ್ನು ಮೂದಲಿಸಿ ಕೆರಳಿಸುತ್ತಾನೆ. ಕೆರಳಿದವರು ಮೇಲೇರಿ ಬಂದರೆ ಮೈಮರೆಯುವಂತೆ ಘಾತಿಸುತ್ತಾನೆ!

ಅಷ್ಟೇ ಅಲ್ಲ,ಅನೇಕ ವೀರರು, ಅಣ್ಣನನ್ನು ಕಾಪಾಡಬಂದ ಶಲ್ಯನ ತಮ್ಮ,ಶಲ್ಯನ ಮಗ, ಕರ್ಣನ ಮಗ, ಲಕ್ಷಣಕುಮಾರನಾದಿಯಾಗಿ ದುರ್ಯೋಧನನ ನೂರು ಮಕ್ಕಳು,ಅಭಿಮನ್ಯುವಿನ ಬಾಣಗಳಿಗೆ ಆಹುತಿಯಾಗುತ್ತಾರೆ!

ದ್ರೋಣ,ಕರ್ಣರಾದಿಯಾಗಿ ಮಹಾರಥರು ಒಟ್ಟಾಗಿ ಅಭಿಮನ್ಯುವಿನ ಮೇಲೆ ಬಿದ್ದರೂ ಘಾಸಿಗೊಂಡು ಸರಿಯಬೇಕಾಗುತ್ತದೆ.
ಆದರೆ ಮತ್ತೊಂದು ಬದಿಯಲ್ಲಿ ಕುಮಾರನ ಪರಾಕ್ರಮವನ್ನು ಹೊಗಳುತ್ತಾ ತನ್ನ ಕಡೆಯ ವೀರರನ್ನು ಅಣಕಿಸುತ್ತಾ ಸ್ವತಃ ದುರ್ಯೋಧನನೇ ನಿಂತಿದ್ದಾನೆ!

ಮಹಾರಥರ ಉಭಯ ಸಂಕಟವನ್ನು, ಅವರ ಗೊಣಗಾಟವನ್ನು ಕುಮಾರವ್ಯಾಸ ತಿಳಿ ಹಾಸ್ಯದೊಂದಿಗೆ ಸಮರ್ಥವಾಗಿ ಹಿಡಿದಿಟ್ಟಿದ್ದಾನೆ ಈ ಪದ್ಯದಲ್ಲಿ;

'ಇದಿರೊಳೀಶನ ಭಾಳ ನಯನದ ಕದವು ತೆಗೆದಿದೆ,
ಹಿಂದೆ ಮರಳುವೊಡಿದೆ ಕೃತಾಂತನ ಕೊಂತ,
ಅರಸನ ಮೂದಲೆಯ ವಚನ
ಅದಟು ಕೊಳ್ಳದು,
ರಾಜಸೇವೆಯ ಪದವಿ ಪಾತಕ ಫಲವೆನುತ
ನೂಕಿದರು ರಥವನು ಹಳಿವು ದರ್ಪದ ಹೇವ ಮಾರಿಗಳು'

'ಅಯ್ಯೋ! ಎದುರಿಗೆ ಮಹಾರುದ್ರನ  ಹಣೆಯ ಕಣ್ಣಿನ ಬಾಗಿಲು ತೆರೆದಿದೆ( ಅಭಿಮನ್ಯುವಿನ ಬಾಣಗಳ ಆಘಾತ!), ಹಿಂದಕ್ಕೆ ತೊಲಗಿ ರಣಾಂಗಣದಿಂದ ಓಡಿ ಜೀವ ಉಳಿಸಿಕೊಳ್ಳೋಣ ಎಂದರೆಸ್ವತಃ ಯಮನೇ ದಂಡ ಹಿಡಿದು ನಿಂತ ಹಾಗೆ ದುರ್ಯೋಧನ ನಿಂತು ಮೂದಲಿಸುತ್ತಿದ್ದಾನೆ!
ಹೋರಾಡಲು ಶಕ್ತಿ ಸಾಲುತ್ತಿಲ್ಲ; ಛೀ.., ರಾಜರ ಸೇವೆ ಮಾಡುವ ಕರ್ಮ  ಪೂರ್ವ ಜನ್ಮದ ಯಾವುದೋ ಪಾಪದ ಫಲ; ಎಂದು ಶಪಿಸುತ್ತಾ ವಿಧಿಯಿಲ್ಲದೇ ರಥಗಳನ್ನು ಅಭಿಮನ್ಯುವಿಗೆ ಎದುರಾಗಿ ನೂಕಿದರು. ಯಾರು? ಅಪಕೀರ್ತಿ,ದರ್ಪ, ನಾಚಿಕೆ ಇವುಗಳನ್ನು ಅರಸನಿಗೆ ಮಾರಿಕೊಂಡ ಮಹಾರಥರು!'

ಒಂದೊಂದು ಭಾವಕ್ಕೂ ಕವಿ ಬಳಸುವ ಕನ್ನಡ ಶಬ್ದಗಳನ್ನು  ಗಮನಿಸಿ, ನಮ್ಮ ಭಾಷೆ ಎಷ್ಟು ಸಮರ್ಥವಾದದ್ದು ಅನ್ನುವುದು ಗೊತ್ತಾಗುತ್ತದೆ.
ಇಂಥಾ ಸಾಹಿತ್ಯದಿಂದ ತಾನೇ ಭಾಷೆಗೂ ಶ್ರೇಷ್ಠತೆ?

ಕುಮಾರವ್ಯಾಸ ಪ್ರತಿಷ್ಠಾನ
೧೬/೦೯/೨೦೧೬
#







No comments:

Post a Comment