Sunday, September 4, 2016

ಐಸಲೇ ಕುಮಾರವ್ಯಾಸ!! -೨೩-

ಆದಿ ಪ ೧-೯

ಗೌರಿ ಹಬ್ಬದ ಶುಭಾಶಯಗಳು.

ಕುಮಾರವ್ಯಾಸನಿಗೆ ಶ್ರೀಕೃಷ್ಣನಷ್ಟೇ ಶಿವನೂ ಪ್ರಿಯ. ಹಾಗೆ ಗೌರಿ ಸಹಾ. ಗ್ರಂಥದ ಆರಂಭದ ದೇವಿಸ್ತುತಿಯೇ  ಸರಳ ಸುಂದರ ಭಕ್ತಿಗೀತೆಯಂತಿದೆ

' ಗಜಮುಖನ ವರಮಾತೆ ಗೌರಿಯೇ,
ತ್ರಿಜಗದರ್ಚಿತ ಚಾರು ಚರಣಾಂಬುಜೆಯೇ,
ಪಾವನ ಮೂರ್ತಿ
ಪದ್ಮಜಮುಖ್ಯ ಸುರಪೂಜ್ಯೆ,
ಭಜಕರಘಸಂವರಣೆ
ಸುಜನವ್ರಜ ಸುಸೇವಿತೆ
ಮಹಿಷಮರ್ದಿನೀ,
ಭುಜಗ ಭೂಷಣನರಸಿ
ಕೊಡು ಕಾರುಣ್ಯ ಸಂಪದವ'

(ಹೇ ಗೌರಿ, ಮೂರೂ ಲೋಕದಲ್ಲಿ ಪೂಜಿಸುವ ಪಾದ ಪದ್ಮವುಳ್ಳವಳೆ,ಬ್ರಹ್ಮಮೊದಲಾದ ದೇವತೆಗಳಿಂದ ಪೂಜಿತಳೆ,
ಭಕ್ತರ ಪಾಪಗಳನ್ನೂ ನಾಶ ಮಾಡುವವಳೇ,ಪರಶಿವನ ಮಡದಿ,ಕಾರುಣ್ಯ ಸಂಪದವನ್ನು ಕೊಡು)

ಕುಮಾರವ್ಯಾಸನ ಸ್ತುತಿಯಲ್ಲಿ, ಭಕ್ತಿಯಷ್ಟೇ ಮುಟ್ಟಿ ಮಾತಾಡಿಸುವ ಸಲುಗೆಯನ್ನುಕಾಣುತ್ತೇವೆ'

ಕಿರಾತಾರ್ಜುನ ಪ್ರಸಂಗದಲ್ಲಿ ( ಅರಣ್ಯ ಪರ್ವ ಸಂಧಿ ೬ )ಅರ್ಜುನನಿಗೆ ಅಂಜಲಿಕಾಸ್ತ್ರವನ್ನು ಕೊಡುವ ದೇವಿಯ ನುಡಿಯನ್ನು ಕೇಳಿ;

'ಕಂಜನಾಭನ ಮೈದುನನೆ ಬಾ,
ಅಂಜದಿರು, ನಿನಗೆ
ಆಂತ ರಿಪುಗಳ ಭಂಜಿಸುವ ಅಂಜನಾಸ್ತ್ರವನಿತ್ತೆ
ಮಗನೆ ಧನಂಜಯನೇ ನಿನಗೆನುತ,
ಕರುಣದಿ ಮಂಜುಳಾ ರವದಿಂದ
ತಚ್ಛಸ್ತ್ರವನು ಬೆಸಸಿದಳು'

ಸ್ತ್ರೀಯರಿಗೆ, ಸಂಬಂಧಗಳಲ್ಲಿ ಎಲ್ಲಿಲ್ಲದ ಒಲವು! ತನ್ನಣ್ಣ ನಾರಾಯಣನ ಮೈದುನ ಅರ್ಜುನ. ಆ ಪ್ರೀತಿ ಕಂಜನಾಭನ ಮೈದುನನೆ ಬಾ ಎಂಬ ಮಾತಿನಲ್ಲಿ ಅಡಕವಾಗಿದೆ!

ಮಂಜುಳಕರವಾದ ವಾಣಿಯಿಂದ ಆ ಅಸ್ತ್ರವನ್ನು ಕರೆದಳಂತೆ.ಅರ್ಜುನನಿಗೆ ಅದರ ಮಂತ್ರೋಪದೇಶವನ್ನು ಸಹಾ ಮಾಡುತ್ತಾಳೆ.ಅಷ್ಟೇ ಅಲ್ಲ, ಶಿವ ಪಾರ್ವತಿಯರಿಬ್ಬರೂ ಅರ್ಜುನನನ್ನು ಅಪ್ಪಿಕೊಂಡು,'ಗೆಲು ನೀ ಧುರದೊಳಹಿತರನೆಂದು ಹರಸಿದರಾ ಧನಂಜಯನ'

ದೇವಿ ನಮ್ಮೆಲ್ಲರನ್ನೂ ಹರಸಲಿ!

ಕುಮಾರವ್ಯಾಸ ಪ್ರತಿಷ್ಠಾನ
೪/೯/೨೦೧೬

No comments:

Post a Comment