Thursday, September 29, 2016

ಐಸಲೇ ಕುಮಾರವ್ಯಾಸ!!

ವಿರಾಟ ಪ ೪-೧೪

'ಹೋರಿ ಕಳೆವುದು ದುರಿತ ರಾಶಿಯ..,'

ಮಹಾಭಾರತದ ಪಠಣ,ಶ್ರವಣ ಇವು ಪಾಪ ರಾಶಿಯನ್ನು ಹೋರಾಡಿ ಕಳೆಯುತ್ತವೆ ಎಂದಿದ್ದಾನೆ ಕವಿ. ಅದಿರಲಿ.

ಮಳೆ ಇಲ್ಲದ ದಿನಗಳಲ್ಲಿ ನಮ್ಮ ನಾಡಿನಲ್ಲಿ ವಿರಾಟ ಪರ್ವವನ್ನು ಓದಿಸಿ ಕೇಳುವ ಪದ್ಧತಿಯಿತ್ತು.ಉತ್ತರ ಭಾರತದಲ್ಲಿ ತುಳಸಿ ರಾಮಾಯಣದ ಸುಂದರಕಾಂಡದ ಪರಾಯಣ ಪದ್ಧತಿ ಕಷ್ಟದ ದಿನಗಳಲ್ಲಿ ಈಗಲೂ ಇದೆ. ಅದು ನಂಬುಗೆಯ ವಿಷಯ.

ವಿರಾಟ ಪರ್ವಕ್ಕೂ ಮಳೆ ಬರುವುದಕ್ಕೂ ಸಂಬಂಧ ಏನು? ಯಾಕೆ ವಿರಾಟ ಪರ್ವಕ್ಕೆ ಮಾತ್ರ ಈ ಮಹತ್ವ? ಎಲ್ಲೂ ಕಾರಣ ಸಿಗುವುದಿಲ್ಲ. ಆದರೆ ಕುಮಾರವ್ಯಾಸನಲ್ಲಿ ಪರೋಕ್ಷವಾಗಿ ಇದರ ಸುಳುಹನ್ನು ಕಾಣುತ್ತೇವೆ.

ಗಂಧರ್ವರಿಂದ ಕೀಚಕ ವಧೆಯ ಸುದ್ದಿಯನ್ನು ಕೇಳಿದ ದುರ್ಯೋಧನ ಚಕಿತನಾಗಿ ನಿರ್ಣಯಿಸಿದ;.'ಅವಳು ದುರುಪದಿ ಖಳನ ಕೊಂದವ ಭೀಮ ಗಂದರ್ವ!'

ಕೂಡಲೇ ಎಲ್ಲ ಹಿರಿಕಿರಿಯರ ಸಭೆ ಕರೆದ. ಅವಧಿ ಮುಗಿಯುವ ಮೊದಲು ಪಾಂಡವರನ್ನು ಪತ್ತೆ ಮಾಡಿ ಪುನಃ ಅರಣ್ಯಕ್ಕೆ ಅಟ್ಟುವ ಹುನ್ನಾರ! ಭೀಷ್ಮ, ದ್ರೋಣ, ಕರ್ಣ ಎಲ್ಲರೂ ಬಂದರು.ಅವರೆದುರು ತನ್ನ ವಾದ ಮಂಡಿಸಿದ.ಕೀಚಕನನ್ನು ಕೊಲ್ಲುವ ಸಾಮರ್ಥ್ಯ ಸಮಬಲರಾದ ಭೀಮ,ಶಲ್ಯ ಬಲರಾಮರಿಗೆ ಮಾತ್ರ! ಅಂದಮೇಲೆ ಇದು ವಿರಾಟನಗರದಲ್ಲಿ ಅಡಗಿರುವ ಭೀಮನೇ ಸರಿ!

ಭೀಷ್ಮ, ದ್ರೋಣ, ಕರ್ಣ ಇವರೂ ದುರ್ಯೋಧನನ ವಾದವನ್ನು ಒಪ್ಪಿದರು.ಯಾವ ಆಧಾರದಿಂದ? ಭೀಷ್ಮರು ಹೇಳುತ್ತಾರೆ 'ಮಾತು ಹೋಲುವೆಯಹುದು' (ಹೋಲಿಕೆ ಸರಿಯಾಗಿದೆ).ಯಾಕೆಂದರೆ ಧರ್ಮರಾಯನಿದ್ದ ನಾಡಿನಲ್ಲಿ ಬರಕ್ಕೆ ಆಸ್ಪದವಿಲ್ಲ, ಬೆಳೆಗಳು ಹುಲುಸಾಗುತ್ತವೆ.ಒಣಗಿದ ಕಾಡು, ಸುಳ್ಳು,ಕೊಲೆ ಪಾತಕಾದಿಗಳು ಇರುವುದಿಲ್ಲ.ಸೊಂಪಿನ ನಾಡು,ಲಕ್ಷ್ಮಿಯ ಬೀಡು ಪಾಂಡವರಿದ್ದ ನೆಲೆ.

