Tuesday, September 6, 2016

ಐಸಲೇ ಕುಮಾರವ್ಯಾಸ!! -೨೪-

ಉದ್ಯೋ ಪ ೬-೧೭

'ವಿದ್ಯಾ ಪರಿಣತರಅಲಂಕಾರ'

ವನವಾಸ ,ಅಜ್ಞಾತ ವಾಸ ಮುಗಿಸಿ ಬಂದ ಪಾಂಡವರ ಪರವಾಗಿ ಸಂಧಿಗೆ ಹೊರಡುವ ಮುನ್ನ ಶ್ರೀಕೃಷ್ಣ ಎಲ್ಲರ ಅಭಿಪ್ರಾಯ ಕೇಳುತ್ತಾನೆ. ಸಂಧಿಯೋ? ಅಥವಾ ಯುಧ್ಧವೋ?

ಧರ್ಮರಾಯ ' ಸೋದರರಲ್ಲಿ ಕಲಹವೇ? ಸಂಧಿಯನ್ನು ನಿರ್ಣಯಿಸು ಪರಮಾತ್ಮಾ' ಎಂದ.ಭೀಮನೂ ದನಿಗೂಡಿಸಿದ. ಅರ್ಜುನ? ಅವನೂ ಸಂಧಿಯ ಪರವೇ! ಸಹದೇವನೊಬ್ಬ( ದಿವ್ಯ ಜ್ಞಾನಿ) ಸಂಧಿ ಬೇಡ ಯುದ್ಧವೇ ಸರಿ ಎನ್ನುತ್ತಾನೆ.. ಉಳಿದವರೆಲ್ಲರೂ ಸಂಧಿಯನ್ನೇ ಬಯಸುತ್ತಿದ್ದಾರೆ! ಶ್ರೀಕೃಷ್ಣನಿಗೆ ನಂಬಲಾಗುತ್ತಿಲ್ಲ.! ಹಾಗಾದಲ್ಲಿ ನನ್ನ ಭೂಭಾರ ನೀಗಿಸುವ ಕಾರ್ಯದ ಗತಿ?
ಭೀಮನನ್ನು ತುಸು ಕೆಣಕಿದ.ಇದೇನಿದು! ಕೊಳುಗುಳಕೆ ಪವಮಾನ ನಂದನನಳುಕಿದನು ! ಕುಂತೀಲಲನೆ ಹೆತ್ತಳು ಸುತರ ( ಭೀಮ ಸಹಾ ಯುದ್ಧಕ್ಕೆ ಅಳುಕಿದ! ಕುಂತಿ ಎಂತಹಾ ಮಕ್ಕಳನ್ನು ಹೆತ್ತಳಪ್ಪಾ, ಆಶ್ಚರ್ಯ! )ಎಂದ. ಉಪಯೋಗವಾಗಲಿಲ್ಲ.

ಶ್ರೀಕೃಷ್ಣ ಬಿಟ್ಟಾನೆಯೇ? ದೂತರಿಗೆ ಹೇಳಿದ. 'ಹೋಗಿ ದ್ರೌಪದಿಯ ಅಭಿಪ್ರಾಯ ತಿಳಿದು ಬನ್ನಿ.'

ದೂತರು ಬಂದು ಎಲ್ಲರೂ ಸಂಧಿಯನ್ನೇ ಬಯಸುತ್ತಿರುವುದನ್ನು  ದೌಪದಿಗೆ ವಿವರಿಸಿದರು. 'ನಿನ್ನ ಅಭಿಮತವನ್ನು ಶ್ರೀಹರಿಗೆ ತಿಳಿಸಬೇಕಂತೆ'ಎಂದರು.
ಸುದ್ದಿ ತಿಳಿದ ಕೂಡಲೇ ದ್ರೌಪದಿ ಗುಡುಗಿದಳು. 'ಪತಿಗಳಿಗೆ ಸಂದಿಯೇ ಪ್ರಿಯವಂತೋ?' ಪಾಪಿಗಳು ಇರಿದರೋ ಸತಿಯ' ಎಂದು ರಭಸ ದಿಂದ ಕೃಷ್ಣನ ಓಲಗಕ್ಕೆ ಬಂದಳು. ಅವಳ ಬರುವಿಕೆ ಹೇಗಿತ್ತು? ಕುಮಾರವ್ಯಾಸಹೇಳುತ್ತಾನೆ ಕೇಳಿ:

