Saturday, September 24, 2016

ಐಸಲೇ ಕುಮಾರವ್ಯಾಸ!! -೩೩-

ದ್ರೋಣ ಪ ೬-೬೧

'ಅರಸುಗಳಿಗಿದು ವೀರ..,'

ಒಂದು ದಿನದ ಯುದ್ಧದಲ್ಲಿ ಇಡೀ ಕೌರವ ಸೇನೆಯ ಮಹಾರಥರು ಕಂಗೆಟ್ಟು ಹೋಗುವಂತೆ ಮಾಡಿದ ಅಭಿಮನ್ಯುವನ್ನು ಮಣಿಸಲು ದ್ರೋಣರಾದಿಯಾಗಿ ಎಲ್ಲರೂ ಅಧರ್ಮಯುದ್ಧವನ್ನು ಆಶ್ರಯಿಸಬೇಕಾಗುತ್ತದೆ
.
'ರೂಪುದೋರದೆ ಬಂದು' ಕರ್ಣ ಮೊದಲು  ಬಿಲ್ಲನ್ನು ಕತ್ತರಿಸುತ್ತಾನೆ. ಅನಂತರ ಕತ್ತಿಯಿಂದ, ಅದು ಮುರಿದ ಮೇಲೆ ಗದೆಯಿಂದ  ಹೋರಾಡುವ ಅಭಿಮನ್ಯುವಿನ ಕೈಗಳನ್ನು ಕತ್ತರಿಸುತ್ತಾನೆ; ಇಂಥಾ ಸ್ಥಿತಿಯಲ್ಲಿ ಎಲ್ಲಾ ಮಹಾರಾಥರೂ ಅವನ ಮೇಲೆ ಮುಗಿ ಬೀಳುತ್ತಾರೆ.

ಮುಂಗೈಗೆ ರಥದ ಗಾಲಿಯೊಂದನ್ನು ಸೇರಿಸಿಕೊಂಡು ಎಲ್ಲರಮೇಲೆ ಎರಗಿ ಹೋದ ಕುಮಾರನನ್ನು ದುಶ್ಶಾಸನನ ಮಗ ಕತ್ತಿಯಿಂದ ತಿವಿದು ಕೊಲ್ಲುತ್ತಾನೆ ಅಲ್ಲದೆ ಸಾಯುವಾಗ ಸಹ ಛಲ ಬಿಡದೆ ದುಶ್ಶಾಸನನ ಮಗನನ್ನೂ  ಬಲಿ ತೆಗೆದುಕೊಂಡು ಭೂಮಿಗೆ ಒರಗುತ್ತಾನೆ.

ಕವಿ ಹೇಳುತ್ತಾನೆ,ಅಡವಿಯಲ್ಲಿ ಹೊತ್ತಿದ ಕಿಚ್ಚು ಎಲ್ಲವನ್ನೂ ದಹಿಸಿ ತಗ್ಗುತ್ತದೆಯಲ್ಲ?ಹಾಗೆ; ಮೋಡಗಳನ್ನ ತರಗೆಲೆಯಂತೆ ಅಟ್ಟಾಡಿಸಿದ ಸುಂಟರಗಾಳಿ ತಗ್ಗಿದ ಹಾಗೆ, 'ಸುರಪಾಲ ತನಯನ ತನಯ ಅಸ್ತಮಿಸಿದನು ರಣದೊಳಗೆ!'

ಕವಿಗಷ್ಟೇ ಅಲ್ಲ ನಮಗೂ ಅನ್ನಿಸುತ್ತದೆ; 'ಹಲವು ಗಜಗಳು ಸಿಂಹ ಶಿಶುವನು ಗೆಲಿದಂತಾಯ್ತು'.

ರಣಾಂಗಣದಲ್ಲಿ ಅಂತಿಮವಾಗಿ ನೆಲಕ್ಕೊರಗಿದ ಅಭಿಮನ್ಯುವಿಗೆ ಕುಮಾರವ್ಯಾಸ ಪದ್ಯದ ಮೂಲಕ ಕೊಡುವ ಪರಮವೀರ ಪ್ರಶಸ್ತಿಯನ್ನು ನೋಡಿ;

'ತೋಳ ತಲೆದಿಂಬಿನಲಿ,
ಕೈದುಗಳೋಳಿಗಳ ಹಾಸಿನಲಿ,
ತನ್ನಯ ಕಾಲ ದೆಸೆಯಲಿ ಕೆಡೆದ ಕೌರವತನಯ ನೂರ್ವರಲಿ,
ಬಾಲಕನು ಬಳಲಿದನು,
ಸಮರದ ಲೀಲೆಯಲಿ ಕುಣಿಕುಣಿದು
ಆಳುಗಳ ದೇವನು ಮಹಾಹವದೊಳಗೆ ಪವಡಿಸಿದ"

ಅಭಿಮನ್ಯು ಗತಿಸಿದ ಎನ್ನಲು ಕುಮಾರವ್ಯಾಸನಿಗೆ ಬಾಯಿ ಬರುತ್ತಿಲ್ಲ. ದಿನವೆಲ್ಲಾ  ಕುಣಿದು ದಣಿದ ಮಗುವೊಂದು ಮಲಗಿದ ಹಾಗೆ ಪವಡಿಸಿದ್ದಾನಂತೆ!
ತೋಳನ್ನೇ ತಲೆದಿಂಬು ಮಾಡಿಕೊಂಡು,ಆಯುಧಗಳ ಹಾಸಿಗೆಯ ಮೇಲೆ ವೀರರಲ್ಲಿ  ಮೊದಲಿಗ  ಪವಡಿಸಿದ್ದಾನೆ. ಅಪ್ರತಿಮ ಹೋರಾಟಕ್ಕೆ ಅವನಿಗೆ ದೊರೆತ ಪ್ರಶಸ್ತಿಯ ದ್ಯೋತಕ  ಅವನ ಕಾಲ ಬಳಿ  ಇದೆ. ಏನದು? ಸತ್ತು ಬಿದ್ದಿರುವ ದುರ್ಯೋಧನನ ನೂರು ಜನ ಮಕ್ಕಳು!

ಕುಮಾರವ್ಯಾಸಸಾಗರದ ಮುತ್ತುಗಳಲ್ಲೊಂದು!

ಕುಮಾರವ್ಯಾಸ ಪ್ರತಿಷ್ಠಾನ
೨೫/೯/೨೦೧೬
#


No comments:

Post a Comment