Wednesday, September 28, 2016

ಐಸಲೇ ಕುಮಾರವ್ಯಾಸ!! -೩೪-

ವಿರಾಟ ಪ ೫-೨೦

' ಕುಣಿಸಿ ನಗನೇ?......'

ಕಾವ್ಯದ ಆರಂಭದಲ್ಲಿ ತನ್ನ ಬಗ್ಗೆ ಹೇಳಿಕೊಳ್ಳುತ್ತಾ 'ಕುಣಿಸಿ ನಗನೇ ಕವಿ ಕುಮಾರವ್ಯಾಸ ಉಳಿದವರ' ಎಂದಿದ್ದಾನೆ. ಅದು ಆತ್ಮ ಪ್ರಶಂಸೆಗಾಗಿ ಅಲ್ಲ; ಆತ್ಮ ವಿಶ್ವಾಸದಿಂದ. ಕಾವ್ಯದ ಒಳಗೆ ಕುಮಾರವ್ಯಾಸ ಕುಣಿಸಿ ನಗಿಸುವ, ಹಿತವಾದ ಹಾಸ್ಯ-ವ್ಯಂಗ್ಯದಿಂದ 'ಐಸಲೇ' ಎನಿಸುವ ಹಲವು ಪ್ರಸಂಗಗಳಿವೆ.ಅದರಲ್ಲಿ ಇದೂ ಒಂದು!

'ಆರೊಡನೆ ಕಾದುವೆನು?
ಕೆಲಬರು ಹಾರುವರು
ಕೆಲರಂತಕನ ನೆರೆಯೂರವರು
ಕೆಲರಧಮ ಕುಲದಲಿ ಜನಿಸಿ ಬಂದವರು
ವೀರರೆಂಬವರಿವರು ಮೇಣಿನ್ನಾರ ಹೆಸರುಂಟು?
ಅವರೊಳೆಂದು ಕುಮಾರ
ನೆಣಗೊಬ್ಬಿನಲಿ ನುಡಿದನು
ಹೆಂಗಳಿದಿರಿನಲಿ'

ಪಾಂಡವರನ್ನು ಅಜ್ಞಾತ ವಾಸದ ಅವಧಿಯೊಳಗೇ ಪತ್ತೆಮಾಡುವ ಉದ್ದೇಶದಿಂದ ಕೌರವರ ಸೇನೆ ವಿರಾಟನ ಗೋವುಗಳನ್ನು ಅಪಹರಿಸಿದೆ. ಯುದ್ಧಕ್ಕೆ ಹೋಗದೆ ಅರಮನೆಯಲ್ಲಿ ಉಳಿದಿದ್ದು ಓಲಗ  ನಡೆಸುತ್ತಿರುವ ವೀರ ಉತ್ತರನಿಗೆ ದೂತರು ಸುದ್ದಿ ಮುಟ್ಟಿಸುತ್ತಾರೆ.

ಗೋವುಗಳನ್ನು ಅಪಹರಿಸಿದ ಕೌರವರನ್ನು ಯಾವ ವೀರನಿಗೂ ಕಡಿಮೆಯಿಲ್ಲದಂತೆ  ತಿರಸ್ಕಾರದಿಂದ ಹಂಗಿಸುತ್ತ ತನ್ನ ಸುರಕ್ಷಿತ ಓಲಗದಲ್ಲಿ ಬಡಬಡಿಸುವ ರೀತಿಯನ್ನು ನೋಡಿ:

. ಕೌರವ ತನ್ನನ್ನು ಯಾರೆಂದು ತಿಳಿದಿದ್ದಾನೆ? ಬಡ ಯುಧಿಷ್ಠಿರನೆಂದು ಬಗೆದನೇ?  ಯಮನ ಮೀಸೆಯನ್ನು ಮುಟ್ಟುವ ಸಾಹಸವೇ ದುರ್ಯೋಧನನಿಗೆ?ಭೈರವನ ದವಡೆಯನ್ನು ಅಲುಗಿಸಿದನೆ? ಕೇಸರಿಯನ್ನು ಕೆಣಕಿದನೇನು? ಒಟ್ಟಿನಲ್ಲಿ ಕೌರವ ಯಾರದೋ ಮಾತು ಕೇಳಿ ತನ್ನನ್ನು ಕೆಣಕಿ ಮರುಳಾದ!

ಅಷ್ಟಕ್ಕೇ ನಿಲ್ಲಿಸಿದನೆ? ಕೌರವ ವೀರರನ್ನು ತನ್ನ ಸಮಕ್ಕೆ ತೂಗಿ ನೋಡಿದ!

'ನಾನು ಯಾರೊಡನೆ ಕಾದಾಡಲಿ? ಸಮಬಲರು ಯಾರಾದರೂ ಇದ್ದಾರೆಯೇ? ಇಲ್ಲ. ಕೆಲವರು ಹಾರುವರು (ಬ್ರಾಹ್ಮಣರು-ದ್ರೋಣ,ಕೃಪ,ಅಶ್ವತ್ಥಾಮ ಇತ್ಯಾದಿ)ಅವರೊಡನೆ ಏನು ಕಾದುವುದು? ಕೆಲವರು ಈಗಾಗಲೇ ಯಮಪುರಿಯ  ಹತ್ತಿರದ ಊರಿನಲ್ಲಿದ್ದಾರೆ!( ಭೀಷ್ಮ ಮೊದಲಾದ ವೃದ್ಧರು) ಅವರನ್ನು ಕೊಲ್ಲುವುದು ಅತಿಶಯವೇ? ಕೆಲವರು ಹೀನ ಕುಲದಲ್ಲಿ ಹುಟ್ಟಿದವರು ((ಕರ್ಣ ಮೊದಲಾದವರು)
ದುರ್ಯೋಧನನ ಕಡೆಯ ವೀರರ ಪಟ್ಟಿ ಇಷ್ಟೇ! ಇನ್ಯಾರಿದ್ದಾರೆ ಹೇಳಿ ? ಇಂಥವರನ್ನು ಕೂಡಿಕೊಂಡು ತನ್ನನ್ನು ಎದುರಿಸಲು ಬಂದ ದುರ್ಯೋಧನ ಮೂರ್ಖನಲ್ಲದೆ  ಮತ್ತ್ಯಾರು?'
ಕುಮಾರವ್ಯಾಸ ಒಂದು ಮಾತನ್ನೂ ಸೇರಿಸುತ್ತಾನೆ; ಸುಕುಮಾರನಾದ ಉತ್ತರಕುಮಾರ  ನೆಣಗೊಬ್ಬಿನಲ್ಲಿ(ಹೆಚ್ಚಿದ ಕೊಬ್ಬು!) ನುಡಿದನಂತೆ,ಎಲ್ಲಿ? ಹೆಂಗಳೆಯರ ಎದುರಿನಲ್ಲಿ!

'ಹಾರುವರು,ಅಂತಕನ ನೆರೆಯೂರವರು' ಕವಿಯ ಟಂಕಸಾಲೆಯಲ್ಲಿ ವಿಶೇಷವಾಗಿ ಮುದ್ರಿತವಾದ ನಾಣ್ಯಗಳು!

ಕುಮಾರವ್ಯಾಸ ಪ್ರತಿಷ್ಠಾನ
೨೭/೯/೨೦೧೬

#

No comments:

Post a Comment