ದ್ರೋಣರ ಅಭಿಪ್ರಾಯ ಕೇಳಿ:

'ಅತ್ತ ಹಿಮಗಿರಿ ಮೇಲೆ,
ಭಾವಿಸಲಿತ್ತ ಮೂರು ಸಮುದ್ರ
ಗಡಿಯಿಂದಿತ್ತ ನಾನಾ ದೇಶವೆಂಬಿವು
ಬರದ ಬೇಗೆಯಲಿ ಹೊತ್ತಿ ಹೊಗೆದವು
ಮಧ್ಯ ದೇಶದಲುತ್ತಮದ ಸಿರಿ,ಫಲದ ಬೆಳಸುಗಳ ಒತ್ತೆ,
ಇದು ಪಾಂಡವರ ಚಾವಡಿ ಎಂದನಾ ದ್ರೋಣ'

ಮೇಲೆ ಹಿಮಾಲಯ;ಮೂರೂದಿಕ್ಕಿನಲ್ಲಿ ಸಮುದ್ರ. ಈ ನಡುವಿನ ಎಲ್ಲಾ ದೇಶಗಳು ಬರದ ಬೇಗೆಯಲ್ಲಿರುವಾಗ ಮಧ್ಯ ದೇಶದಲ್ಲಿ(ವಿರಾಟ ರಾಜ್ಯ) ಒಳ್ಳೆಯ ಮಳೆ, ಬೆಲೆ ಸಿರಿ ಸಂಪದ! ಇದು ಪಾಂಡವರ ಚಾವಡಿಯೇ ಸರಿ. ಅನುಮಾನವಿಲ್ಲ.

ಕರ್ಣನೂ ಹೇಳಿದ;' ಅಲ್ಲಿ ಪಾಂಡದವರಿಹರು ಸಂಶಯವಿಲ್ಲ; ದೇಶದ ಸೊಂಪು ಸಿರಿ ಮತ್ತೆಲ್ಲೂ ಹಿರಿದಿಲ್ಲ; ನಿಶ್ಚಯ'

ಪಾಂಡವರ ಧರ್ಮನಿಷ್ಠೆ, ಅದರಿಂದ ಮಳೆ,ಬೆಳೆ' ಹುಲುಸಾದ ಫಸಲು ,ಶತ್ರುಗಳಿಂದಲೂ ಪ್ರಶಂಸೆಗೆ ಪಾತ್ರವಾದರೆ, ಧರ್ಮರಾಯನ ಗೋಪ್ರೀತಿ, ಕರುಗಳು ಹಾಲು ಕುಡಿಯದೆ ನೀರನ್ನೂ ಸಹ ಸೇವಿಸದ ನಡೆ ಎಲ್ಲರಿಗೂ ತಿಳಿದದ್ದೇ. ಅದರಿಂದಲೇ ಗೋವುಗಳನ್ನು ಅಪಹರಿಸಿದರೆ ಪಾಂಡವರು ಸುಮ್ಮನೇ ಕೂರಲಾರರು ಎಂಬುದು ದುರ್ಯೋಧನನ ಲೆಕ್ಕಾಚಾರ!

ತಮ್ಮ ಅಜ್ಞಾತ ಇರವಿನಿಂದ ವಿರಾಟ ದೇಶವನ್ನು ಸುಭಿಕ್ಷವನ್ನಾಗಿಸಿದ ಪಾಂಡವರ ಒಂದು ವರ್ಷದ ಚರಿತದ ಪಠಣ,
ನಮ್ಮ ಪರಿಸರದಲ್ಲೂ ಮಳೆ, ಬೆಳೆ, ಸಮೃದ್ಧಿ ನೀಡಲಾರದೆ? ಎಂಬ ಹಿತವಾದ ಸಾತ್ವಿಕ ನಂಬುಗೆ ವಿರಾಟ ಪರ್ವದ ಪಾರಾಯಣದ ಹಿಂದಿನ ಪ್ರೇರಣೆ ಇರಬಹುದಲ್ಲವೇ?

ಕುಮಾರವ್ಯಾಸ ಪ್ರತಿಷ್ಠಾನ
೨೮/೯/೨೦೧೬
#

2 comments:

  1. I HAVE ALSO HEARD ABT THIS. IN MY NATIVE ALSO, OUR ELDERS USED TO ARRANGE FOR PAARAYANA OF VIRAT PARVA.

    ReplyDelete
  2. I HAVE ALSO HEARD ABT THIS. IN MY NATIVE ALSO, OUR ELDERS USED TO ARRANGE FOR PAARAYANA OF VIRAT PARVA.

    ReplyDelete