'ಭ್ರೂಲತೆಯಸುರಚಾಪದ,
ಉರು ಕೇಶಾಳಿಗಳ ಕಾರ್ಮುಗಿಲ,
ಅಪಾಂಗದ ಸಾಲ ಕುಡಿಮಿಂಚುಗಳ
ನೂಪುರ ರವದ ಮೊಳಗುಗಳ
ಆ ಲತಾಂಗಿಯ ಗಮನವೇ ಮಳೆಗಾಲದಂತಿರೆ
ದಾರ್ತರಾಷ್ಟ್ರ ಕುಲಾಳಿ ನಿಲುವುದೇ?
ಪವನಜನ ಸಂಪ್ರತಿಯ ಸೇರುವೆಗೆ'

ದ್ರೌಪದಿಯ ಆಗಮನವನ್ನು ಮಳೆಗಾಲ ಬಂದಂತೆ ಬಂದಳು ಎನ್ನುತ್ತಾನೆ ಕವಿ! ಇದೆಂಥ ಮಳೆಗಾಲ ಎಂದಿರಾ?
'ಅವಳ ಗಂಟಿಕ್ಕಿದ ಸುಂದರ ಹುಬ್ಬುಗಳೇ ಕಾಮನಬಿಲ್ಲು; ಹಾರಾಡುವ ಕೂದಲ ರಾಶಿಯೇ ಕಾರ್ಮೋಡಗಳು; ಕಣ್ಣೋಟವೇ ಕುಡಿಮಿಂಚಿನಂತೆ! ಕಾಲ್ಗೆಜ್ಜೆಯ ದನಿ ಗುಡುಗಿನ ಘರ್ಜನೆ; ಇದೆಲ್ಲದರ ಜತೆ ಮಳೆಗಾಲ ಬಂದಂತೆ ಬಂದಳು. ಈ ಮಳೆಗಾಲದ ಜತೆ ವಾಯುಪುತ್ರನಾದ ಭೀಮ ಸಹಾ ಸೇರಿದರೆ? ದಾರ್ತರಾಷ್ಟ್ರಕುಲ ಉಳಿದೀತೇ?'

ದಾರ್ತರಾಷ್ಟ್ರ ಶಬ್ದಕ್ಕೆ ಎರಡು ಅರ್ಥ. ಒಂದು ಧೃತರಾಷ್ಟ್ರನ ಮಕ್ಕಳಾದ ಕೌರವರು! ಮತ್ತೊಂದು ಹಂಸಗಳು.

ಮಳೆಗಾಲದ ತೀವ್ರತೆ ಹೆಚ್ಚಾದಾಗ ಹಂಸಗಳು ಹೆದರಿ ಮಾನಸ ಸರೋವರಕ್ಕೆ ಹಾರಿ ಹೋಗುತ್ತವಂತೆ! ದ್ರೌಪದಿಯ ಬರವು ಮಳೆಗಾಲವಾದರೆ ಎಲ್ಲಿ ದಾರ್ತರಾಷ್ಟ್ರಗಳಿಗೆ ಉಳಿಗಾಲ?

ಎರಡೂ ಅರ್ಥಗಳನ್ನು ಯಶಸ್ವಿಯಾಗಿ ಬಳಸಿದ ಒಂದು ಅಪೂರ್ವ ಕವಿತ್ವ ಇದು.

ತನ್ನ ಕಾವ್ಯವನ್ನು' ವಿದ್ಯಾ ಪರಿಣತರ ಅಲಂಕಾರ' ಎಂದು ಕರೆದುಕೊಂಡಿದ್ದಾನೆ ಕವಿ. ಪರಿಣತರು 'ಭಲೇ' ಎನ್ನಲೇಬೇಕಾದ ಇಂಥ ರೂಪಕ ಮಾಲೆಗಳು ಕೃತಿಯಲ್ಲಿ ಹೇರಳವಾಗಿವೆ.

ಕುಮಾರವ್ಯಾಸ ಪ್ರತಿಷ್ಠಾನ

೫/೯/೨೦೧೬

#

No comments:

Post a Comment